ಬೆಂಗಳೂರು: ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗಣನೀಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಎಂ.ಇಬ್ರಾಹಿಂ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮುಂದಿನ ನಡೆ ಕುತೂಹಲ ಕೆರಳಿಸಿದೆ.
ದೇವೇಗೌಡರ ನಿವಾಸದಲ್ಲಿ ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಇಬ್ರಾಹಿಂ, ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸೋಲಿನ ನೈತಿಕ ಹೊಣೆಯನ್ನು ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು.
ಇದನ್ನೂ ಓದಿ: ಹಾಲಿನ ಮತ್ತೊಂದು ಬ್ರ್ಯಾಂಡ್ಗೂ ಅಮುಲ್ ಆತಂಕ; ಎಲ್ಲಿ, ಯಾವುದು?
ನಮ್ಮ ಚುನಾವಣಾ ಸಮಾವೇಶಗಳಿಗೆ ಜನ ಸೇರಿದ್ದರೂ ಅದನ್ನು ಮತವಾಗಿ ಪರಿವರ್ತಿಸಲು ನಮ್ಮ ಸ್ಥಳೀಯ ಮುಖಂಡರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ನಮ್ಮ ಅಭ್ಯರ್ಥಿಗಳ ಮತ ಗಳಿಕೆ ಕ್ಷೀಣಿಸಿತು. 15-20 ಕ್ಷೇತ್ರಗಳಲ್ಲಿ 2 ಸಾವಿರ ಮತಗಳ ಅಂತರದಿಂದ ಸೋತಿದ್ದೇವೆ. ಅದಾಗ್ಯೂ ರಾಜ್ಯದಲ್ಲಿ ಜೆಡಿಎಸ್ 60 ಲಕ್ಷ ಮತಗಳನ್ನು ಪಡೆದಿದೆ. ಆದರೆ ಬಿಜೆಪಿ ವಿರೋಧಿ ಅಲೆಯ ಲಾಭ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ ಎಂದ ಇಬ್ರಾಹಿಂ, ಮುಂದೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತೇವೆ ಎಂದರು.
ಇದನ್ನೂ ಓದಿ: ಈ ಸಲ ನಡೆಯಲ್ವಾ ಟಿಪ್ಪು ಜಯಂತಿ?: ಕುತೂಹಲ ಕೆರಳಿಸಿದೆ ಜಯಂತಿಗಳ ಪಟ್ಟಿ
ಕಳೆದ ವರ್ಷ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಅವಿರೋಧವಾಗಿ ನೇಮಿಸಲಾಗಿತ್ತು. ಅಲ್ಲದೆ ಈ ಸಲದ ಚುನಾವಣೆಯಲ್ಲಿ ಜೆಡಿಎಸ್ ಕೇವಲ 19 ಸ್ಥಾನಗಳನ್ನು ಗಳಿಸಿದ್ದರಿಂದ ಎಚ್.ಡಿ.ಕುಮಾರಸ್ವಾಮಿ ಮತ್ತೆ ಸಿಎಂ ಆಗುವ ಕನಸು ನನಸಾಗಲಿಲ್ಲ. ಈ ಹಿನ್ನೆಲೆಯಲ್ಲಿ ಇಬ್ರಾಹಿಂ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಪೂಜೆಯಿಂದಾಗಿ ಪ್ರಾಣಾಪಾಯದಿಂದ ಪಾರಾದ ಉದ್ಯಮಿ!; ಆಗಿದ್ದೇನು?
ಕಾಂಗ್ರೆಸ್ನಲ್ಲೇ ಇದ್ದಿದ್ದರೆ ಸಚಿವ ಸ್ಥಾನ ಸಿಗುತ್ತಿತ್ತು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಗೌರವ ಇಲ್ಲದ ಕಡೆ ನಾನು ಇರಲ್ಲ. ಸ್ಥಾನಕ್ಕಾಗಿ ಬಂದಿಲ್ಲ, ಮಾನಕ್ಕಾಗಿ ಬಿಟ್ಟು ಬಂದೆ, ನನಗೆ ಅಧಿಕಾರದ ಆಸೆ ಇಲ್ಲ ಎಂದರು. ಅಲ್ಲದೆ ಹೊಸ ಸರ್ಕಾರಕ್ಕೆ ಶುಭವಾಗಲಿ. ನೂತನ ಮುಖ್ಯಮಂತ್ರಿಗೆ ಒಳ್ಳೆಯದಾಗಲಿ, ಅವರು ಕೊಟ್ಟ ಭರವಸೆ ಈಡೇರಿಸಲಿ ಎಂದೂ ಹೇಳಿದರು. ಇಬ್ರಾಹಿಂ ನೀಡಿದ್ದ ರಾಜೀನಾಮೆಯನ್ನು ದೇವೇಗೌಡರು ಇನ್ನೂ ಸ್ವೀಕರಿಸಿಲ್ಲ ಎನ್ನಲಾಗಿದೆ. ಹೀಗಾಗಿ ದೇವೇಗೌಡರ ಮುಂದಿನ ನಡೆ ಕುತೂಹಲ ಮೂಡಿಸಿದೆ.
ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?