ಜೆರುಸಲೇಮ್: ಸುಮಾರು ಒಂದು ವಾರಕ್ಕೂ ಹೆಚ್ಚು ಕಾಲ ನಡೆದ ಇಸ್ರೇಲ್ ಮತ್ತು ಪ್ಯಾಲೆಸ್ತೇನಿಯನ್ನ ಹಮಾಸ್ ಬಂಡುಕೋರರ ನಡುವಿನ ಕಾದಟ ಅಂತ್ಯಗೊಳ್ಳುವ ಸಮಯಬಂದಿದ್ದು, ಗಾಜಾ ಮೇಲೆ ಕದನ ವಿರಾಮ ಘೋಷಿಸಲು ಇಸ್ರೇಲ್ ಸೆಕ್ಯುರಿಟಿ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಇಸ್ರೇಲ್ ಗುರುವಾರ ಕದಮ ವಿರಾಮವನ್ನು ಘೋಷಿಸಿದೆ. ಗಾಜಾದ ಹಮಾಸ್ ಬಂಡುಕೋರರ ಮೇಲೆ ಕಳೆದ 11 ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಗೆ ಇಸ್ರೇಲ್ ಬ್ರೇಕ್ ಹಾಕಿದ್ದು ಉಭಯ ರಾಷ್ಟ್ರಗಳ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಸೆಕ್ಯುರಿಟಿ ಕ್ಯಾಬಿನೆಟ್ ಜತೆಗಿನ ತಡರಾತ್ರಿಯ ಸಭೆಯ ಬಳಿಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತುನ್ಯಾಹು ಅವರ ಕಚೇರಿ ಕದನ ವಿರಾಮವನ್ನು ಘೋಷಿಸಿದೆ. ಈಜಿಪ್ಟಿನ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಿರುವುದಾಗಿ ತಿಳಿಸಿರುವ ಇಸ್ರೇಲ್, ಯಾವಾಗ ಕಾರ್ಯರೂಪಕ್ಕೆ ಬರಬೇಕೆಂದು ಎರಡು ಕಡೆಯವರು ಇನ್ನೂ ನಿರ್ಧರಿಸುತ್ತಿವೆ ಎಂದಿದೆ.
ಸಭೆಯಲ್ಲಿ ಇಸ್ರೇಲ್ನ ಮಿಲಿಟರಿ ಮುಖ್ಯಸ್ಥ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಸೇರಿದಂತೆ ಹಿರಿಯ ರಕ್ಷಣಾ ಅಧಿಕಾರಿಗಳು ಈಜಿಪ್ಟ್ ಪ್ರಸ್ತಾಪವನ್ನು ಅಂಗೀಕರಿಸಲು ಶಿಫಾರಸು ನೀಡಿದರು. ಅಲ್ಲದೆ, ಕಾರ್ಯಾಚರಣೆಯಲ್ಲಿ ಇದೊಂದು ಉತ್ತಮ ಸಾಧನೆ ಎಂದು ಹೇಳಿಕೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್ “ಈ ಕ್ಷೇತ್ರದ ವಾಸ್ತವತೆಯು ಕಾರ್ಯಾಚರಣೆಗಳ ಮುಂದುವರಿಕೆಯನ್ನು ನಿರ್ಧರಿಸುತ್ತದೆ” ಎಂದು ಹೇಳುವ ಮೂಲಕ ಕೆಣಕಿದರೆ ಬಿಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಇನ್ನೊಂದೆಡೆ ಒಪ್ಪಂದ ಅಥವಾ ಕದನ ವಿರಾಮ ಘೋಷಣೆಯು ಪ್ರಧಾನಿ ಬೆಂಜಮಿನ್ ನೇತುನ್ಯಾಹು ಅವರ ಸೋಲು ಮತ್ತು ಪ್ಯಾಲೆಸ್ತೇನಿಯನ್ ಜನರ ಗೆಲುವು ಎಂದು ಹಮಾಸ್ ಬಂಡುಕೋರರು ಹೇಳಿದ್ದಾರೆ.
ಸಂಧಾನಕಾರರ ಮಾತು ಕೇಳುವವರೆಗೂ ಜಾಗರೂಕರಾಗಿರುತ್ತೇವೆ ಎಂದು ಹಮಾಸ್ನ ಅರಬ್ ಮತ್ತು ಇಸ್ಲಾಮಿಕ್ ಸಂಬಂಧಗಳ ಬ್ಯೂರೋದ ಸದಸ್ಯ ಅಲಿ ಬರಾಕೆಹ್ ತಿಳಿಸಿದ್ದಾರೆ. ಸಂಧಾನಕಾರರ ಮಾತನ್ನು ಕೇಳಿದ ನಂತರ ಹಮಾಸ್ ಗುಂಪಿನ ನಾಯಕತ್ವವು ಚರ್ಚೆಗಳನ್ನು ನಡೆಸುತ್ತದೆ ಮತ್ತು ಪ್ರಕಟಣೆ ನೀಡುತ್ತದೆ ಎಂದು ಬರಾಕೆಹ್ ಹೇಳಿದರು.
ಪ್ಯಾಲೇಸ್ತೇನಿಯನ್ ಮತ್ತು ಇಸ್ರೇಲ್ ನಡುವೆ ಮೇ 10ರಂದು ಯುದ್ಧ ಆರಂಭವಾಯಿತು. ಪ್ಯಾಲೇಸ್ತೇನಿಯನ್ ಪ್ರತಿಭಟನಾಕಾರರು ಮತ್ತು ಇಸ್ರೇಲ್ ಪೊಲೀಸರ ನಡುವೆ ಜ್ಯೂವ್ಸ್ ಮತ್ತು ಮುಸ್ಲಿಮರ ಪವಿತ್ರ ತಾಣ ಅಲ್ ಅಖ್ಸಾ ಮಾಸ್ಕೋ ಕಾಂಪೌಂಡ್ ಬಳಿ ಗಲಾಟೆ ನಡೆದ ದಿನದ ಬೆನ್ನಲ್ಲೇ ಗಾಜಾದಲ್ಲಿರುವ ಹಮಾಸ್ ಬಂಡುಕೋರರು ಇಸ್ರೇಲ್ನ ಜೆರುಸಲೇಮ್ ಮೇಲೆ ರಾಕೆಟ್ ದಾಳಿ ಆರಂಭಿಸಿದ್ದರು.
ಡಜನ್ಗಟ್ಟಲೆ ಪ್ಯಾಲೇಸ್ತೇನಿಯನ್ ಕುಟುಂಬಗಳನ್ನು ಇಸ್ರೇಲ್ನಿಂದ ಹೊರಹಾಕುವ ಬೆದರಿಕೆಯೇ ಈ ಉದ್ವಿಗ್ನತೆಗೆ ಕಾರಣ ಎನ್ನಲಾಗಿದೆ. ಅಂದಿನಿಂದ ಎರಡು ರಾಷ್ಟ್ರಗಳ ನಡುವೆ ನಡೆದ ರಾಕೆಟ್ ದಾಳಿಯಲ್ಲಿ ಬಂಡುಕೋರರು ಮತ್ತು ಇಸ್ರೇಲ್ ಯೋಧರು ಸೇರಿದಂತೆ ಅನೇಕ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಕದನ ವಿರಾಮ ಘೋಷಿಸಿರುವುದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ. (ಏಜೆನ್ಸೀಸ್)
ಕರ್ನಾಟಕದ ಕ್ರೀಡಾಪಟುಗಳಿಗೆ ಕೋವಿಡ್ ಲಸಿಕೆ; ಕ್ರೀಡಾ ಇಲಾಖೆ ಮನವಿ ಪುರಸ್ಕರಿಸಿದ ರಾಜ್ಯ ಸರ್ಕಾರ