More

    45ರ ಶಿಕ್ಷಕಿ 25ರ ಯುವಕನ ನಡುವೆ ಮಿಸ್​ಕಾಲ್​ನಿಂದ ಶುರುವಾದ ಸಂಬಂಧ ಇಬ್ಬರ ಸಾವಿನೊಂದಿಗೆ ಅಂತ್ಯ!

    ಹೈದರಾಬಾದ್​: 45 ವರ್ಷದ ಶಿಕ್ಷಕಿ ಮತ್ತು 25 ವರ್ಷದ ಯುವಕನ ನಡುವೆ ಒಂದು ಮಿಸ್​ಕಾಲ್​ನಿಂದ ಶುರುವಾದ ಪರಿಚಯ ವಿವಾಹೇತರ ಸಂಬಂಧಕ್ಕೆ ತಿರುಗಿ, ಕೊನೆಗೆ ಇಬ್ಬರ ಸಾವಿನಿಂದ ಸಂಬಂಧ ಅಂತ್ಯವಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

    ಶಿಕ್ಷಕಿ ಮತ್ತು ಯುವಕ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಯುವಕನ ಹೆಸರು ರಾಜೇಶ್​. ಈತ ಮುಳುಗು ಜಿಲ್ಲೆಯ ಪಂಚೋತಕುಲಪಲ್ಲಿಯ ನಿವಾಸಿ. ಶಿಕ್ಷಕಿಯ ಹೆಸರು ಸುಜಾತ. ಈಕೆ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದು, ಗಂಡ ಮತ್ತು ಇಬ್ಬರು ಮಕ್ಕಳೊಂದಿಗೆ ಹಯಾತ್​ ನಗರದಲ್ಲಿ ವಾಸವಿದ್ದರು. ಇಬ್ಬರು ಮೇ 29ರಂದು ಹಯಾತ್​ನಗರ ಸಮೀಪದ ಕುಂಟ್ಲೂರು ಬಳಿಕ ಶವವಾಗಿ ಪತ್ತೆಯಾಗಿದ್ದರು.

    ಇದನ್ನೂ ಓದಿ: ಹೈಕೋರ್ಟ್​ ನಿವೃತ್ತ ಜಡ್ಜ್​ ನೇತೃತ್ವದಲ್ಲಿ ಮಣಿಪುರ ಹಿಂಸಾಚಾರ ಪ್ರಕರಣದ ತನಿಖೆ: ಅಮಿತ್​ ಷಾ ಹೇಳಿಕೆ

    ಮದುವೆ ವಿಚಾರ ಮುಚ್ಚಿಟ್ಟ ಶಿಕ್ಷಕಿ

    ಸುಮಾರು ಒಂದೂವರೆ ವರ್ಷಗಳ ಹಿಂದೆ ರಾಜೇಶ್​ ಫೋನ್​ಗೆ ಒಂದು ಮಿಸ್​ ಕಾಲ್​ ಬಂತು. ಆ ಕಾಲ್​ ಮಾಡಿದ್ದು ಶಿಕ್ಷಕಿ ಸುಜಾತ. ಮಿಸ್​ ಕಾಲ್​ ನೋಡಿ ವಾಪಸ್​ ಕರೆ ಮಾಡಿದಾಗ ರಾಜೇಶ್​ ಮತ್ತು ಸುಜಾತ ನಡುವೆ ಪರಿಚಯವಾಗಿದೆ. ಈ ವೇಳೆ ಸುಜತಾ ತನಗೆ ಮದುವೆ ಆಗಿಲ್ಲ ಎಂದು ಹೇಳಿಕೊಂಡಿದ್ದರು. ಯುವಕನು ಕೂಡ ಮದುವೆ ಆಗಿರಲಿಲ್ಲ. ಇಬ್ಬರು ಚಾಟಿಂಗ್​ ಮಾಡಲು ಆರಂಭಿಸಿದರು.

    ವಿವಿಧೆಡೆ ಸುತ್ತಾಟ

    ಪರಸ್ಪರ ಚಾಟಿಂಗ್​ ಮಾಡುತ್ತಾ ಇಬ್ಬರ ನಡುವಿನ ಸ್ನೇಹ ಗಟ್ಟಿಯಾಗಿ ಅದು ಪ್ರೇಮಕ್ಕೆ ತಿರುಗಿತು. ನಲ್ಗೋಂಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇಬ್ಬರು ಕಾರಿನಲ್ಲಿ ಆಗಾಗ ಸುತ್ತಾಡುತ್ತಿದ್ದರು. ಪ್ರತಿ ಬಾರಿ ರಾಜೇಶ್​ನನ್ನು ಭೇಟಿಯಾದಾಗ ತನಗೆ ಮದುವೆ ಆಗಿರುವುದು ಗೊತ್ತಾಗದಂತೆ ಸುಜಾತ ಎಚ್ಚರವಹಿಸುತ್ತಿದ್ದರು. ಅಂತಿಮವಾಗಿ ರಾಜೇಶ್​ ಆಕೆಯನ್ನು ಮದುವೆಯಾಗಲು ಬಯಸಿದ. ಇದಾದ ಕೆಲವು ದಿನಗಳ ಬಳಿಕ ಸುಜಾತಗೆ ಈಗಾಗಲೇ ಮದುವೆ ಆಗಿ ಒಂದು ಗಂಡು ಮತ್ತು ಹೆಣ್ಣು ಮಗು ಇದೆ ಎಂಬ ವಿಚಾರ ರಾಜೇಶ್​ಗೆ ತಿಳಿಯಿತು. ಬಳಿಕ ಆಕೆಯನ್ನು ಮದುವೆಯಾಗೋದು ಬೇಡ ಎಂದು ನಿರ್ಧರಿಸಿ, ಅಂತರ ಕಾಯ್ದುಕೊಳ್ಳಲು ಆರಂಭಿಸಿದ. ಸುಮಾರು 2 ತಿಂಗಳವರೆಗೆ ಸುಜಾತರಿಂದ ದೂರವಾಗಿದ್ದ.

    ನಿನ್ನನ್ನು ಬಿಟ್ಟಿರಲು ಸಾಧ್ಯವಿಲ್ಲ

    ಇದನ್ನು ಸಹಿಸಲಾರದೇ ಸುಜಾತ, ರಾಜೇಶ್​ ವಾಟ್ಸ್​ಆ್ಯಪ್​ಗೆ ನಿರಂತವಾಗಿ ಮೆಸೇಜ್​ ಮಾಡುತ್ತಿದ್ದರು. ನಿನ್ನನ್ನು ಬಿಟ್ಟಿರಲು ನನ್ನಿಂದ ಸಾಧ್ಯವಿಲ್ಲ. ವಿಷ ಕುಡಿದು ಸಾಯುತ್ತೇನೆ ಎಂದು ಮೆಸೇಜ್​ ಮಾಡಿದ್ದರು. ಮೇ 24ರಂದು ಸುಜಾತ ಕೀಟನಾಶಕ ಸೇವಿಸಿದ್ದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕಳೆದ ಸೋಮವಾರ (ಮೇ 29) ಮಧ್ಯಾಹ್ನ ಅಸುನೀಗಿದಳು. ಈ ಘಟನೆ ಬಳಿಕ ಸುಜಾತಳ ಮಗ, ತಾಯಿಯ ಮೊಬೈಲ್​ನಲ್ಲಿ ವಾಟ್ಸ್​ಆ್ಯಪ್​ ಮೆಸೇಜ್​ ಅನ್ನು ಪರಿಶೀಲಿಸಿದನು. ತಾಯಿಯ ಆತ್ಮಹತ್ಯೆಗೆ ರಾಜೇಶ್​ ಕಾರಣ ಎಂಬುದು ಗೊತ್ತಾಯಿತು.

    ಇದನ್ನೂ ಓದಿ: 9 ವರ್ಷವಾದ್ರೆ ಸಾಕು ಮಕ್ಕಳು ದಿಢೀರ್​ ನಾಪತ್ತೆ: ಗದಗಿನ ಕುಟುಂಬಕ್ಕೆ ಕಾಡುತ್ತಿದೆ 9ರ ಕಂಟಕ!

    ಶಿಕ್ಷಕಿ ಪುತ್ರನ ಬಲೆ

    ಹೇಗಾದರೂ ಮಾಡಿ ರಾಜೇಶ್​ನನ್ನು ಪತ್ತೆಹಚ್ಚಬೇಕೆಂದು ಸುಜಾತ ಪುತ್ರ ತನ್ನ ಸ್ನೇಹಿತರ ಸಹಾಯವನ್ನು ಕೋರಿದನು. ಬಳಿಕ ತನ್ನ ತಾಯಿಯಂತೆ ನಟಿಸಿ ರಾಜೇಶ್‌ಗೆ ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಕಳುಹಿಸಲು ಆರಂಭಿಸಿದರು. ಇತ್ತ ರಾಜೇಶ್​ಗೆ ಮಹಿಳೆಯ ಸಾವಿನ ವಿಚಾರ ಗೊತ್ತಿರಲಿಲ್ಲ. ಇದರ ನಡುವೆ ಮೆಸೇಜ್​ ನೋಡಿದ ರಾಜೇಶ್​, ಒಂದು ನಿರ್ದಿಷ್ಟ ಸ್ಥಳದಲ್ಲಿ ಭೇಟಿಯಾಗುತ್ತೇನೆ ಎಂದು ಉತ್ತರಿಸಿದ್ದ. ಹಯಾತ್‌ನಗರದ ಕುಂಟ್ಲೂರು ರಸ್ತೆಯಲ್ಲಿರುವ ಟೀ ಸ್ಟಾಲ್‌ಗೆ ರಾಜೇಶ್ ಬಂದು ಕಾಯುತ್ತಿದ್ದ.

    ಮನನೊಂದು ಆತ್ಮಹತ್ಯೆ

    ಸುಜಾತರ ಮಗ ತನ್ನ ಸ್ನೇಹಿತರೊಂದಿಗೆ ಅಲ್ಲಿಗೆ ಬಂದು ರಾಜೇಶ್​ನನ್ನು ಡಾಕ್ಟರ್ಸ್ ಕಾಲೋನಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದನು. ತನ್ನ ತಾಯಿಯ ದುರಂತ ಸಾವಿಗೆ ನೀನೇ ಹೊಣೆ ಎಂದು ರಾಜೇಶ್ ಮೇಲೆ ಹಲ್ಲೆ ನಡೆಸಿದನು. ಆ ಘಟನೆಯಿಂದ ತೀವ್ರ ಮನನೊಂದ ರಾಜೇಶ್ ಹಯಾತ್‌ನಗರದ ಡಾಕ್ಟರ್ಸ್ ಕಾಲೋನಿಯಲ್ಲಿ ಕೀಟನಾಶಕ ಕುಡಿದು ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ರಾಜೇಶ್‌ನ ದೇಹದಲ್ಲಿ ಯಾವುದೇ ಗಾಯ ಅಥವಾ ರಕ್ತಸ್ರಾವದ ಲಕ್ಷಣಗಳಿಲ್ಲ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)​

    ಮಲೈಕಾ ಆರೋರಾ ಗರ್ಭಿಣಿ ಗಾಸಿಪ್​​; ಸುಮ್ಮನೆ ಊಹಿಸಿ ಎಲ್ಲವನ್ನೂ ಬರೆಯಬೇಡಿ ಎಂದ ಅರ್ಜುನ್​ ಕಪೂರ್​

    ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕನ ಕುಟುಂಬ: ದುಃಖದ ಮಧ್ಯೆಯೂ ಕಿಡ್ನಿ, ಲಿವರ್, ಹೃದಯ ದಾನ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts