ಹೈದರಾಬಾದ್: 45 ವರ್ಷದ ಶಿಕ್ಷಕಿ ಮತ್ತು 25 ವರ್ಷದ ಯುವಕನ ನಡುವೆ ಒಂದು ಮಿಸ್ಕಾಲ್ನಿಂದ ಶುರುವಾದ ಪರಿಚಯ ವಿವಾಹೇತರ ಸಂಬಂಧಕ್ಕೆ ತಿರುಗಿ, ಕೊನೆಗೆ ಇಬ್ಬರ ಸಾವಿನಿಂದ ಸಂಬಂಧ ಅಂತ್ಯವಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಶಿಕ್ಷಕಿ ಮತ್ತು ಯುವಕ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಯುವಕನ ಹೆಸರು ರಾಜೇಶ್. ಈತ ಮುಳುಗು ಜಿಲ್ಲೆಯ ಪಂಚೋತಕುಲಪಲ್ಲಿಯ ನಿವಾಸಿ. ಶಿಕ್ಷಕಿಯ ಹೆಸರು ಸುಜಾತ. ಈಕೆ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದು, ಗಂಡ ಮತ್ತು ಇಬ್ಬರು ಮಕ್ಕಳೊಂದಿಗೆ ಹಯಾತ್ ನಗರದಲ್ಲಿ ವಾಸವಿದ್ದರು. ಇಬ್ಬರು ಮೇ 29ರಂದು ಹಯಾತ್ನಗರ ಸಮೀಪದ ಕುಂಟ್ಲೂರು ಬಳಿಕ ಶವವಾಗಿ ಪತ್ತೆಯಾಗಿದ್ದರು.
ಇದನ್ನೂ ಓದಿ: ಹೈಕೋರ್ಟ್ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಮಣಿಪುರ ಹಿಂಸಾಚಾರ ಪ್ರಕರಣದ ತನಿಖೆ: ಅಮಿತ್ ಷಾ ಹೇಳಿಕೆ
ಮದುವೆ ವಿಚಾರ ಮುಚ್ಚಿಟ್ಟ ಶಿಕ್ಷಕಿ
ಸುಮಾರು ಒಂದೂವರೆ ವರ್ಷಗಳ ಹಿಂದೆ ರಾಜೇಶ್ ಫೋನ್ಗೆ ಒಂದು ಮಿಸ್ ಕಾಲ್ ಬಂತು. ಆ ಕಾಲ್ ಮಾಡಿದ್ದು ಶಿಕ್ಷಕಿ ಸುಜಾತ. ಮಿಸ್ ಕಾಲ್ ನೋಡಿ ವಾಪಸ್ ಕರೆ ಮಾಡಿದಾಗ ರಾಜೇಶ್ ಮತ್ತು ಸುಜಾತ ನಡುವೆ ಪರಿಚಯವಾಗಿದೆ. ಈ ವೇಳೆ ಸುಜತಾ ತನಗೆ ಮದುವೆ ಆಗಿಲ್ಲ ಎಂದು ಹೇಳಿಕೊಂಡಿದ್ದರು. ಯುವಕನು ಕೂಡ ಮದುವೆ ಆಗಿರಲಿಲ್ಲ. ಇಬ್ಬರು ಚಾಟಿಂಗ್ ಮಾಡಲು ಆರಂಭಿಸಿದರು.
ವಿವಿಧೆಡೆ ಸುತ್ತಾಟ
ಪರಸ್ಪರ ಚಾಟಿಂಗ್ ಮಾಡುತ್ತಾ ಇಬ್ಬರ ನಡುವಿನ ಸ್ನೇಹ ಗಟ್ಟಿಯಾಗಿ ಅದು ಪ್ರೇಮಕ್ಕೆ ತಿರುಗಿತು. ನಲ್ಗೋಂಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇಬ್ಬರು ಕಾರಿನಲ್ಲಿ ಆಗಾಗ ಸುತ್ತಾಡುತ್ತಿದ್ದರು. ಪ್ರತಿ ಬಾರಿ ರಾಜೇಶ್ನನ್ನು ಭೇಟಿಯಾದಾಗ ತನಗೆ ಮದುವೆ ಆಗಿರುವುದು ಗೊತ್ತಾಗದಂತೆ ಸುಜಾತ ಎಚ್ಚರವಹಿಸುತ್ತಿದ್ದರು. ಅಂತಿಮವಾಗಿ ರಾಜೇಶ್ ಆಕೆಯನ್ನು ಮದುವೆಯಾಗಲು ಬಯಸಿದ. ಇದಾದ ಕೆಲವು ದಿನಗಳ ಬಳಿಕ ಸುಜಾತಗೆ ಈಗಾಗಲೇ ಮದುವೆ ಆಗಿ ಒಂದು ಗಂಡು ಮತ್ತು ಹೆಣ್ಣು ಮಗು ಇದೆ ಎಂಬ ವಿಚಾರ ರಾಜೇಶ್ಗೆ ತಿಳಿಯಿತು. ಬಳಿಕ ಆಕೆಯನ್ನು ಮದುವೆಯಾಗೋದು ಬೇಡ ಎಂದು ನಿರ್ಧರಿಸಿ, ಅಂತರ ಕಾಯ್ದುಕೊಳ್ಳಲು ಆರಂಭಿಸಿದ. ಸುಮಾರು 2 ತಿಂಗಳವರೆಗೆ ಸುಜಾತರಿಂದ ದೂರವಾಗಿದ್ದ.
ನಿನ್ನನ್ನು ಬಿಟ್ಟಿರಲು ಸಾಧ್ಯವಿಲ್ಲ
ಇದನ್ನು ಸಹಿಸಲಾರದೇ ಸುಜಾತ, ರಾಜೇಶ್ ವಾಟ್ಸ್ಆ್ಯಪ್ಗೆ ನಿರಂತವಾಗಿ ಮೆಸೇಜ್ ಮಾಡುತ್ತಿದ್ದರು. ನಿನ್ನನ್ನು ಬಿಟ್ಟಿರಲು ನನ್ನಿಂದ ಸಾಧ್ಯವಿಲ್ಲ. ವಿಷ ಕುಡಿದು ಸಾಯುತ್ತೇನೆ ಎಂದು ಮೆಸೇಜ್ ಮಾಡಿದ್ದರು. ಮೇ 24ರಂದು ಸುಜಾತ ಕೀಟನಾಶಕ ಸೇವಿಸಿದ್ದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕಳೆದ ಸೋಮವಾರ (ಮೇ 29) ಮಧ್ಯಾಹ್ನ ಅಸುನೀಗಿದಳು. ಈ ಘಟನೆ ಬಳಿಕ ಸುಜಾತಳ ಮಗ, ತಾಯಿಯ ಮೊಬೈಲ್ನಲ್ಲಿ ವಾಟ್ಸ್ಆ್ಯಪ್ ಮೆಸೇಜ್ ಅನ್ನು ಪರಿಶೀಲಿಸಿದನು. ತಾಯಿಯ ಆತ್ಮಹತ್ಯೆಗೆ ರಾಜೇಶ್ ಕಾರಣ ಎಂಬುದು ಗೊತ್ತಾಯಿತು.
ಇದನ್ನೂ ಓದಿ: 9 ವರ್ಷವಾದ್ರೆ ಸಾಕು ಮಕ್ಕಳು ದಿಢೀರ್ ನಾಪತ್ತೆ: ಗದಗಿನ ಕುಟುಂಬಕ್ಕೆ ಕಾಡುತ್ತಿದೆ 9ರ ಕಂಟಕ!
ಶಿಕ್ಷಕಿ ಪುತ್ರನ ಬಲೆ
ಹೇಗಾದರೂ ಮಾಡಿ ರಾಜೇಶ್ನನ್ನು ಪತ್ತೆಹಚ್ಚಬೇಕೆಂದು ಸುಜಾತ ಪುತ್ರ ತನ್ನ ಸ್ನೇಹಿತರ ಸಹಾಯವನ್ನು ಕೋರಿದನು. ಬಳಿಕ ತನ್ನ ತಾಯಿಯಂತೆ ನಟಿಸಿ ರಾಜೇಶ್ಗೆ ವಾಟ್ಸ್ಆ್ಯಪ್ ಸಂದೇಶಗಳನ್ನು ಕಳುಹಿಸಲು ಆರಂಭಿಸಿದರು. ಇತ್ತ ರಾಜೇಶ್ಗೆ ಮಹಿಳೆಯ ಸಾವಿನ ವಿಚಾರ ಗೊತ್ತಿರಲಿಲ್ಲ. ಇದರ ನಡುವೆ ಮೆಸೇಜ್ ನೋಡಿದ ರಾಜೇಶ್, ಒಂದು ನಿರ್ದಿಷ್ಟ ಸ್ಥಳದಲ್ಲಿ ಭೇಟಿಯಾಗುತ್ತೇನೆ ಎಂದು ಉತ್ತರಿಸಿದ್ದ. ಹಯಾತ್ನಗರದ ಕುಂಟ್ಲೂರು ರಸ್ತೆಯಲ್ಲಿರುವ ಟೀ ಸ್ಟಾಲ್ಗೆ ರಾಜೇಶ್ ಬಂದು ಕಾಯುತ್ತಿದ್ದ.
ಮನನೊಂದು ಆತ್ಮಹತ್ಯೆ
ಸುಜಾತರ ಮಗ ತನ್ನ ಸ್ನೇಹಿತರೊಂದಿಗೆ ಅಲ್ಲಿಗೆ ಬಂದು ರಾಜೇಶ್ನನ್ನು ಡಾಕ್ಟರ್ಸ್ ಕಾಲೋನಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದನು. ತನ್ನ ತಾಯಿಯ ದುರಂತ ಸಾವಿಗೆ ನೀನೇ ಹೊಣೆ ಎಂದು ರಾಜೇಶ್ ಮೇಲೆ ಹಲ್ಲೆ ನಡೆಸಿದನು. ಆ ಘಟನೆಯಿಂದ ತೀವ್ರ ಮನನೊಂದ ರಾಜೇಶ್ ಹಯಾತ್ನಗರದ ಡಾಕ್ಟರ್ಸ್ ಕಾಲೋನಿಯಲ್ಲಿ ಕೀಟನಾಶಕ ಕುಡಿದು ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ರಾಜೇಶ್ನ ದೇಹದಲ್ಲಿ ಯಾವುದೇ ಗಾಯ ಅಥವಾ ರಕ್ತಸ್ರಾವದ ಲಕ್ಷಣಗಳಿಲ್ಲ ಎಂದು ತಿಳಿದುಬಂದಿದೆ. (ಏಜೆನ್ಸೀಸ್)
ಮಲೈಕಾ ಆರೋರಾ ಗರ್ಭಿಣಿ ಗಾಸಿಪ್; ಸುಮ್ಮನೆ ಊಹಿಸಿ ಎಲ್ಲವನ್ನೂ ಬರೆಯಬೇಡಿ ಎಂದ ಅರ್ಜುನ್ ಕಪೂರ್
ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕನ ಕುಟುಂಬ: ದುಃಖದ ಮಧ್ಯೆಯೂ ಕಿಡ್ನಿ, ಲಿವರ್, ಹೃದಯ ದಾನ..!