ಬೆಂಗಳೂರು: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿಸಲ್ಪಟ್ಟಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಬೀಗುವ ಮೂಲಕ ಅಧಿಕಾರದ ಗದ್ದುಗೆ ಏರಿದೆ.
ಕಳೆದ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಗಾದಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ತಿಕ್ಕಾಟ ತಾರಕಕ್ಕೇರಿತ್ತು. ಆ ನಂತರ ಹೈಕಮಾಂಡ್ ಇಬ್ಬರಯು ನಾಯಕರ ನಡುವೆ ಮಾತುಕತೆ ನಡೆಸಿ ಅಧಿಕಾರಿ ಹಂಚಿಕೆಯನ್ನು ಮಾಡಿದ್ದರು.
ಇನ್ನು ಈ ಮಧ್ಯೆ ಅಧಿಕಾರ ಹಂಚಿಕೆ ಸೂತ್ರದ ಕುರಿತು ಹೈಕಮಾಂಡ್ ಮಾತನಾಡಿಲ್ಲ ಸಿದ್ದರಾಮಯ್ಯನವರೇ 5 ವರ್ಷಗಳ ಕಾಲ ಮುಖ್ಯಮಂತ್ತಿಯಾಗಿರುತ್ತಾರೆ ಎಂದು ಹೇಳಿ ಆ ನಂತರ ಉಲ್ಟಾ ಹೊಡೆಯುವ ಮೂಲಕ ಸಚಿವ ಎಂ.ಬಿ. ಪಾಟೀಲ್ ಸುದ್ದಿಯಲ್ಲಿದ್ದರು.
ನೀರಾವರಿಗಾಗಿ ಹೋರಾಟ
ಇದೀಗ ಕಾಂಗ್ರೆಸ್ನಲ್ಲಿ ಖಾತೆಯ ವಿಚಾರವಾಗಿ ಸಚಿವರ ನಡುವೆ ಹಗ್ಗಜಗ್ಗಾಟ ಶುರುವಾಗಿದ್ದು ಜಲಸಂಪನ್ಮೂಲ ಇಲಾಖೆಯನ್ನು ತಮ್ಮ ಬಳಿ ಇರಿಸಿಕೊಳ್ಳಲು ಡಿ.ಕೆ. ಶಿವಕುಮಾರ್ ಹಾಗೂ ಎಂ.ಬಿ. ಪಾಟೀಲ್ ನಡುವೆ ತಿಕ್ಕಾಟ ಶುರುವಾಗಿದೆ.
ಇನ್ನು ಸಿದ್ದರಾಮಯ್ಯ ಅವರ ಅವಧಿಯಲ್ಲಿ 5 ವರ್ಷಗಳ ಕಾಲ ನೀರಾವರಿ ಇಲಾಖೆ ಸಚಿವರಾಗಿ ಅನುಭವ ಹೊಂದಿರುವ ಆಧಾರದ ಮೇಲೆ ತಮ್ಮಗೆ ಈ ಖಾತೆ ಬೇಕು ಎಂದು ಎಂಬಿಪಿ ಪಟ್ಟು ಹಿಡಿದಿದ್ಧಾರೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವದ ಆಧಾರದ ಮೇಲೆ ತಮ್ಮಗೆ ಈ ಖಾತೆ ನೀಡಬೇಕೆಂದು ಹೈಕಮಾಂಡ್ ಮುಂದೆ ಡಿಕೆಶಿ ವಾದ ಮಂಡಿಸಿದ್ದಾರೆ ಎಂದು ವರದಿಯಾಗಿದೆ.
ಯಾರತ್ತ ಸಿದ್ದು ಒಲವು?
ಇನ್ನು ಇಬ್ಬರು ಸಚಿವರ ನಡುವಿನ ಕಿತ್ತಾಟದಲ್ಲಿ ಮಧ್ಯ ಪ್ರವೇಶಿಸಿರುವ ಸಿಎಂ ಸಿದ್ದರಾಮಯ್ಯ ಎಂ.ಬಿ. ಪಾಟೀಲ್ ಪರ ಬ್ಯಾಟ್ ಬೀಸಿದ್ದಾರೆ ಎಂದು ತಿಳಿದು ಬಂದಿದ್ದು ಡಿಕೆಶಿಗಿಂತ ಎಂ.ಬಿ. ಪಾಟೀಲ್ ಉತ್ತಮ ಎಂದು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ.
ನೀರಾವರಿ ಖಾತೆಯನ್ನು ಬಿಟ್ಟುಕೊಡದಿರಲು ಡಿಸಿಎಂ ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದು ಇಬ್ಬರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರುವ ಲಕ್ಷಣಗಳು ಗೋಚರಿಸಿವೆ.