ಅಹಮದಾಬಾದ್: ತೀವ್ರ ಕುತೂಹಲ ಕೆರಳಿಸಿರುವ ಐಪಿಎಲ್ 2023ರ ಫೈನಲ್ ಪಂದ್ಯವಾದ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರರು ಫೈನಲ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಸಂಗತಿ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಇದನ್ನೂ ಓದಿ: ಜಂತರ್ ಮಂತರ್ ಹೊರತುಪಡಿಸಿ ಕುಸ್ತಿಪಟುಗಳು ಬೇರೆಡೆ ಪ್ರತಿಭಟಿಸಲಿ: ದೆಹಲಿ ಪೊಲೀಸ್
ಈ ಬಾರಿ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡುವಲ್ಲಿ ಯಶಸ್ವಿಯಾಗಿರುವ ಐಪಿಎಲ್ 2023ರ ಪಂದ್ಯಗಳು, ಸದ್ಯ ಕ್ರಿಕೆಟ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಬಾರಿಯ ಲೀಗ್ನಲ್ಲಿ 4 ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಪ್ರದರ್ಶನ ನೀಡಿ, ನೇರ ಫೈನಲ್ ಪ್ರವೇಶಿಸಿದೆ. ಇದೇ ರೀತಿ ಕಳೆದ ಬಾರಿ ಚಾಂಪಿಯನ್ಗಳಾದ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಕೂಡ ಭರ್ಜರಿ ಪೈಪೋಟಿ ನೀಡಿ ಫೈನಲ್ಗೆ ಲಗ್ಗೆಯಿಟ್ಟಿದೆ.
ಮೇ 28ರ ಭಾನುವಾರ, ಗುಜರಾತ್ನ, ಅಹಮದಾಬಾದ್ನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯಕ್ಕೆ ಮಳೆ ತೀವ್ರ ಅಡ್ಡಿಪಡಿಸಿದ ಹಿನ್ನಲೆ ಪಂದ್ಯ ರದ್ದಾಯಿತು. ಅದಕ್ಕೆ ಪೂರಕವಾಗಿ ಇಂದು ಮೇ 29ರಂದು ಅಹಮದಾಬಾದ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಈ ಸುದ್ದಿ ಅಭಿಮಾನಿಗಳಿಗೆ ಸಂತಸ ನೀಡಿದರೂ ಪ್ರಯೋಜನವಾಗಿಲ್ಲ! ಹೌದು, ಇದಕ್ಕೆ ಕಾರಣ ಟ್ವಿಟರ್ ನಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿರುವ ಜೇ ಶಾ ಅವರ ಟ್ವೀಟ್!
ಇದನ್ನೂ ಓದಿ: VIDEO VIRAL | ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನೋಡ ನೋಡುತ್ತಿದ್ದಂತೆಯೇ ಪೊಲೀಸ್ ಮೇಲೆ ಕೈ ಮಾಡಿದ ಮಹಿಳೆ!
ಜೇ ಶಾ ಅವರ ಟ್ವೀಟ್ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಹಿನ್ನಲೆ ರವೀಂದ್ರ ಜಡೇಜಾ, ಅಜಿಂಕ್ಯಾ ರಹಾನೆ, ಶುಭಮನ್ ಗಿಲ್ ಮತ್ತು ಮೊಹ್ಮಮದ್ ಶಮಿ ಲಂಡನ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಕಾರಣದಿಂದ ಅವರು ಸೋಮವಾರ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯವನ್ನು ಆಡಲು ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಈ ಒಂದು ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ!