ನವದೆಹಲಿ: ದೇಶಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ “ದಿ ಕೇರಳ ಸ್ಟೋರಿ” ಸಿನಿಮಾವನ್ನು ನಿಷೇಧಿಸಿರುವ ಪಶ್ಚಿಮ ಬಂಗಾಳ ಸರ್ಕಾರದ ಕ್ರಮವನ್ನು ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿದೆ.
ಬೇರೆ ರಾಜ್ಯಗಳಿಗಿಂತ ಭಿನ್ನವೇನಲ್ಲ
ದಿ ಕೇರಳ ಸ್ಟೋರಿಯನ್ನು ಬಂಗಾಳದಲ್ಲಿ ಏಕೆ ಬಿಡುಗಡೆ ಮಾಡಬಾರದು? ಇದು ಕಲಾತ್ಮಕ ಸ್ವಾತಂತ್ರ್ಯವಲ್ಲವೇ? ಎಂದು ಪ್ರಶ್ನಿಸಿರುವ ಉನ್ನತ ನ್ಯಾಯಾಲಯ, ದೇಶದ ಇತರೆ ಭಾಗಗಳಲ್ಲಿ ಸಿನಿಮಾ ಬಿಡುಗಡೆಯಾಗಿರುವುದನ್ನು ಉಲ್ಲೇಖಿಸಿ, ಪಶ್ಚಿಮ ಬಂಗಾಳ ಬೇರೆ ರಾಜ್ಯಗಳಿಗಿಂತ ಭಿನ್ನವೇನಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಬಂಗಾಳದಲ್ಲಿ ಸಿನಿಮಾ ಬ್ಯಾನ್ ಮಾಡಿರುವುದನ್ನು ಖಂಡಿಸಿ ಹಾಗೂ ತಮಿಳುನಾಡಿನಲ್ಲಿ ಬ್ಯಾನ್ ಆಗುವ ಸೂಚನೆ ಹಿನ್ನೆಲೆಯಲ್ಲಿ ದಿ ಕೇರಳ ಸ್ಟೋರಿ ಚಿತ್ರತಂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ದಿ ಕೇರಳ ಸ್ಟೋರಿಯನ್ನು ಬಂಗಾಳದಲ್ಲಿ ಏಕೆ ಬಿಡುಗಡೆ ಮಾಡಬಾರದು? ಎಂದು ಪ್ರಶ್ನಿಸಿ ಬಂಗಾಳ ಮತ್ತು ತಮಿಳುನಾಡು ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಮೇ 17ಕ್ಕೆ ಪ್ರಕರಣವನ್ನು ಮುಂದೂಡಿದೆ.
ಮೇ 8ರಂದು ಸುದ್ದಿಗೋಷ್ಠಿ ನಡೆಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದ್ವೇಷ ಮತ್ತು ಹಿಂಸಾಚಾರವನ್ನು ತಡೆಗಟ್ಟುವ ಉದ್ದೇಶದಿಂದ ವಿವಾದಾತ್ಮಕ ಸಿನಿಮಾ ಚಲನಚಿತ್ರ ‘ದಿ ಕೇರಳ ಸ್ಟೋರಿ’ ಪ್ರದರ್ಶನವನ್ನು ತಕ್ಷಣವೇ ನಿಷೇಧಿಸುವಂತೆ ಆದೇಶಿಸಿದರು.
ಮೇ 17ಕ್ಕೆ ಮುಂದೂಡಿಕೆ
ಇನ್ನೊಂದೆಡೆ ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರು ಚಿತ್ರಮಂದಿರಗಳಲ್ಲಿ ಪ್ರದರ್ಶನವನ್ನು ನಿಷೇಧಿಸುವ ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತು, ಇದೀಗ ನ್ಯಾಯಾಲಯ ನೋಟಿಸ್ ನೀಡಿ, ವಿಚಾರಣೆಯನ್ನು ಮೇ 17ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಅಪರಿಚಿತ ಯುವಕರಿಗೆ ಫೋನ್ ನಂಬರ್ ಕೊಟ್ಟ ಯುವತಿಗೆ ನೆಟ್ಟಿಗರು ಹೇಳಿದ್ದಿಷ್ಟು…
ಮೇ 5ರಂದು ಬಿಡುಗಡೆಯಾದ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸುಸಿಪ್ಟೋ ಸೇನ್ ನಿರ್ದೇಶನ ಮಾಡಿದ್ದಾರೆ. ಕೇರಳದ 32 ಸಾವಿರಕ್ಕೂ ಅಧಿಕ ಯುವತಿಯರನ್ನು ಮತಾಂತರಿಸಿ, ಐಸಿಸ್ ಪರ ಹೋರಾಡಲು, ಸಿರಿಯಾ, ಇರಾಕ್, ಅಫ್ಘಾನಿಸ್ತಾನ ದೇಶಗಳಿಗೆ ಸಾಗಿಸಲಾಗಿದೆ ಎಂಬ ಸಂಭಾಷಣೆ ಹಲವರ ಅಸಮಾಧಾನಕ್ಕೆ ಕಾರಣವಾಗಿದ್ದು, ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ. (ಏಜೆನ್ಸೀಸ್)
ದಿ ಕೇರಳ ಸ್ಟೋರಿ ಸಿನಿಮಾಗೆ ಉತ್ತರ ಪ್ರದೇಶ ಬೆಂಬಲ: ತೆರಿಗೆ ವಿನಾಯಿತಿ ಘೋಷಿಸಿದ ಸರ್ಕಾರ
ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಬ್ಯಾನ್: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಚಿತ್ರತಂಡ