ಕಡೂರು: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿ ಹೊಸ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ.
ಇನ್ನು ಚುನಾವಣೆಯ ಕಾವು ಮುಗಿದಿದ್ದು ಗೆದ್ದ ಅಭ್ಯರ್ಥಿಗಳು ಸಂಭ್ರಮದಲ್ಲಿ ತೊಡಗಿದ್ದರೆ ಸೋತರವು ಪರಮಾರ್ಶೆಯಲ್ಲಿ ನಿರತರಾಗಿದ್ದಾರೆ ಮತ್ತು ಈ ಭಾರಿ ಆದ ಎಡವಟ್ಟುಗಳು ಮುಂದಿನ ಸಾರಿ ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಇನ್ನು ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಕದ ತಟ್ಟಿ ಟಿಕೆಟ್ ಸಿಗದೆ ಜೆಡಿಎಸ್ಗೆ ಮರಳಿ ಕಡೂರು ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತರಾಗಿದ್ದ ವೈಎಸ್.ವಿ ದತ್ತಾ ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಬಹಿರಂಗ ಪತ್ರ ಒಂದನ್ನು ಬರೆದಿದ್ದಾರೆ.
ಸದಾ ಕೃತಜ್ಞನಾಗಿರುತ್ತೇನೆ
2023ರ ರಾಜ್ಯ ವಿಧಾನಸಭೆ ಚುನಾವಣೆ ಅತ್ಯಂತ ಶಾಂತಿಯುತವಾಗಿ ಸಂಪನ್ನವಾಗಿದೆ. ಕಳೆದ 30ದಿನಗಳಿಂದ ನಿಮ್ಮ ಮನೆ ಹಾಗೂ ಗ್ರಾಮಗಳಿಗೆ ಮತಯಾಚಿಸಲು ಬಂದಿದ್ದೇನೆ. ನಾನು ಬಂದ ಸಂದರ್ಭದಲ್ಲಿ ನೀವು ತೋರಿದ ಪ್ರೀತಿ, ವಿಶ್ವಾಸ, ಆತಿಥ್ಯಕ್ಕೆ ಸದಾ ಕೃತಜ್ಞನಾಗಿರುತ್ತೇನೆ.
2023ರ ಚುನಾವಣೆ ನನ್ನ ಪಾಲಿಗೆ ಅವಿಸ್ಮರಣೀಯ ಆಗಬಹುದೆಂಬ ಆಶಾಭಾವನೆ ಮೂಡಿತ್ತು. ಅದಲ್ಲದೆ ಇದು ನನ್ನ ಕಡೇ ಚುನಾವಣೆ ಎಂದು ನಿಮ್ಮೆಲ್ಲರಿಗೆ ತಿಳಿಸಿದ್ದೆ. ಆದರೆ, ಚುನಾವಣೆ ಮುಗಿದು ಫಲಿತಾಂಶ ಹೊರಬಂದ ಮೇಲೆ ನನಗೆ ವಾಸ್ತವ ದರ್ಶನವಾಯಿತು.
ಇದನ್ನೂ ಓದಿ: ವೀರಶೈವ-ಲಿಂಗಾಯತರಿಗೆ ಸಿಎಂ ಸ್ಥಾನ ಒತ್ತಾಯಿಸಿ ಖರ್ಗೆಗೆ ಪತ್ರ ಬರೆದ ಶಾಮನೂರು ಶಿವಶಂಕರಪ್ಪ
ಸಮಾನಾಗಿ ನೋಡಿದ್ದೇನೆ
2006ರಲ್ಲಿ ನಾನು ಕಡೂರು ಕ್ಷೇತ್ರಕ್ಕೆ ಅನಿವಾರ್ಯವಾಗಿ ಬಂದ ದಿನದಿಂದ 2023ರವೆರಗೂ ನನ್ನ ನಡವಳಿಕೆ, ನಿರ್ಧಾರ ಹಾಗು ಮತದಾರನೊಂದಿಗಿನ ಸಂಬಂಧದ ಬಗ್ಗೆ ನಾನೇ ಎಲ್ಲೋ ಎಡವಿದ್ದೇನೆ ಎಂಬ ಅನುಮಾನ ಕಾಡತೊಡಗಿದೆ.
ಚುನಾವಣಾ ಫಲಿತಾಂಶದ ಬಗ್ಗೆ ನಾನು ಎಂದು ತಲೆಕೆಡಿಸಿಕೊಂಡವನಲ್ಲ. ನನ್ನ ರಾಜಕೀಯ ಜೀವನದಲ್ಲಿ ಗೆಲುವಿಗಿಂತ ಸೋಲನ್ನೇ ಜಾಸ್ತಿ ನೋಡಿದ್ದೇನೆ. ಎರಡನ್ನು ಸಮಾನಾವಾಗಿ ಸ್ವೀಕರಿಸುವ ಮನೋಭಾವ ನನದು ಹಾಗಾಗಿ ಬಂದ ಫಲಿತಾಂಶದ ಬಗ್ಗೆ ನನಗೆ ಎರ್ಳಳಷ್ಟು ಬೇಸರವಿಲ್ಲ.
ನಾನೀಗ ಆತ್ಮವಾಲೋಕನ ಮಾಡಿಕೊಳ್ಳಬೇಕಿದೆ ಚುನಾವಣೆಯಲ್ಲಿ ನಾನು ಎಲ್ಲಿ ಎಡವಿದೆ ಮತದಾರ ಬಂಧುಗಳಾದ ನಿಮ್ಮ ನಿರೀಕ್ಷೆಯನ್ನು ಮುಟ್ಟಲು ಎಲ್ಲಿ ವಿಫಲನಾಗಿದ್ದೇನೆ ಎಂಬುದರ ಕುರಿತು ಚಿಂತನ-ಮಂಥನ ಮಾಡುತ್ತಿದ್ದೇನೆ.
ಈ ಸೋಲು ನನ್ನ ಉತ್ಸಾಹವನ್ನು ಕಡಿಮೆ ಮಾಡಿಲ್ಲ ಚುನಾವಣಾ ರಾಜಕೀಯದಿಂದ ಹೊರನಡೆಯಲು ತೀರ್ಮಾನಿಸಿದ್ದೇನೆ. ಆದರೆ, ಸಕ್ರಿಯ ರಾಜಕರಾಣದಿಂದ ದುರ ಸರಿಯುವ ಮಾತಿಲ್ಲ.
ಪ್ರಾಯಶ್ಚಿತ ಪಾದಯಾತ್ರೆ
ಕಳೆದ 17 ವರ್ಷಗಳಿಂದ ನೀವು ತೋರಿರುವ ಪ್ರೀತಿ, ಅಭಿಮಾನದ ಕಾರಣಕ್ಕಾಗಿ ನಿಮ್ಮ ಋಣ ತೀರಿಸುವ ಹಾಗೂ ನನ್ನ ಕೊನೆಯ ಉಸಿರಿರುವವರೆಗೂ ನಿಮ್ಮೊಂದಿಗೆ ಇದ್ದು ಈ ನೆಲದಲ್ಲಿಯೇ ಮಣ್ಣಾಗಬೇಕು ಎಂಬ ದೃಢ ಸಂಕಲ್ಪ ಮಾಡಿರುತ್ತೇನೆ.
ಈ ನಿಟ್ಟಿನಲ್ಲಿ ನಾನೊಂದು ನಿರ್ಧಾರಕ್ಕೆ ಬಂದಿದ್ದು ಜೂನ್ 24ರಂದು ನನ್ನ 70ನೇ ಜನ್ಮದಿನ. ನನ್ನ ಜನ್ಮದಿನದಂದು ಪಾದಯಾತ್ರೆಯನ್ನು ಆರಂಭಿಸಿ ನಿಮ್ಮ ನಿಮ್ಮ ಊರುಗಳಿಗೆ ಬಂದು ನಾನು ನನ್ನ ತಪ್ಪುಗಳನ್ನು ನಿಮ್ಮ ಬಳಿ ನಿವೇದಿಸಿಕೊಂಡು ನಿಮ್ಮ ಕ್ಷಮೆ ಕೇಳುವ ಸಲುವಾಗಿ ನಾನೇ ಪ್ರಾಯಶ್ಚಿತ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೇನೆ.
ಪ್ರಾಯಶ್ಚಿತ ಪಾದಯಾತ್ರೆ ಎಂಬ ಹೆಸರಿನಲ್ಲಿ ನಾನು ನಿಮ್ಮಲ್ಲಿಗೆ ಬರುತ್ತಿದ್ದೇನೆ. ಇದು ಯಾವುದೇ ಚುನಾವಣೆಯ ದೃಷ್ಟಿಯಿಂದಲ್ಲ . ಬದಲಿಗೆ ನಾನೇ ಮಾಡಿರಬಹುದಾದ ಅನೇಕ ತಪ್ಪುಗಳಿಗೆ ನೀವು ನೀಡಿರುವ ಶಿಕ್ಷೆಗೆ ಪ್ರಾಯಶ್ಚಿತ ಮಾಡಿಕೊಳ್ಳಲು ಇದು ಸಕಾಲವಾಗಿದ್ದು ಈ ಕ್ರಮಕ್ಕೆ ಮುಂದಾಗಿದ್ದೇನೆ. ಜೂನ್ ಮೊದಲನೇ ವಾರ ಪಾದಯಾತ್ರೆಯ ಪ್ರವಾಸದ ವಿವರವನ್ನು ನಿಮಗೆ ತಲುಪಿಸುತ್ತೇನೆ ಎಂದು ವೈಎಸ್.ವಿ ದತ್ತಾ ತಿಳಿಸಿದ್ದಾರೆ.