Qatar: ಭಾರತೀಯ ದೂತವಾಸದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರವು(ICC) ಆಯುರ್ವೇದ ದಿನಾಚರಣೆಯನ್ನು ಆಚರಿಸಿತು. ಭಾರತೀಯ ದೂತವಾಸದ ಉಪಮುಖ್ಯಸ್ಥರಾದ ಶ್ರೀ ಸಂದೀಪ್ ಕುಮಾರ್ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಮುಖ ಭಾಷಣಕಾರರಾಗಿ ಡಾಕ್ಟರ್ ಫಸಿಹ ಅಷ್ಕರ್ ಅವರು “ಆಯುರ್ವೇದ ಹಾಗು ಪ್ರಪಂಚದ ಆರೋಗ್ಯ” ಎಂಬ ವಿಷಯದ ಕುರಿತು ಸಭಿಕರಿಗೆ ಭಾಷಣ ನೀಡಿದರು.
ಐಸಿಸಿ ಕಾರ್ಯದರ್ಶಿಗಳಾದ ಶ್ರೀ.ಆ ಬ್ರಹ್ಮ ಜೋಸೆಫ್ ಅವರು ಸಭಿಕರನ್ನು ಸ್ವಾಗತಿಸಿದರು. ಐಸಿಸಿ ಉಪಾಧ್ಯಕ್ಷರಾದ ಕರ್ನಾಟಕ ಮೂಲದವರಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲ ಉದ್ದೇಶವನ್ನು ತಿಳಿಸಿದರು ಹಾಗು ವಿವಿಧ ದಿನಾಚರಣೆಗಳನ್ನು ಆಚರಿಸುವ ಪ್ರಾಮುಖ್ಯತೆಯನ್ನು ವಿಶ್ಲೇಷಿಸಿದರು.
ಮುಖ್ಯ ಅತಿಥಿಗಳಾದ ಶ್ರೀ ಸಂದೀಪ್ ಕುಮಾರ್ ಅವರು, ಆಯುರ್ವೇದದ ಮಹತ್ವ ಹಾಗೂ ಮಾನವ ಕುಲದ ಮೇಲೆ ಅದರ ಪ್ರಭಾವದ ಬಗ್ಗೆ ಮಾತನಾಡಿದರು. ಐಸಿಸಿ ಮಾನವ ಸಂಪನ್ಮೂಲ ಹಾಗೂ ರಾಜ ದೂತಾವಾಸ ಕಾರ್ಯಾಲಯದ ಸೇವೆಗಳ ಮುಖ್ಯಸ್ಥರಾದ ಶ್ರೀ ಸಜೀವ್ ಸತ್ಯಶೀಲನ್ ಅವರು ವಂದನಾರ್ಪಣೆಯನ್ನು ಸಲ್ಲಿಸಿದರು.
ಸಂಪೂರ್ಣ ಕಾರ್ಯಕ್ರಮವನ್ನು ಐಸಿಸಿ ಶಾಲಾ ಚಟುವಟಿಕೆಗಳ ಮುಖ್ಯಸ್ಥರಾದ ಶ್ರೀ ಶಂತನು ದೇಶ್ಪಾಂಡೆ ಅವರು ನಡೆಸಿಕೊಟ್ಟರು. ಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮೋಹನ್ ಕುಮಾರ್, ಇತರ ಆಡಳಿತ ಸಮಿತಿಯ ಸದಸ್ಯರು ಹಾಗೂ. ಭಾರತೀಯ ಸಮುದಾಯದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಈ ಆಚರಣೆಯ ಸಮಾರಂಭದಲ್ಲಿ ಉಪಸ್ಥಿತರಿದ್ದರು.