ಅಹಮದಾಬಾದ್: ದಲಿತ ಸಮುದಾಯದ ವ್ಯಕ್ತಿ ಓರ್ವ ಒಳ್ಳೆಯ ಬಟ್ಟೆ ಹಾಗೂ ಕೂಲಿಂಗ್ ಗ್ಲಾಸ್ ಧರಿಸಿದ್ದ ಎಂಬ ಕಾರಣಕ್ಕೆ ರಜಪೂತ್ ಸಮುದಾಯಕ್ಕೆ ಸೇರಿದ್ದ ಏಳು ಮಂದಿ ಅಮಾನುಷವಾಗಿ ಹಲ್ಲೆ ಮಾಡಿ ವಿಕೃತಿ ಮೆರೆದಿರುವ ಘಟನೆ ಗುಜರಾತಿನಲ್ಲಿ ನಡೆದಿದೆ.
ಗುಜರಾತಿನ ಬನಸ್ಕಾಂತ ಜಿಲ್ಲೆಯ ಪಾಲನ್ಪುರ ತಾಲ್ಲೂಕಿನ ಮೋಟಾ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಏಳು ಮಂದಿ ಆರೋಪಿಗಳು ತಲೆ ಮಾರಿಸಿಕೊಂಡಿದ್ದಾರೆ. ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನಲೆ?
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ಜಿಗರ್ ಶೆಖಾಲಿಯಾ ಎಂಬುವವರ ಮೇಲೆ ರಜಪೂತ್ ಸಮುದಾಯಕ್ಕೆ ಸೇರಿದ್ದ ಏಳು ಮಂದಿ ಕ್ಷುಲಕ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ.
ಮಂಗಳವಾರ ಬೆಳಗ್ಗೆ ದೂರುದಾರ ಜಿಗರ್ ತಮ್ಮ ಮನೆ ಮುಂದೆ ನಿಂತಿದ್ದ ವೇಳೆ ಆರೋಪಿ ಓರ್ವ ಬಂದು ಇತ್ತೀಚಿನ ದಿನಗಳಲ್ಲಿ ನಿನ್ನದು ತುಂಬಾ ಆಯಿತ್ತು. ಇದೇ ರೀತಿ ಆದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೊರಟು ಹೋಗಿದ್ದಾನೆ.
ಅದೇ ದಿನ ರಾತ್ರಿ ದೂರುದಾರ ಜಿಗರ್ ಗ್ರಾಮದ ಹೊರಭಾಗದ ದೇವಾಲಯದ ಬಳಿ ನಿಂತಿದ್ದ ವೇಳೆ ಬಂದ ಏಳು ಮಂದಿ ಆರೋಪಿಗಳು ಏಕಾಏಕಿ ಸಂತ್ರಸ್ತನ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ತನ್ನನ್ನು ಯಾಕೆ ಹೊಡೆಯುತ್ತಿರುವುದಾಗಿ ಕಾರಣ ಕೇಳಿದಾಗ ಒಳ್ಳೆಯ ಬಟ್ಟೆ ಹಾಗೂ ಸನ್ಗ್ಲಾಸ್ ಧರಿಸಿದ್ದಕ್ಕಾಗಿ ಎಂದು ಹೇಳಿ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ಕಂದಕಕ್ಕೆ ಉರುಳಿದ ಬಸ್; 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಕೊಲೆ ಬೆದರಿಕೆ
ಮಗನನ್ನು ಥಳಿಸುತ್ತಿರುವ ವಿಚಾರ ತಿಳಿದ ತಾಯಿ ಸ್ಥಳಕ್ಕೆ ದೌಡಾಯಿಸಿ ಹ್ಲಲೆ ಮಾಡದಂತೆ ವಿನಂತಿಸಿ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಆರೋಪಿಗಳು ದೂರುದಾರರ ತಾಯಿ ಮೇಲೆ ಹಲ್ಲೆ ನಡೆಸಿ ಆಕೆಯ ಬಟ್ಟೆಯನ್ನು ಹರಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೊರಟು ಹೋಗಿದ್ದಾರೆ.
ಗಾಯಾಳು ತಾಯಿ-ಮಗ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತ ದಂಡ ಸಂಹಿತೆ(IPC Section)ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಗಲಭೆ, ಮಹಿಳೆ ಮೇಲೆ ದೌರ್ಜನ್ಯ, ಕಾನೂನುಬಾಹಿರ ಚಟುವಟಿಕೆ, ಜಾತಿ ನಿಂದನೆ, ಪರಿಶಿಷ್ಟ ಜಾತಿ, ಪಂಗಡ ರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.