ಸಿಂಧನೂರು: ಎಸ್ಯುಸಿಐ (ಕಮ್ಯೂನಿಸ್ಟ್) ಪಕ್ಷ ಲೋಕಸಭಾ ಚುನಾವಣೆಯಲ್ಲಿ 19 ರಾಜ್ಯ, 3 ಕೇಂದ್ರಾಡಳಿತ ಪ್ರದೇಶದ 151 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ರಾಜ್ಯದ 19 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಪಕ್ಷದ ತಾಲೂಕು ಸಂಚಾಲಕರಾದ ವೀರೇಶ್.ಎನ್.ಎಸ್ ಹಾಗೂ ಶರಣಪ್ಪ ಉದ್ಬಾಳ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 10 ವರ್ಷಗಳಿಂದ ಬಿಜೆಪಿ ಸರ್ಕಾರ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. 2014 ರ ಚುನಾವಣೆಯಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತಹ ಸಮಸ್ಯೆಗಳ ಕುರಿತು ಬಿಜೆಪಿ ಈಗ ಮೌನವಾಗಿದೆ. ಗುಜರಾತ್ ಮಾದರಿ ಮಾತುಗಳು ಈಗ ಕಂಡುಬರುತ್ತಿಲ್ಲ. ದೇಶದ ಯುವಕರು ಕೆಲಸ ಹುಡುಕಿಕೊಂಡು ಯುದ್ಧಪೀಡಿತ ಇಸ್ರೇಲ್, ರಷ್ಯಾಗಳಿಗೆ ಹೋಗುತ್ತಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 10 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಿದ್ದರೂ, ಅವುಗಳ ಭರ್ತಿಗೆ ಕ್ರಮ ವಹಿಸಿಲ್ಲ ಎಂದು ದೂರಿದರು.
ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಶರಣಪ್ಪ, ರಾಯಚೂರು ಜಿಲ್ಲಾ ಸಮಿತಿ ಸದಸ್ಯರಾದ ತಿರುಮಲ್ ರಾವ್ ಹಸಮಕಲ್, ತಿರುಪತಿ ಗೋನ್ವಾರ್, ಶರಣು ಪಾಟೀಲ್, ಭೀಮರಾಯ ವಕೀಲ ಇತರರು ಇದ್ದರು.