Vantara : ತಮ್ಮ ಕನಸಿನ ಯೋಜನೆಯಾದ ‘ವಂತಾರಾ’ ಮೂಲಕ ವಿಶ್ವದ ಅತಿ ದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರ ತೆರೆದಿರುವ ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕ ಅನಂತ್ ಅಂಬಾನಿ, ಜೀವ ಸಂಕುಲಕ್ಕೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ಇದರ ಭಾಗವಾಗಿ ಅಪಾಯದಲ್ಲಿರುವ ಸಾಕು ಪ್ರಾಣಿಗಳನ್ನು ರಕ್ಷಿಸಿ ಅವುಗಳನ್ನು ಆರೈಕೆ ಮಾಡುತ್ತಿರುವ ವಂತಾರಾ, ಇದೀಗ ಗಾಧಿಮಾಯಿ ಹಬ್ಬಕ್ಕೆ ಬಲಿ ಕೊಡಲು ಸಾಗಿಸುತ್ತಿದ್ದ 74 ಎಮ್ಮೆಗಳು ಹಾಗೂ 326 ಮೇಕೆಗಳು ಸೇರಿ ಒಟ್ಟು 400 ಸಾಕು ಪ್ರಾಣಿಗಳನ್ನು ರಕ್ಷಣೆ ಮಾಡಿ ಶಾಶ್ವತ ನೆಲೆಯನ್ನು ಒದಿಸಿದೆ.
ಪ್ರಾಣಿಗಳ ರಕ್ಷಣಾ ಕಾರ್ಯಾಚರಣೆಯು ಬಿಹಾರ ಸರ್ಕಾರದ ಮಹತ್ವದ ಬೆಂಬಲದೊಂದಿಗೆ ಭಾರತದ ಪ್ರಮುಖ ಗುಪ್ತಚರ ಸಂಸ್ಥೆ ಸಶಸ್ತ್ರ ಸೀಮಾ ಬಲ ( SSB ) ನೇತೃತ್ವದಲ್ಲಿ ನಡೆಯಿತು. ದೇವರಿಗೆ ಬಲಿ ಕೊಡಲೆಂದು ಭಾರತದ ವಿವಿಧ ಉತ್ತರ ರಾಜ್ಯಗಳಿಂದ ನೇಪಾಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಾಣಿಗಳನ್ನು ಎಸ್ಎಸ್ಬಿ ಸಿಬ್ಬಂದಿ ಭಾರತದ ಎರಡು ಪ್ರಮುಖ ಪ್ರಾಣಿ ಕಲ್ಯಾಣ ಸಂಸ್ಥೆಗಳಾದ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್ಎ) ಮತ್ತು ಹ್ಯೂಮನ್ ಸೊಸೈಟಿ ಇಂಟರ್ನ್ಯಾಶನಲ್ (ಎಚ್ಎಸ್ಐ) ಸಹಾಯದಿಂದ ತಡೆದು ರಕ್ಷಣೆ ಮಾಡಿದೆ.
ರಕ್ಷಿಸಿದ ಪ್ರಾಣಿಗಳನ್ನು ಪರೀಕ್ಷೆ ಮಾಡಿದ ವಂತಾರದ ಪಶುವೈದ್ಯರು, ಕಠಿಣ ಪ್ರಯಾಣದ ವೇಳೆ ಆಹಾರ ಅಥವಾ ನೀರಿಲ್ಲದೆ ಪ್ರಾಣಿಗಳು ಬಹಳ ನೋವು ಅನುಭವಿಸಿವೆ. ವಾಹನದಲ್ಲಿ ಕಸದಂತೆ ಪ್ರಾಣಿಗಳನ್ನು ತುಂಬಿದ್ದರಿಂದ ಅವುಗಳು ಸಾಕಷ್ಟು ಹಿಂಸೆ ಅನುಭವಿಸಿವೆ ಎಂದಿದ್ದಾರೆ. ತುಂಬಾ ಬಸವಳಿದಿದ್ದ ಪ್ರಾಣಿಗಳಿಗೆ ಇದೀಗ ವಂತಾರ ಅಭಯಾರಣ್ಯದಲ್ಲಿ ಅಗತ್ಯ ಆರೈಕೆಯನ್ನು ನೀಡಲಾಗುತ್ತಿದೆ. ಇವುಗಳಲ್ಲಿ ವಿಶೇಷ ಗಮನ ಅಗತ್ಯವಿರುವ 21 ಮೇಕೆಗಳನ್ನು ಉತ್ತರಾಖಂಡ್ನ ಪಿಎಫ್ಎ ನಿರ್ವಹಿಸುವ ಡೆಹ್ರಾಡೂನ್ನಲ್ಲಿರುವ ‘ಹ್ಯಾಪಿ ಹೋಮ್ ಸ್ಯಾಂಕ್ಚುರಿ’ಗೆ ವರ್ಗಾಯಿಸಲಾಗುತ್ತದೆ ಎಂದು ವಂತಾರಾ ತಿಳಿಸಿದೆ.
ಸಶಸ್ತ್ರ ಸೀಮಾ ಬಲ (SSB) ಮತ್ತು ಬಿಹಾರ ಸರ್ಕಾರವು ಕಷ್ಟಕರ ಸಂದರ್ಭಗಳಲ್ಲಿಯೂ ಅಕ್ರಮ ಪ್ರಾಣಿ ಸಾಗಣೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಿರ್ಣಾಯಕ ಪರಿಸ್ಥಿತಿಯಲ್ಲಿ, ನಮ್ಮ ತಂಡಗಳು, ಎಸ್ಎಸ್ಬಿಯ ಸಹಯೋಗದೊಂದಿಗೆ, ಪ್ರಾಣಿಗಳನ್ನು ಯಶಸ್ವಿಯಾಗಿ ರಕ್ಷಿಸಿವೆ. ದುರ್ಬಲ ಜೀವಗಳ ರಕ್ಷಣೆಗೆ ನಮ್ಮ ಅಚಲ ಬದ್ಧತೆಯನ್ನು ಇದು ಪ್ರದರ್ಶಿಸುತ್ತದೆ. ಇಂತಹ ಸಂದರ್ಭದಲ್ಲಿ ಪ್ರಾಣಿಗಳಿಗೆ ಪುನರ್ವಸತಿಯನ್ನು ಕಲ್ಪಿಸಿದ ಶ್ರೀ ಅನಂತ್ ಅಂಬಾನಿ ಅವರ ವಂತರಾಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ ಎಂದು ಪೀಪಲ್ ಫಾರ್ ಅನಿಮಲ್ಸ್ ಪಬ್ಲಿಕ್ ಪಾಲಿಸಿ ಫೌಂಡೇಶನ್ ಸಂಸ್ಥಾಪಕಿ ಗೌರಿ ಮೌಲೇಖಿ ಅವರು ಹೇಳಿದರು.
ಏನಿದು ಗಾಧಿಮಾಯಿ ಹಬ್ಬ?
ಇಂಡೋ-ನೇಪಾಳದ ಗಡಿಯ ಸಮೀಪದಲ್ಲಿ ನಡೆಯುವ ಗಾಧಿಮಾಯಿ ಉತ್ಸವವು ವಿಶ್ವದ ಅತಿದೊಡ್ಡ ಧಾರ್ಮಿಕ ಹಬ್ಬವಾಗಿದೆ. ಇದು ವಿಶೇಷವಾಗಿ ಪ್ರಾಣಿಗಳ ಬಲಿಗಾಗಿ ಹೆಸರುವಾಸಿಯಾಗಿದೆ. 2014ರಲ್ಲಿ 5,00,000ಕ್ಕೂ ಹೆಚ್ಚು ಪ್ರಾಣಿಗಳನ್ನು ಇಲ್ಲಿ ಹತ್ಯೆ ಮಾಡಲಾಗಿದೆ. ಈ ಪ್ರಾಣಿಗಳಲ್ಲಿ ಹೆಚ್ಚಿನವು ಭಾರತದಿಂದ ಅಕ್ರಮವಾಗಿ ಸಾಗಿಸಲ್ಪಟ್ಟವು ಎಂಬುದು ಗಮನಾರ್ಹ ಸಂಗತಿಯಾಗಿದೆ. ಪ್ರಾಥಮಿಕವಾಗಿ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಉತ್ತರಾಖಂಡದಿಂದ ಪ್ರಾಣಿಗಳನ್ನು ಸಂಗ್ರಹಿಸಿ, ಕಸದಂತೆ ತುಂಬಿಕೊಂಡು ಸಾಗಿಸಲಾಗುತ್ತದೆ. ಗಡಿಯಾಚೆಗಿನ ಪ್ರಾಣಿಗಳ ಕಳ್ಳಸಾಗಣೆಯನ್ನು ನಿಗ್ರಹಿಸಲು ಸುಪ್ರೀಂಕೋರ್ಟ್ ನೀಡಿರುವ ಹಲವಾರು ನಿರ್ದೇಶನಗಳ ಹೊರತಾಗಿಯೂ ಅಕ್ರಮ ಸಾಗಣೆ ಮುಂದುವರೆದಿದೆ. ಹಬ್ಬದ ಹೆಸರಿನಲ್ಲಿ ನಡೆಯುತ್ತಿರುವ ಪ್ರಾಣಿ ಬಲಿಗಳನ್ನು ಪರಿಹರಿಸುವಲ್ಲಿ ಪ್ರಸ್ತುತ ಸವಾಲುಗಳನ್ನು ಈ ಘಟನೆಗಳು ಒತ್ತಿಹೇಳುತ್ತದೆ ಮತ್ತು ಪ್ರಾಣಿ ಕಲ್ಯಾಣವನ್ನು ಎತ್ತಿಹಿಡಿಯಲು ಮತ್ತು ಅಂತಹ ಆಚರಣೆಗಳ ವಿರುದ್ಧ ಕಾನೂನುಗಳನ್ನು ಜಾರಿಗೊಳಿಸಲು ಅಗತ್ಯವಿರುವ ಸಾಮೂಹಿಕ ಪ್ರಯತ್ನಗಳನ್ನು ಈ ಪ್ರಕರಣ ಬೆಳಕು ಚೆಲ್ಲುತ್ತದೆ.
ಏನಿದು ವಂತಾರಾ?
ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕ ಅನಂತ್ ಅಂಬಾನಿ ಅವರು ವಿಶ್ವದ ಅತಿ ದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರವನ್ನು ತೆರೆಯುವ ತಮ್ಮ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಅನ್ನು 2024ರ ಫೆ.26ರಂದು ಘೋಷಣೆ ಮಾಡಿದರು. ಈ ಪ್ರಾಜೆಕ್ಟ್ ಹೆಸರು ವಂತಾರಾ. ಇದರ ಅರ್ಥ ಕಾಡಿನ ನಕ್ಷತ್ರ. ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಪೋಷಣೆ ಮತ್ತು ಗಾಯಗೊಂಡ ಪ್ರಾಣಿಗಳ ಪುನರ್ವಸತಿ, ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಈ ಯೋಜನೆಯ ಪ್ರಮುಖ ಗುರಿಯಾಗಿದ್ದು, ದೇಶ ಮತ್ತು ವಿದೇಶ ಎರಡರಲ್ಲೂ ಕಾರ್ಯನಿರ್ವಹಿಸಲಿದೆ. ಗುಜರಾತಿನ ರಿಲಯನ್ಸ್ನ ಜಾಮ್ನಗರ ರಿಫೈನರಿ ಕಾಂಪ್ಲೆಕ್ಸ್ನ ಗ್ರೀನ್ ಬೆಲ್ಟ್ನಲ್ಲಿ 3000 ಎಕರೆಗಳಷ್ಟು ವಿಶಾಲ ಪ್ರದೇಶವಿದ್ದು, ವಂತಾರಾ ಕಾರ್ಯಕ್ರಮದ ಅಡಿಯಲ್ಲಿ ಈ ಜಾಗವನ್ನು ಕಾಡಿನಂತಹ ಪರಿಸರಕ್ಕೆ ಪರಿವರ್ತಿಸಲಾಗಿದೆ. ಸಂರಕ್ಷಿಸಲ್ಪಟ್ಟ ಪ್ರಾಣಿಗಳ ಪಾಲನೆಗಾಗಿ ನೈಸರ್ಗಿಕ, ಸಮೃದ್ಧ ಮತ್ತು ಹಸಿರು ಆವಾಸಸ್ಥಾನವನ್ನು ಹೊಂದಿದೆ. ಜಾಗತಿಕವಾಗಿ ಪ್ರಾಣಿ ಸಂರಕ್ಷಣಾ ಪ್ರಯತ್ನಗಳಿಗೆ ಪ್ರಮುಖ ಕೊಡುಗೆ ನೀಡುವವರಲ್ಲಿ ಮೂಂಚೂಣಿ ಸ್ಥಾನದಲ್ಲಿ ನಿಲ್ಲುವ ಗುರಿಯನ್ನು ವಂತಾರಾ ಗುರಿ ಹೊಂದಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ವಂತಾರಾ ಪ್ರಾಜೆಕ್ಟ್ ಗುಜರಾತಿನ ಜಾಮ್ನಗರದಲ್ಲಿ ರಿಲಯನ್ಸ್ನ ನವೀಕರಿಸಬಹುದಾದ ಇಂಧನ ವ್ಯವಹಾರವನ್ನು ಮುನ್ನಡೆಸುತ್ತಿರುವ ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಮತ್ತು ರಿಲಯನ್ಸ್ ಫೌಂಡೇಶನ್ ಮಂಡಳಿಗಳ ನಿರ್ದೇಶಕರಾದ ಅನಂತ್ ಅಂಬಾನಿ ಅವರ ಪರಿಕಲ್ಪನೆಯಾಗಿದೆ ಮತ್ತು ಕನಸಿನ ಯೋಜನೆಯೂ ಆಗಿದೆ.
ವಂತಾರಾ ಅತ್ಯಾಧುನಿಕ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳು, ಸಂಶೋಧನೆ ಮತ್ತು ಶೈಕ್ಷಣಿಕ ಕೇಂದ್ರಗಳನ್ನು ಒಳಗೊಂಡಂತೆ ಅತ್ಯುತ್ತಮ ಗುಣಮಟ್ಟದ ಪ್ರಾಣಿ ಸಂರಕ್ಷಣೆ ಮತ್ತು ಆರೈಕೆ ಘಟಕಗಳನ್ನು ರಚಿಸುವತ್ತ ಗಮನಹರಿಸಿದೆ. ವಂತಾರಾವು ತನ್ನ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸುಧಾರಿತ ಸಂಶೋಧನೆ ಮತ್ತು ಪ್ರತಿಷ್ಠಿತ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳು ಮತ್ತು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಮತ್ತು ವರ್ಲ್ಡ್ ವೈಲ್ಡ್ಲೈಫ್ ಫಂಡ್ ಫಾರ್ ನೇಚರ್ (WWF) ನಂತಹ ಸಂಸ್ಥೆಗಳೊಂದಿಗೆ ಸಹಯೋಗವನ್ನು ಸಂಯೋಜಿಸುವತ್ತ ಗಮನಹರಿಸುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. (ಏಜೆನ್ಸೀಸ್)
ಪ್ರಾಣಿ ಸಂಕುಲಕ್ಕೆ ಜೀವನಾಡಿ ವಂತಾರಾ ಯೋಜನೆ: ಅನಂತ್ ಅಂಬಾನಿ ಘೋಷಣೆ, ಭಾರತದಲ್ಲಿ ಇದೇ ಮೊದಲು
ಮಾಂಸಕ್ಕಾಗಿ ಕೊಲ್ಲಬೇಡಿ ನಾವು ಸಹಾಯ ಮಾಡ್ತೀವಿ: ನಮೀಬಿಯಾ ಪ್ರಾಣಿಗಳ ರಕ್ಷಣೆಗೆ ಮಿಡಿದ ಅನಂತ್ ಅಂಬಾನಿಯ ವಂತಾರಾ
ಅನಂತ್ ಅಂಬಾನಿಯ ‘ವಂತಾರಾ’ದಿಂದ ಹೊಸ ಪ್ರಯತ್ನ: ವಿಡಿಯೋ ಸರಣಿ ಮೂಲಕ ಪ್ರಾಣಿ ಸಂರಕ್ಷಣೆ ಜಾಗೃತಿ