ಬೆಂಗಳೂರು: ಕಳೆದ ವರ್ಷ ಬಿಸಿಲಿನ ಝಳಕ್ಕೆ ಬಳಲಿ ಬೆಂಡಾಗಿದ್ದ ಕರುನಾಡು, ಈ ವರ್ಷವೂ ಅಧಿಕ ತಾಪಮಾನ ಎದುರಿಸಲು ಅಣಿಯಾಗಬೇಕಿದೆ. ಜಾಗತಿಕ ತಾಪಮಾನ ಏರಿಕೆ, ತೇವಾಂಶ ಕೊರತೆ, ಶುಭ್ರ ಆಕಾಶ, ಒಣಗಾಳಿ ಬೀಸುವುದೂ ಸೇರಿ ವಿವಿಧ ಕಾರಣಗಳಿಂದ ಬಹುತೇಕ ಜಿಲ್ಲೆಗಳ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 3-4 ಡಿ.ಸೆ. ಉಷ್ಣಾಂಶ ಹೆಚ್ಚಳವಾಗಲಿದ್ದು, ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ಕೊಟ್ಟಿದೆ.
ಸಾಮಾನ್ಯವಾಗಿ ಬೇಸಿಗೆ ಕಾಲ ಮಾರ್ಚ್ನಿಂದ ಆರಂಭವಾಗಿ ಮೇ ವರೆಗೆ ಇರಲಿದೆ. ಆದರೆ, ಈ ಬಾರಿ ವಾಡಿಕೆಗೂ ಮುನ್ನವೇ ಬೇಸಿಗೆ ಶುರುವಾಗುವ ಸಾಧ್ಯತೆ ಇದೆ. ಏಪ್ರಿಲ್ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ನಲ್ಲೇ ಅಧಿಕವಾಗಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3-4 ಡಿ.ಸೆ. ಹೆಚ್ಚು ಉಷ್ಣಾಂಶ ವರದಿಯಾಗಲಿದೆ. ರಾಜ್ಯದ ಶೇ.90 ಪ್ರದೇಶ ಬಿಸಿಲಿನ ತಾಪಕ್ಕೆ ನಲುಗಲಿವೆ. ಗರಿಷ್ಠ ತಾಪಮಾನದಲ್ಲಿ 40 ಡಿ.ಸೆ.ಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಶಾಖ ಅಲೆ ಎಂದು ಕರೆಯಲಾಗುತ್ತದೆ. ಆರು ವರ್ಷಗಳಿಂದ ಬಹುತೇಕ ಜಿಲ್ಲೆಗಳಲ್ಲಿ ಅಧಿಕ ತಾಪಮಾನ ದಾಖಲಾಗುತ್ತಿದೆ.
ಹೆಚ್ಚಳಕ್ಕೆ ಕಾರಣ?
ಮಣ್ಣಿನಲ್ಲಿ ತೇವಾಂಶ ಕೊರತೆ, ಕೆರೆ&ಕುಂಟೆಗಳಲ್ಲಿ ನೀರು ಬರಿದಾಗುವುದು, ತೇವಾಂಶ ಭರಿತ ಮೋಡ ಇಲ್ಲದಿರುವುದು, ಅರಣ್ಯ ನಾಶ, ಪಳೆಯುಳಿಕೆ ಇಂಧನ ಸುಡುವುದು, ತಗ್ಗದ ಎಲ್&ನಿನೋ ಪ್ರಭಾವ, ಕರ್ನಾಟಕದ ಹೆಚ್ಚಿನ ಭಾಗಗಳು ಶುಷ್ಕ, ಅರೆ ಶುಷ್ಕ ಸ್ಥಿತಿ.
ಬಿಗಾಡಾಯಿಸಲಿದೆ ನೀರಿನ ಸಮಸ್ಯೆ?
ಈ ಬಾರಿ ವಾಡಿಗೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ಜಲಾಶಯಗಳು, ನದಿಗಳು, ಕೆರೆ&ಕುಂಟೆಗಳಲ್ಲಿ ಯಥೇಚ್ಛ ನೀರು ಸಂಗ್ರಹವಾಗಿದೆ. ಈ ವರ್ಷ 4 ತಿಂಗಳು ಬೇಸಿಗೆ ಇರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಾಡಾಯಿಸಬಹುದು. ಅಂತರ್ಜಲ ಮಟ್ಟ ಕುಸಿದು ಬೋರ್ವೆಲ್ಗಳು ಬತ್ತುವ ಆತಂಕ ಎದುರಾಗಿದೆ.
ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ಕಾರವಾರ, ಕಲಬುರಗಿ, ಗದಗ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈಗಾಗಲೇ ವಾಡಿಕೆಗಿಂತ 2&3 ಡಿ. ಸೆ. ಅಧಿಕ ತಾಪಮಾನ ದಾಖಲಾಗುತ್ತಿದೆ. ಪ್ರಸಕ್ತ ತಿಂಗಳ 2ನೇ ಅಥವಾ 3ನೇ ವಾರದಿಂದ ಬೇಸಿಗೆ ಶುರುವಾಗುವ ಸಾಧ್ಯತೆ ಇದೆ. ಈ ಬಾರಿ 4 ತಿಂಗಳು ಬಿಸಿಲು ಇರಲಿದೆ.
ಸಿ.ಎಸ್.ಪಾಟೀಲ್. ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ.