ಬೆಂಗಳೂರು: ಮುಂದಿನ ಐದು ವರ್ಷಗಳ ಕಾಲವೂ ಸಿದ್ದರಾಮಯ್ಯ ಸಿಎಂ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಎಂಬಿ ಪಾಟೀಲ್ ಹೇಳಿಕೆ ನೀಡಿದ್ದ ನಂತರ ಎಲ್ಲರಲ್ಲೂ ಗೊಂದಲ ಶುರುವಾಗಿತ್ತು. ಅಲ್ಲಿಗೆ ಅಧಿಕಾರದ ಹಂಚಿಕೆ ಬಗ್ಗೆ ಅನೇಕ ಪ್ರಶ್ನೆಗಳು ಎದ್ದವು. ಈ ವಿಚಾರವನ್ನು ತಣಿಸಲು ಕಡೆಗೆ ಎಂಬಿ ಪಾಟೀಲ್ ಖುದ್ದಾಗಿ ಸ್ಪಷ್ಟಿಕರಣ ನೀಡಿದ್ದರು.
ಅದಾದ ಮೇಲೆ ಪ್ರಿಯಾಂಕ್ ಖರ್ಗೆ ಮುಂತಾದವರೂ ಈ ಗೊಂದಲಕ್ಕೆ ತಡೆ ಹಾಕಲು ಹೇಳಿಕೆ ನೀಡಿ ಪ್ರಯತ್ನಿಸದರು. ಅದಾದ ಮೇಲೆ ಇದೀಗ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ರಾಜ್ಯ ಕಾಂಗ್ರೆಸ್ ನಾಯಕರಿಗೆ ಖಡಕ್ ಸಂದೇಶ ರವಾನೆ ಮಾಡಿದ್ದಾರೆ.
ಅಧಿಕಾರ ಹಂಚಿಕೆ ಸೂತ್ರ ವಿವಾದ ವಿಚಾರವಾಗಿ ಎಂ ಬಿ ಪಾಟೀಲ್ ಹೇಳಿಕೆ ನೀಡಿದ್ದ ಬಳಿಕ ಹೈಕಮಾಂಡ್ ಮಧ್ಯ ಪ್ರದೇಶ ಮಾಡಿದೆ. ಇದೀಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಣದ ಶಾಸಕ-ಸಚಿವರಿಗೆ ಸೂಚನೆ ನೀಡಿದ್ದು “ಯಾರೂ ಕೂಡ ಅನಗತ್ಯ ಹೇಳಿಕೆ ನೀಡಬಾರದು. ಸಿಎಂ ಡಿಸಿಎಂ ನಡುವಿನ ಮಾತುಕತೆಗಳು ನಾಲ್ಕು ಗೋಡೆಯ ಮಧ್ಯೆ ನಡೆದಿರುವುದು. ಯಾರೂ ಕೂಡ ಗೊಂದಲ ಮೂಡಿಸುವ ಹೇಳಿಕೆ ನೀಡಬೇಡಿ. ಗೊಂದಲ ಮೂಡಿಸುವ ಹೇಳಿಕೆ ನೀಡಿದರೆ ಎಐಸಿಸಿ ಗಮನಿಸುತ್ತದೆ. ಎಐಸಿಸಿ ಎಲ್ಲವನ್ನೂ ಗಮನಿಸುತ್ತದೆ. ಯಾವುದೇ ತೀರ್ಮಾನಗಳಿದ್ದರೂ ಎಐಸಿಸಿ ನಾಯಕರೇ ತೀರ್ಮಾನಿಸುತ್ತಾರೆ” ಎಂದು ರಾಜ್ಯ ಕಾಂಗ್ರೆಸ್ಸಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.