ನವದೆಹಲಿ: ಆಪರೇಷನ್ ಸಿಂಧೂರ್ ಮುಖಾಂತರ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ದ ಪ್ರತೀಕಾರ ತೀರಿಸಿಕೊಂಡ ಭಾರತ, ಇದೀಗ ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನದ ಉಗ್ರರ ಮುಖವಾಡವನ್ನು ಬಯಲು ಮಾಡಲು ಪಣ ತೊಟ್ಟಿದೆ.
ಇನ್ನೂ ಪಾಕಿಸ್ತಾನ ಏನೆಂಬುದನ್ನು ಜಗತ್ತಿಗೆ ಅರ್ಥ ಮಾಡಿಸಲು ಎಲ್ಲರ ಮುಂದೆ ಅದರ ಮುಖವಾಡ ಕಳಚಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಈ ನಿಯೋಗದ ಭಾಗವಾಗಿರಲು ಸರ್ಕಾರದಿಂದ ಹೆಸರಿಸಲ್ಪಟ್ಟ ತೃಣಮೂಲ ಕಾಂಗ್ರೆಸ್ ಸಂಸದ ಯೂಸುಫ್ ಪಠಾಣ್, ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರವು ತೃಣಮೂಲ ಕಾಂಗ್ರೆಸ್ಅನ್ನು ಸಂಪರ್ಕಿಸದೆ ಯೂಸುಫ್ ಪಠಾಣ್ ಅವರ ಹೆಸರನ್ನು ಸೇರಿಸಿತ್ತು. ವಿದೇಶಾಂಗ ನೀತಿಯು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಅಂತಹ ವಿಷಯಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ಹೊಣೆಗಾರಿಕೆಯನ್ನು ಹೊರಬೇಕು ಎಂದು ತೃಣಮೂಲ ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ ಮತ್ತು ಅವರ ಸಂಸದ ಯೂಸುಫ್ ಪಠಾಣ್ ಆಪರೇಷನ್ ಸಿಂಧೂರ್ನ ಸರ್ವಪಕ್ಷ ನಿಯೋಗದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
51 ರಾಜಕೀಯ ನಾಯಕರು, ಸಂಸದರು ಮತ್ತು ವಿವಿಧ ಪಕ್ಷಗಳ ಮಾಜಿ ಸಚಿವರನ್ನು ಒಳಗೊಂಡ ನಿಯೋಗಗಳು, ವಿಶೇಷವಾಗಿ ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ನಿಲುವನ್ನು ಪ್ರದರ್ಶಿಸಲು ಅಂತರರಾಷ್ಟ್ರೀಯ ರಾಜಧಾನಿಗಳಿಗೆ ಭೇಟಿ ನೀಡಲಿವೆ.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಮತ್ತು ಆಪರೇಷನ್ ಸಿಂದೂರ್ ವಿರುದ್ಧ ಭಾರತದ ರಾಜತಾಂತ್ರಿಕ ಕಾರ್ಯಾಚರಣೆಗೆ ಪಕ್ಷದ ಯಾವುದೇ ಪ್ರತಿನಿಧಿಯನ್ನು ಕಳುಹಿಸಲು ನಿರಾಕರಿಸಿದ್ದರಿಂದ ಈ ಉಪಕ್ರಮವು ಸ್ವಲ್ಪ ಹಿನ್ನಡೆ ಅನುಭವಿಸಿದೆ.
ಇದನ್ನೂ ಓದಿ: ವಿಜಯಲಕ್ಷ್ಮಿ-ದರ್ಶನ್ ಆ್ಯನಿವರ್ಸರಿ; ಮುದ್ದು ರಾಕ್ಷಸಿ ಹಾಡಿಗೆ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದ ದಂಪತಿಗಳು| Darshan
ಕೇಂದ್ರ ಸರ್ಕಾರವು ಮೇ ತಿಂಗಳ ಕೊನೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರು ಸೇರಿದಂತೆ ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಏಳು ಸರ್ವಪಕ್ಷ ನಿಯೋಗಗಳನ್ನು ಕಳುಹಿಸಲಿದೆ. ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತದ ನಿರಂತರ ಹೋರಾಟವನ್ನು ಪ್ರತಿಪಾದಿಸಲು ಆಪರೇಷನ್ ಸಿಂಧೂರ್ ಮತ್ತು ಪಹಲ್ಗಾಮ್ ದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇದರ ನೇತೃತ್ವವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ಗೆ ನೀಡಲಾಗಿದೆ.
ಸರ್ವಪಕ್ಷ ನಿಯೋಗಗಳು ಭಾರತದ ಒಗ್ಗಟ್ಟಿನ ನಿಲುವು ಮತ್ತು ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಹೋರಾಡುವ ಅಚಲ ಬದ್ಧತೆಯನ್ನು ಪ್ರತಿಬಿಂಬಿಸಲಿವೆ. ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ದೇಶದ ಸ್ಪಷ್ಟ ಸಂದೇಶವನ್ನು ಅವರು ಜಾಗತಿಕ ವೇದಿಕೆಗೆ ಕೊಂಡೊಯ್ಯಲಿದ್ದಾರೆ.
(ಏಜೆನ್ಸೀಸ್)