ಚೆನ್ನೈ: ತನ್ನ ಮಾಲೀಕರ ಮೇಲೆ ಹಲ್ಲೆಗೆ ಯತ್ನಿಸಿದ ದುಷ್ಕರ್ಮಿಗಳ ವಿರುದ್ಧ ಹೋರಾಡಿ ಶ್ವಾನ ಒಂದು ಪ್ರಾಣ ಬಿಟ್ಟಿರುವ ಘಟನೆ ತಮಿಳುನಾಡಿನ ಮಿಂಜೂರಿನಲ್ಲಿ ನಡೆದಿದೆ.
ಮಾಲೀಕ ಭುವನೇಶ್ವರ್ ರಕ್ಷಣೆಗೆ ನಿಂತ ಶ್ವಾನದ ಕತ್ತು ಸೀಳಿ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಕರಣ ಸಂಬಂಧ ಶಂಕರ್(23), ಪ್ರಭಾಕರನ್(22), ರೋಹಿತ್(22) ಎಂಬುವವರನ್ನು ಬಂಧಿಸಲಾಗಿದ್ದು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಹಳೇ ವೈಷಮ್ಯ
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ಭುವನೇಶ್ವರ್ ಅವರ ಸ್ನೇಹಿತ ಕಿರಣ್ ಎಂಬುವವರ ಮೇಲೆ ಬಂಧಿತ ಆರೋಪಿಗಳು ಹಲ್ಲೆ ನಡೆಸಿದ್ದರು. ಈ ವೇಳೆ ದೂರುದಾರ ಮಧ್ಯಪ್ರವೇಶಿಸಿ ಜಗಳವನ್ನು ಬಿಡಿಸಿ ಕಳುಹಿಸಿದ್ದರು.
ಇದಕ್ಕೆ ಕುಪಿತಗೊಂಡಿದ್ದ ಆರೋಪಿಗಳು ಭುವನೇಶ್ವರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಸ್ಥಳೀಯರು ಗಾಯಾಳುವನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ ಭುವನೇಶ್ವರ್ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: VIDEO| ಉಪ್ಪು ಕದಿಯಲು 10 ಲಕ್ಷ ರೂ. ಮೌಲ್ಯದ ಕಾರಿನಲ್ಲಿ ಬಂದ ಖದೀಮರು
ಕತ್ತು ಸೀಳಿ ಹತ್ಯೆ
ತಮ್ಮ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿರುವುದನ್ನು ತಿಳಿದ ಆರೋಪಿಗಳು ಕುಪಿತಗೊಂಡು ದೂರುದಾರ ಭುವನೇಶ್ವರ್ ಅವರ ಮನೆ ಬಳಿ ಬಂದು ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಸಾಕು ನಾಯಿಯೂ ಆರೋಪಿಗಳ ಮೇಲೆ ದಾಳಿ ಮಾಡಿದ್ದು ತನ್ನ ಮಾಲೀಕನ ರಕ್ಷಣೆಗೆ ಧಾವಿಸಿದೆ.
ಇದರಿಂದ ತೀವ್ರ ಕುಪಿತಗೊಂಡ ಮೂವರು ಆರೋಪಿಗಳು ಭುವನೇಶ್ವರ್ ಅವರ ಸಾಕು ನಾಯಿಯ ಮೇಲೆ ದಾಳಿ ಮಾಡಿ ಅದರ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ. ದುಷ್ಕರ್ಮಿಗಳು ಪುನಃ ದೂರುದಾರರ ಮೇಲೆ ಹಲ್ಲೆಗೆ ಯತ್ನಿಸುತ್ತಿರುವ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.