ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ನಿರ್ಧಾರವನ್ನು ಮೇ 19ರಂದು ಘೋಷಿಸಿದ್ದು, ಆ ನೋಟುಗಳನ್ನು ಬದಲಿಸಿಕೊಳ್ಳುವ ಪ್ರಕ್ರಿಯೆ ಇಂದು ಆರಂಭಗೊಂಡಿದೆ. ಆದರೆ ಈ ಮಧ್ಯೆ ಆರ್ಬಿಐ ವಿರುದ್ಧ ಬಿಜೆಪಿಯ ಮುಖಂಡರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಬಿಜೆಪಿ ಮುಖಂಡ ಹಾಗೂ ವಕೀಲರೂ ಆಗಿರುವ ಅಶ್ವಿನಿಕುಮಾರ್ ಉಪಾಧ್ಯಾಯ ದೆಹಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಇಂದು ಈ ಅರ್ಜಿ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ತೀರ್ಪನ್ನು ಕಾದಿರಿಸಿದೆ. ಅರ್ಜಿಗೆ ಸಂಬಂಧಿಸಿದಂತೆ ಸೂಕ್ತ ಆದೇಶ ಹೊರಡಿಸುವುದಾಗಿ ಹೈಕೋರ್ಟ್ ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಸತೀಶ್ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಹೇಳಿದ್ದಾರೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಯುವನಿಧಿ: ಆದೇಶ ಮಾಡೇಬಿಟ್ಟ ಸರ್ಕಾರ; ಈ ಗ್ಯಾರಂಟಿಗೆ ಷರತ್ತುಗಳೇನು?
ಎರಡು ಸಾವಿರ ರೂಪಾಯಿ ನೋಟು ಹಿಂಪಡೆ ಅಧಿಸೂಚನೆಗೆ ಸಂಬಂಧಿಸಿದಂತೆ ಪಿಐಎಲ್ ಸಲ್ಲಿಸಿರುವ ಅಶ್ವಿನಿಕುಮಾರ್, ನೋಟು ಹಿಂಪಡೆಯನ್ನೇ ಸಂಪೂರ್ಣವಾಗಿ ವಿರೋಧಿಸಿಲ್ಲ. ಬದಲಿಗೆ ಅಧಿಸೂಚನೆಯಲ್ಲಿನ ಕೆಲ ಅಂಶಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಿದ್ದಾರೆ. ಅದರಲ್ಲೂ ಯಾವುದೇ ಅರ್ಜಿ ಅಥವಾ ಗುರುತು ಪತ್ರ ನೀಡದೆ ನೋಟು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿದ್ದರ ವಿರುದ್ಧ ಆಕ್ಷೇಪವನ್ನೆತ್ತಿದ್ದಾರೆ. ಇದೇ ಮೊದಲ ಬಾರಿಗೆ ಜನರು ಬ್ಯಾಂಕ್ಗೆ ಬಂದು ಯಾವುದೇ ಪ್ರೂಫ್ ನೀಡದೆ ನೋಟು ಬದಲಿಸಿಕೊಳ್ಳುತ್ತಿದ್ದಾರೆ. ಗ್ಯಾಂಗ್ಸ್ಟರ್ ಮತ್ತು ಮಾಫಿಯಾಗಳ ಕಡೆಯವರೂ ತಮ್ಮವರ ಬಳಿ 2 ಸಾವಿರದ ನೋಟುಗಳನ್ನು ಕಳಿಸಿ ವಿನಿಮಯ ಮಾಡಿಕೊಳ್ಳಬಹುದಾಗಿದೆ ಎಂದು ಅಶ್ವಿನಿಕುಮಾರ್ ಅರ್ಜಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಅಂದು ‘ತಪ್ಪಾಯ್ತು ಕ್ಷಮಿಸಿ’ ಎಂದು ಕೈಮುಗಿದು ಕೇಳಿ ಇಂದು ಮತ್ತದೇ ತಪ್ಪು ಮಾಡಿದ ಜಮೀರ್ ಅಹಮದ್!
ಎರಡು ಸಾವಿರ ರೂ. ಮುಖಬೆಲೆಯ ನೋಟುಗಳ ಚಲಾವಣೆಯ ಒಟ್ಟು ಪ್ರಮಾಣ 6.73 ಲಕ್ಷ ಕೋಟಿ ರೂಪಾಯಿಯಿಂದ 3.62 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ. ಇದರಲ್ಲಿ 3.11 ಲಕ್ಷ ಕೋಟಿ ರೂಪಾಯಿಯಷ್ಟು ನೋಟುಗಳು ವೈಯಕ್ತಿಕ ಲಾಕರ್ ತಲುಪಿವೆ, ಇಲ್ಲವೇ ಪ್ರತ್ಯೇಕತಾವಾದಿಗಳು, ಭಯೋತ್ಪಾದಕರು, ಮಾವೋವಾದಿಗಳು, ಮಾದಕವಸ್ತು ಕಳ್ಳಸಾಗಣೆದಾರರು, ಗಣಿ ಮಾಫಿಯಾಗಳು ಮತ್ತು ಭ್ರಷ್ಟರು ಸಂಗ್ರಹಿಸಿದ್ದಾರೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದ್ದನ್ನೇ ಬೊಟ್ಟು ಮಾಡಿ ಅಶ್ವಿನಿಕುಮಾರ್ ಈ ಪಿಐಎಲ್ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮತ್ತೊಂದು ನಿರ್ಧಾರ; ಇದು ಎಲ್ಲ ಕಡೆಗೂ ಅನ್ವಯ ಎಂದ ಸಿಎಂ