ಭುವನೇಶ್ವರ್: ಒಡಿಶಾದ ಬಾಲಾಸೋರ್ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿ ನಾಲ್ಕು ದಿನಗಳು ಕಳೆದರೂ 101 ಮೃತದೇಹಗಳ ಗುರುತು ಪತ್ತೆಯಾಗಬೇಕಿದೆ. ಅಲ್ಲದೆ, 200ಕ್ಕೂ ಹೆಚ್ಚು ಮಂದಿಗೆ ಈಗಲೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಪೂರ್ವ ಮಧ್ಯ ರೈಲ್ವೆಯ ವಿಭಾಗೀಯ ರೈಲ್ವೆ ಮ್ಯಾನೇಜರ್ ರಿಂಕೇಶ್ ರಾಯ್ ಮಾಹಿತಿ ನೀಡಿದ್ದಾರೆ.
ಅವಘಡದಲ್ಲಿ 1100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇವರಲ್ಲಿ 900 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 200 ಮಂದಿಗೆ ಒಡಿಶಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಮೃತಪಟ್ಟ 278 ಮಂದಿಯಲ್ಲಿ 101 ಮೃತದೇಹಗಳ ಗುರುತು ಇನ್ನು ಪತ್ತೆಹಚ್ಚಬೇಕಿದೆ ಎಂದು ರಾಯ್ ತಿಳಿಸಿದ್ದಾರೆ.
ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಶನ್ನ ಆಯುಕ್ತ ವಿಜಯ್ ಅಮೃತ್ ಕುಲಂಗೆ ಅವರು ಮಾತನಾಡಿ, ಭುವನೇಶ್ವರದಲ್ಲಿ ಇರಿಸಲಾಗಿರುವ ಒಟ್ಟು 193 ಶವಗಳಲ್ಲಿ 80 ಶವಗಳನ್ನು ಗುರುತಿಸಲಾಗಿದೆ. 55 ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಬಿಎಂಸಿಯ ಸಹಾಯವಾಣಿ ಸಂಖ್ಯೆ 1929ಕ್ಕೆ 200 ಕ್ಕೂ ಹೆಚ್ಚು ಕರೆಗಳು ಬಂದಿವೆ. ಮೃತ ದೇಹಗಳನ್ನು ಗುರುತಿಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ 30 ಕೋಟಿ ರೂ. ನೆರವು ನೀಡಿದ್ರಾ ಕೊಹ್ಲಿ? ಇಲ್ಲಿದೆ ಅಸಲಿ ಸಂಗತಿ…
ಅಪಘಾತ ಸಂಭವಿಸಿದ್ದು ಹೇಗೆ?
ಶುಕ್ರವಾರ (ಜೂ. 2) ಪಶ್ಚಿಮ ಬಂಗಾಳದ ಹೌರಾ ನಗರದಿಂದ ತಮಿಳುನಾಡಿನ ಚೆನ್ನೈಗೆ ತೆರಳುತ್ತಿದ್ದ ಕೊರಮಂಡಲ್ ಎಕ್ಸ್ಪ್ರೆಸ್ ರೈಲಿನ ಕೆಲವು ಬೋಗಿಗಳು ಹಳಿತಪ್ಪಿ ಪಕ್ಕದ ಹಳಿಗಳ ಮೇಲೆ ಬಿದ್ದವು. ಈ ವೇಳೆ ಮತ್ತೊಂದು ಕಡೆಯಿಂದ ಬರುತ್ತಿದ್ದ ಯಶವಂತಪುರ-ಹೌರಾ ಸೂಪರ್ಫಾಸ್ಟ್ ಟ್ರೈನ್, ಹಳಿಗಳ ಮೇಲೆ ಬಿದ್ದಿ ಕೋರಮಂಡಲ್ ಎಕ್ಸ್ಪ್ರೆಸ್ ಟ್ರೈನ್ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ 278 ಮೃತಪಟ್ಟು 1100ಕ್ಕೂ ಹೆಚ್ಚು ಮಂದಿ ಗಾಯಗೊಂಡರು. (ಏಜೆನ್ಸೀಸ್)
ಒಡಿಶಾ ರೈಲು ದುರಂತ: ಭಾರತ ಇತಿಹಾಸದಲ್ಲಿ ಸಂಭವಿಸಿರುವ ಭೀಕರ ರೈಲು ಅಪಘಾತಗಳ ಚಿತ್ರಣ ಇಲ್ಲಿದೆ…
ವಾಹನ ಸವಾರರೇ ಎಚ್ಚರ: ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ರೆ ದಂಡದ ಜತೆ ಕ್ರಿಮಿನಲ್ ಕೇಸ್ ಸಹ ದಾಖಲಾಗುತ್ತೆ!