Pregnant Women : ಜನವರಿ 22, 2024ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ವಿಜೃಂಭಣೆಯಿಂದ ನಡೆಯಿತು. ಆ ದಿನ ಆಸ್ಪತ್ರೆಗಳು ಗರ್ಭಿಣಿಯರಿಂದ ತುಂಬಿ ತುಳುಕುತ್ತಿದ್ದವು. ಈ ಒಂದು ದೃಶ್ಯವು ರೋಗಿಗಳನ್ನು ಮಾತ್ರವಲ್ಲದೆ ಆಸ್ಪತ್ರೆ ಯ ಅಧಿಕಾರಿಗಳನ್ನು ಸಹ ಅಚ್ಚರಿಗೊಳಿಸಿತು. ಆಸ್ಪತ್ರೆಗೆ ಬಂದ ಎಲ್ಲ ಮಹಿಳೆಯರು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯ ದಿನದಂದೇ ತಮ್ಮ ಮಗು ಜನಿಸಬೇಕೆಂದು ಬಯಸಿದ್ದರು. ಅವರಲ್ಲಿ ಹಲವರು ತಮ್ಮ ಬಯಕೆಯ ಬಗ್ಗೆ ವೈದ್ಯರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರು.
ಅಂದಹಾಗೆ ಇದನ್ನು ‘ಮಹೂರ್ತ ಹೆರಿಗೆ’ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಇದು ರಾಮ ಮಂದಿರ ಉದ್ಘಾಟನೆಯ ದಿನದಂದು ಮಾತ್ರವಲ್ಲ, ಇತರ ಅನೇಕ ಶುಭ ಸಂದರ್ಭಗಳಲ್ಲಿಯೂ ನಡೆಯುತ್ತಿದೆ. ನಮ್ಮ ದೇಶದಲ್ಲಿ ಇಂತಹ ಹೆರಿಗೆಗಳು ಹೆಚ್ಚುತ್ತಿವೆ. ಇದು ಹೊಸ ಟ್ರೆಂಡ್ ಆಗಿದೆ. ಅಷ್ಟಕ್ಕೂ ಆಸ್ಪತ್ರೆಗಳು ಅವುಗಳನ್ನು ಏಕೆ ಪ್ರೋತ್ಸಾಹಿಸುತ್ತವೆ? ಅನೇಕ ಆಸ್ಪತ್ರೆಗಳು ತಾವು ಒದಗಿಸುವ ಸೇವೆಗಳ ಪಟ್ಟಿಯಲ್ಲಿ ‘ಮಹೂರ್ತ ಹೆರಿಗೆ’ಯನ್ನು ಸಹ ಸೇರಿಸಿಕೊಂಡಿವೆ. ಭಾರತದಲ್ಲಿನ ಮಹಿಳೆಯರು ಶುಭ ಸಂದರ್ಭಗಳಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಏಕೆ ಬಯಸುತ್ತಾರೆ ಎಂಬುದನ್ನು ನಾವೀಗ ತಿಳಿಯೋಣ.
ಮಹೂರ್ತ ಹೆರಿಗೆ ಎಂದರೇನು?
ಮಹೂರ್ತದ ಹೆರಿಗೆ ಎಂದರೆ ಪಾಲಕರು ತಮ್ಮ ಮಗುವಿನ ಜನನಕ್ಕೆ ನಿರ್ದಿಷ್ಟ ದಿನ ಮತ್ತು ಸಮಯವನ್ನು ಆಯ್ಕೆ ಮಾಡುವ ಅಭ್ಯಾಸವಾಗಿದೆ. ಪುರೋಹಿತರು ಅಥವಾ ಜ್ಯೋತಿಷಿಯನ್ನು ಸಂಪರ್ಕಿಸಿದ ನಂತರ ಹೆರಿಗೆಗೆ ದಿನಾಂಕ ಮತ್ತು ಸಮಯವನ್ನು ನಿರ್ಧರಿಸುತ್ತಾರೆ. ಆದರೂ, ಹುಟ್ಟಲಿರುವ ಮಗುವಿಗೆ ಮತ್ತು ತಾಯಿಗೆ ಬೇರೆ ಯಾವುದೇ ಸಮಸ್ಯೆಗಳಿಲ್ಲ ಎಂದು ಖಚಿತಪಡಿಸಿಕೊಂಡ ನಂತರವೇ ಹೆರಿಗೆಯನ್ನು ನಡೆಸಲಾಗುತ್ತದೆ. ಈ ದಿನಾಂಕವು ಸಾಮಾನ್ಯವಾಗಿ ಹೆರಿಗೆಯಾಗಬೇಕಾದ ತಿಂಗಳೊಳಗೆ ಬರುವಂತೆಯೇ ನೋಡಿಕೊಳ್ಳುತ್ತಾರೆ. ಈಗ ಅನೇಕ ಜನರಿಗೆ ಸಿ-ಸೆಕ್ಷನ್ ಅಗತ್ಯ ಇರುವುದರಿಂದ ಹೆರಿಗೆ ನೋವು ಬರುವವರೆಗೆ ಕಾಯುವುದಿಲ್ಲ. ಅಂತಹ ಗರ್ಭಿಣಿಯರು ತಮ್ಮ ಮುಹೂರ್ತ ದಿನಾಂಕ ಮತ್ತು ಸಮಯವನ್ನು ನೋಡಿ, ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಬೆಂಗಳೂರಿನ ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯ ಸ್ತ್ರೀರೋಗ ಶಾಸ್ತ್ರದ ಹಿರಿಯ ಸಲಹೆಗಾರ್ತಿ ಡಾ. ನಿರ್ಮಲಾ ಚಂದ್ರಶೇಖರ್ ಹೇಳಿದ್ದಾರೆ.
ಹೆಚ್ಚುತ್ತಿರುವ ಬೇಡಿಕೆ
ಸಾಮಾನ್ಯವಾಗಿ ಹೆರಿಗೆ ನೋವು ಬಂದು ಸ್ವಾಭಾವಿಕವಾಗಿಯೇ ಹೆರಿಗೆ ಆಗುತ್ತದೆ. ಆದರೆ, ಇಂದು ಅನೇಕ ಜನರು ನೋವನ್ನು ಸಹಿಸಿಕೊಳ್ಳಲು ಆಗದೇ, ಸಿ-ಸೆಕ್ಷನ್ ಕೇಳುತ್ತಾರೆ. ವೈದ್ಯರು ಸಾಮಾನ್ಯವಾಗಿ ನೀಡುವ ಅಂತಿಮ ದಿನಾಂಕಗಳು ಅಂದಾಜು ಮಾತ್ರ. ಹೆರಿಗೆ ಮೊದಲು ಅಥವಾ ನಂತರ ಸಂಭವಿಸಬಹುದು. ಆದಾಗ್ಯೂ, ಅನೇಕ ಜನರು ಜ್ಯೋತಿಷ್ಯ ನಂಬಿಕೆಗಳನ್ನು ವೈದ್ಯಕೀಯ ವಿಜ್ಞಾನಕ್ಕಿಂತ ಹೆಚ್ಚಾಗಿ ನಂಬುತ್ತಾರೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಮುಹೂರ್ತದಂದು ಹೆರಿಗೆಗಳ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ಆಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಲು ನಿರ್ಧರಿಸಿದ ರೋಗಿಗಳಿಗೆ ಮಾತ್ರ ಈ ರೀತಿಯ ಹೆರಿಗೆಗೆ ಅವಕಾಶವಿದೆ ಎಂದು ಹೈದರಾಬಾದ್ನ ಕೇರ್ ಆಸ್ಪತ್ರೆಯ ಕ್ಲಿನಿಕಲ್ ನಿರ್ದೇಶಕಿ ಡಾ. ಮಂಜುಳಾ ಅನಗನಿ ಹೇಳಿದರು.
ಇದೇ ಸಂದರ್ಭದಲ್ಲಿ ಭಾರತದಲ್ಲಿ ಸಿ-ಸೆಕ್ಷನ್ ಹೆರಿಗೆಗಳು ಹೆಚ್ಚುತ್ತಿವೆ ಎಂದು ಅಧ್ಯಯನಗಳು ತೋರಿಸುತ್ತವೆ. ಇವು ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿವೆ ಎಂದು ವರದಿಯಾಗಿದೆ. ಅಂತಹ ಆಸ್ಪತ್ರೆಗಳಲ್ಲಿ ನಡೆಯುವ ಅರ್ಧಕ್ಕಿಂತ ಹೆಚ್ಚು ಹೆರಿಗೆಗಳು ಸಿ-ಸೆಕ್ಷನ್ ಆಗಿರುತ್ತವೆ.
ಅಪಾಯಗಳೇನು?
ಮಗು ಗರ್ಭದಲ್ಲಿ ಸಂಪೂರ್ಣವಾಗಿ ಬೆಳೆಯುವ ಮೊದಲೇ ಪೋಷಕರು ಅವಧಿಪೂರ್ವ ಹೆರಿಗೆಗೆ ಒತ್ತಾಯಿಸಿದರೆ, ಅದು ಮಗುವಿನ ಜೀವನದ ಮೇಲೂ ಪರಿಣಾಮ ಬೀರಬಹುದು. ಅಪಕ್ವವಾದ ಮಗುವಿಗೆ ಹೆಚ್ಚಾಗಿ NICU ಆರೈಕೆಯ ಅಗತ್ಯವಿರಬಹುದು. ಕೆಲವು ಸಂದರ್ಭಗಳಲ್ಲಿ, ಸಾಮಾನ್ಯ ಹೆರಿಗೆಯ ಮೂಲಕ ಮಗುವಿನ ತಲೆ ಹೊರಬಂದರೂ ಸಹ, ಕೆಲವರು ಮಗು ಜನಿಸಲು ಶುಭ ಸಮಯದಲ್ಲಿ ಹೆರಿಗೆಯಾಗಬೇಕೆಂದು ಒತ್ತಾಯಿಸುತ್ತಾರೆ. ಇದು ಮಗುವಿನ ಜೀವನದ ಮೇಲೆ ಪರಿಣಾಮ ಬೀರುವುದಲ್ಲದೆ, ತಾಯಿಗೆ ಸೋಂಕು ಸೇರಿದಂತೆ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು.
ಈ ಟ್ರೆಂಡನ್ನು ಪ್ರೋತ್ಸಾಹಿಸದಿರಲು ವೈದ್ಯರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ, ಮುಹೂರ್ತದಂದು ಹೆರಿಗೆಗೆ ಒತ್ತಾಯಿಸುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಸ್ಪತ್ರೆ ಅಧಿಕಾರಿಗಳು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಮಗುವಿಗೆ ಉತ್ತಮ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಅನೇಕ ಜನರು ಶುಭ ಸಮಯಗಳನ್ನು ಹುಡುಕುತ್ತಾರೆ. ಆದಾಗ್ಯೂ, ಇದು ಮಗುವಿನ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂದು ಯೋಚಿಸಬೇಕು ಎಂದು ಅನೇಕ ವೈದ್ಯರು ಹೇಳಿದ್ದಾರೆ. (ಏಜೆನ್ಸೀಸ್)
ಎಲ್ಐಸಿ ಸಂಸ್ಥೆಗೆ ಡಿಜಿಟಲ್ ಟಚ್: ಇನ್ಮುಂದೆ ಮೊಬೈಲ್ನಲ್ಲೇ ಪಡೆಯಬಹುದು ವಿಮೆ! LIC