ಹೊಸನಗರ: ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿ ಕರಿಗೆರಸು ಗ್ರಾಮದ ಹಿಂಡ್ಲೆಮನೆಯಲ್ಲಿ ನವಶಿಲಾಯುಗ ಕಾಲದ, 3500 ವರ್ಷ ಹಳೆಯದು ಎನ್ನಲಾದ ಉಂಗುರ ಆಕಾರದ ಡೋಲೆರೈಟ್ ಕಲ್ಲು ಪತ್ತೆಯಾಗಿದೆ.
ಹಿಂಡ್ಲೆಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಿಕ್ಷಕ ಹನುಮಂತಪ್ಪ ಎಂಬುವರಿಗೆ ಕಲ್ಲು ಸಿಕ್ಕಿದೆ. ಇದು ಈ ಪ್ರದೇಶದಲ್ಲಿ ಮೊದಲು ಜನವಸತಿ ಆರಂಭವಾಗಿರುವುದಕ್ಕೆ ಜೀವಂತ ಸಾಕ್ಷಿಯಾಗಿದೆ. ಈ ಅವಧಿಯಲ್ಲಿ ನೆಲೆಗೊಂಡ ಮಾನವನ ಜೀವನಶೈಲಿ ಆರಂಭದ ದಿನಗಳನ್ನು ತಿಳಿಯಬಹುದು.
ಕಬ್ಬಿಣದ ಆವಿಷ್ಕಾರಕ್ಕೂ ಮೊದಲು ತಯಾರಿಸಲಾದ ಉಂಗುರ ಆಕಾರದ ಕಲ್ಲನ್ನು ಅಗೆಯಲು, ಮೀನು ಹಿಡಿಯಲು ಬಲೆಗಳನ್ನು ನೀರಿನಲ್ಲಿ ಮುಳುಗಿಸಲು ಒಂದು ತೂಕವಾಗಿ ಮತ್ತು ಮಣಿಗಳಿಗೆ ಹೊಳಪು ಕೊಡಲು ಆಧಾರವಾಗಿ ಬಳಸಲಾಗುತ್ತಿತ್ತು. ನವಶಿಲಾಯುಗದ ಅವಧಿಯು ನೆಲೆಗೊಂಡ ಮಾನವ ಜೀವನಶೈಲಿ ಆರಂಭದಿಂದ ನಿರೂಪಿಸಲ್ಪಟ್ಟಿದೆ. ಜನರು ಕೇವಲ ಬೇಟೆ ಮತ್ತು ಸಂಗ್ರಹಣೆ ಮೇಲೆ ಅವಲಂಬಿತ ಆಗುವುದಕ್ಕಿಂತ ಹೆಚ್ಚಾಗಿ ಸಸ್ಯಗಳನ್ನು ಬೆಳೆಸಲು ಮತ್ತು ಆಹಾರಕ್ಕಾಗಿ ಪ್ರಾಣಿಗಳನ್ನು ಸಾಕಲು ಕಲಿಯುತ್ತಾರೆ. ಇದು ಹೆಚ್ಚು ಅತ್ಯಾಧುನಿಕ ಕಲ್ಲಿನ ಉಪಕರಣಗಳ ಬಳಕೆಗೆ ಹೊಂದಿಕೆಯಾಗಿದ್ದು, ಕೃಷಿ ಮತ್ತು ಪ್ರಾಣಿಗಳ ಹಿಂಡಿಗೆ ಉಪಯುಕ್ತವಾಗಿತ್ತು ಎಂದು ಇತಿಹಾಸ ಸಂಶೋಧಕ ಅಜಯ್ ಶರ್ಮಾ ಮಾಹಿತಿ ನೀಡಿದ್ದಾರೆ.
ಪತ್ತೆಯಾದ ಕಲ್ಲು ಕ್ರಿ.ಪೂ. 1500ರಿಂದ ಕ್ರಿ.ಪೂ.800 (ಸಾಮಾನ್ಯ ಯುಗದ ಮೊದಲು) ವರ್ಷ ಹಿಂದಿನದು. ಇದಕ್ಕೆ ಇನ್ನಷ್ಟು ಪೂರಕ ದಾಖಲೆ ಸಿಕ್ಕಲ್ಲಿ ಇದರ ಪ್ರಾಚೀನತೆ ಇನ್ನಷ್ಟು ಹೆಚ್ಚಾಗಲಿದೆ. ಕೆಲ ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮೇಗುಂದ ಹೋಬಳಿ ವ್ಯಾಪ್ತಿ ಅಗಳಗಂಡಿ ಗ್ರಾಮದ ನವಿಲರೆಕಲ್ಲು ಎಂಬಲ್ಲಿ ಇದೆ ರೀತಿ 6000 ವರ್ಷ ಹಿಂದಿನ ಕಾಲದ ಕಲ್ಲು ಪತ್ತೆಯಾಗಿತ್ತು ಎಂದು ಅಜಯ್ ಶರ್ಮಾ ತಿಳಿಸಿದ್ದಾರೆ.