ಬೆಂಗಳೂರು: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ.
ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷವು ಸರ್ಕಾರ ರಚನೆಗೆ ಮುಂದಾಗಿದ್ದು, ಸಂಭಾವ್ಯ ಸಚಿವ ಸಂಪುಟದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸೇರ್ಪಡೆಯಾಗುವುದನ್ನು ತಪ್ಪಿಸಿರಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ರೈತರ ನಿಯೋಗ ಮೊರೆಯಿಟ್ಟಿದೆ.
ರೈತರ ಹಿತರಕ್ಷಿಸುವ ಕೆಲಸ ಮಾಡಬೇಕು
ರಾಜ್ಯ ರೈತ ಸಂಘಗಳ ಒಕ್ಕೂಟದ ಪದಾಧಿಕಾರಿಗಳಾದ ಕುರುಬೂರು ಶಾಂತಕುಮಾರ್, ವಿ.ಆರ್.ನಾರಾಯಣ ರೆಡ್ಡಿ, ಪಟೇಲ್ ಪ್ರಸನ್ನಕುಮಾರ್ ಮತ್ತಿತರರನ್ನು ಒಳಗೊಂಡ ನಿಯೋಗ ರಾಜಭವನದಲ್ಲಿ ರಾಜ್ಯಪಾಲರಿಗೆ ಮಂಗಳವಾರ ಭೇಟಿಯಾಗಿ ಮನವಿ ಸಲ್ಲಿಸಿತು.
ಕಬ್ಬು ಬೆಳೆಗಾರರಿಂದ ವೋಟು ಪಡೆದು ಗೆದ್ದವರು ಸರ್ಕಾರದ ಭಾಗವಾದ ನಂತರ ರೈತರ ಹಿತರಕ್ಷಿಸುವ ಕೆಲಸ ಮಾಡಬೇಕು. ಸಕ್ಕರೆ ಕಾರ್ಖಾನೆಗಳ ಮಾಲೀಕರೇ ಸಚಿವರಾದರೆ ಕಬ್ಬು ಬೆಳೆಗಾರರಿಗೆ ನ್ಯಾಯ ನೀಡುವುದಿಲ್ಲ ಎಂಬ ಸಂದೇಹ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸದ್ಯದಲ್ಲೇ ನಡೆಯಲಿದೆ ಮೇಜರ್ ಸರ್ಜರಿ!
ಮಾಲೀಕರತ್ತ ವಾಲುವುದೇ ಹೆಚ್ಚು
ಪಂಜಾಬ್, ಹರಿಯಾಣ ಮತ್ತಿತರ ರಾಜ್ಯಗಳಲ್ಲಿ ಕಬ್ಬು ಪ್ರತಿ ಟನ್ ಗೆ 3800 ರಿಂದ 4,500 ರೂ ಎಫ್ ಆರ್ ಪಿ ನಿಗದಿಪಡಿಸಿದ್ದಾರೆ. ನಮ್ಮಲ್ಲಿ 2,700 ರಿಂದ 3,000 ರೂ. ತನಕ ಸಿಗುತ್ತಿದೆ. ಹಿಂದಿನ ಸರ್ಕಾರ ಹೆಚ್ಚುವರಿಯಾಗಿ ಟನ್ ಗೆ 150 ರೂ ನಿಗದಿಪಡಿಸಿತ್ತು.
ಮಾಲೀಕರು ಕೋರ್ಟ್ಗೆ ಹೋಗಿ ತಡೆಯಾಜ್ಞೆ ತಂದಿದ್ದು, ತೆರವುಗೊಳಿಸಲು ಸಾಧ್ಯವಾಗಿಲ್ಲ. ಸಚಿವ ಸಂಪುಟದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರಿದ್ದರೆ ಕಬ್ಬು ಬೆಳೆಗಾರರಿಗಿಂತ ಮಾಲೀಕರತ್ತ ವಾಲುವುದೇ ಹೆಚ್ಚು ಎಂದು ನಿಯೋಗ ನಿವೇದಿಸಿಕೊಂಡಿದೆ.
ರೈತರ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಜ್ಯಪಾಲ ಗೆಹ್ಲೋತ್ ನಿಮ್ಮ ಅಹವಾಲುಗಳನ್ನು ಮುಂದಿನ ಸರ್ಕಾರದ ಗಮನಕ್ಕೆ ತರುವ ಆಶ್ವಾಸನೆ ನೀಡಿದ್ದಾರೆ.