MS Dhoni : ಸೋಮವಾರ (ಏಪ್ರಿಲ್ 14) ಲಖನೌದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ (LSG) ತಂಡದ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತೆ ಗೆಲುವಿನ ಹಳಿಗೆ ಬಂದಿದೆ. ಸತತ ಐದು ಸೋಲುಗಳಿಂದ ಕಂಗೆಟ್ಟಿದ್ದ ತಂಡಕ್ಕೆ ಈ ಒಂದು ಗೆಲುವು ಆಸೆಯನ್ನು ಜೀವಂತವಾಗಿ ಇರಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 166 ರನ್ ಗಳಿಸಿತು. ಲಖನೌ ತಂಡದ ಪರ ರಿಷಭ್ ಪಂತ್ (63 ರನ್, 49 ಎಸೆತ, 4 ಬೌಂಡರಿ, 4 ಸಿಕ್ಸರ್) ಅರ್ಧಶತಕ ಗಳಿಸಿದರು. ಮಿಚೆಲ್ ಮಾರ್ಷ್ (30) ಮತ್ತು ಆಯುಷ್ ಬಡೋನಿ (22) ಉಪಯುಕ್ತ ಕಾಣಿಕೆ ನೀಡಿದರು. ಆದರೆ, ಇತರ ಬ್ಯಾಟ್ಸ್ಮನ್ಗಳು ಸಂಪೂರ್ಣ ವಿಫಲರಾದರು. ಚೆನ್ನೈ ಪರ ರವೀಂದ್ರ ಜಡೇಜಾ ಮತ್ತು ಮತಿಶಾ ಪತಿರಾಣ ತಲಾ ಎರಡು ವಿಕೆಟ್ ಪಡೆದರೆ, ಖಲೀಲ್ ಅಹ್ಮದ್ ಮತ್ತು ಅನ್ಶುಲ್ ಕಾಂಬೋಜ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಸಿಎಸ್ಕೆ, ಶಿವಂ ದುಬೆ (ಅಜೇಯ 43 ರನ್, 37 ಎಸೆತ, 3 ಬೌಂಡರಿ, 2 ಸಿಕ್ಸರ್), ರಾಚಿನ್ ರವೀಂದ್ರ (37 ರನ್, 22 ಎಸೆತ, 5 ಬೌಂಡರಿ), ಶೇಖ್ ರಶೀದ್ (27 ರನ್, 19 ಎಸೆತ, 6 ಬೌಂಡರಿ) ಮತ್ತು ಎಂಎಸ್ ಧೋನಿ (ಅಜೇಯ 26 ರನ್, 11 ಎಸೆತ, 4 ಬೌಂಡರಿ, 1 ಸಿಕ್ಸರ್) ಬ್ಯಾಟಿಂಗ್ ನೆರವಿನಿಂದ 19.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಲಖನೌ ತಂಡದ ವಿರುದ್ಧದ ಗೆಲುವಿನ ನಂತರ ಮಾತನಾಡಿದ ಎಂಎಸ್ ಧೋನಿ, ಈ ಗೆಲುವು ತಮ್ಮ ತಂಡದ ಪ್ರಯಾಣವನ್ನು ಬದಲಾಯಿಸುತ್ತದೆ ಎಂದು ಆಶಿಸಿದರು. ಸತತ ಸೋಲುಗಳ ನಂತರ ಗೆಲುವು ಸಾಧಿಸಿದ್ದು ಸಂತೋಷ ತಂದಿದೆ ಎಂದು ಹೇಳಿದರು. ಈ ಪಂದ್ಯದಲ್ಲಿ ಬೌಲಿಂಗ್ ವಿಭಾಗವು ಉತ್ತಮ ಪ್ರದರ್ಶನ ನೀಡಿತು ಮತ್ತು ಬ್ಯಾಟಿಂಗ್ನಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಲು ಬಯಸಿದ್ದೇವೆ ಎಂದು ಹೇಳಿದರು.
ಈ ಪಂದ್ಯವನ್ನು ಗೆದ್ದಿದ್ದು ನನಗೆ ತುಂಬಾ ಸಂತೋಷ ತಂದಿದೆ. ಕಳೆದ ಕೆಲವು ಪಂದ್ಯಗಳಲ್ಲಿ ಫಲಿತಾಂಶಗಳು ನಮ್ಮ ಪರವಾಗಿ ಬರಲಿಲ್ಲ. ಇದಕ್ಕೆ ಹಲವು ಕಾರಣಗಳಿರಬಹುದು. ಈ ಗೆಲುವು ತಂಡಕ್ಕೆ ಅಗತ್ಯವಾದ ಆತ್ಮವಿಶ್ವಾಸವನ್ನು ನೀಡುತ್ತದೆ. ಇದು ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂದು ನಾನು ಭಾವಿಸುತ್ತೇನೆ. ಕಳೆದ ಪಂದ್ಯಗಳಲ್ಲಿ, ಮೊದಲ ಆರು ಓವರ್ಗಳಲ್ಲಿ ನಾವು ಸರಿಯಾಗಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಮಧ್ಯಮ ಓವರ್ಗಳಲ್ಲಿ ನಾವು ಪುಟಿದೇಳುತ್ತಿದ್ದೆವು. ಬ್ಯಾಟಿಂಗ್ನಲ್ಲಿ ನಮಗೆ ನಿರೀಕ್ಷಿತ ಆರಂಭ ಸಿಗಲಿಲ್ಲ ಎಂದು ಧೋನಿ ಹೇಳಿದರು.
ಇದೇ ವೇಳೆ ಧೋನಿ ಶೇಖ್ ರಶೀದ್ ಅವರನ್ನು ಹೊಗಳಿದರು. ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಆತ ಎಲ್ಲರಂತೆ ಅಲ್ಲ, ತಮ್ಮದೇ ಆದ ಹೊಡೆತಗಳಿಂದ ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸುವ ಆಟಗಾರ. ಕಳೆದ ಕೆಲವು ವರ್ಷಗಳಿಂದ ಅವರು ತಂಡದೊಂದಿಗೆ ಪ್ರಯಾಣಿಸುತ್ತಿದ್ದಾರೆ. ಈ ವರ್ಷ, ಅವರು ನೆಟ್ಸ್ನಲ್ಲಿ ವೇಗಿಗಳು ಮತ್ತು ಸ್ಪಿನ್ನರ್ಗಳನ್ನು ಬಹಳ ಪರಿಣಾಮಕಾರಿಯಾಗಿ ಎದುರಿಸಿದ್ದಾರೆ. ಅದಕ್ಕಾಗಿಯೇ ನಾವು ಅವರಿಗೆ ಅವಕಾಶ ನೀಡಿದ್ದೇವೆ ಎಂದು ಧೋನಿ ಹೇಳಿದರು. (ಏಜೆನ್ಸೀಸ್)
ಅತ್ಯಾಚಾರಿ ಎನ್ಕೌಂಟರ್ಗೆ ವ್ಯಾಪಕ ಶ್ಲಾಘನೆ; ಗುಂಡು ಹೊಡೆದವರು ಮಹಿಳಾ ಎಸ್ಐ
ಯುವಕರಿಗೆ ಹಿಗ್ಗಾಮುಗ್ಗಾ ಬಾರಿಸಿದ ಯುವತಿಯರು! ವಿಡಿಯೋ ನೋಡಿ ಇದು ಅನ್ಯಾಯ ಅಂದಿದ್ದೇಕೆ ನೆಟ್ಟಿಗರು? Girls vs Boys