ನವದೆಹಲಿ: ಯುದ್ಧ ಪೀಡಿತ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ನಲ್ಲಿ ನೆಲಸಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ತವರಿಗೆ ಕರೆತರಲು ಆಪರೇಷನ್ ಅಜಯ್ ಕಾರ್ಯಾಚರಣೆ ಆರಂಭವಾಗಿದ್ದು, 212 ಭಾರತೀಯರನ್ನು ಹೊತ್ತ ಮೊದಲ ವಿಶೇಷ ವಿಮಾನ ಶುಕ್ರವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
ಇಸ್ರೇಲ್ನಿಂದ ಆಗಮಿಸಿದ ಭಾರತೀಯ ಪ್ರಜೆಗಳನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಖುದ್ದು ಹಾಜರಿದ್ದರು. ವಿಶೇಷ ವಿಮಾನವು ಗುರುವಾರ ಸಂಜೆ ಇಸ್ರೆಲ್ನ ಟೆಲ್ ಅವೀವ್ನಲ್ಲಿರುವ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ 211 ವಯಸ್ಕರು ಮತ್ತು ಒಂದು ಮಗು ಸೇರಿದಂತೆ ಒಟ್ಟು 212 ಭಾರತೀಯರನ್ನು ಹೊತ್ತು ಹೊರಟಿತು. ಅಂದಹಾಗೆ ಬೆನ್ ಗುರಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಸ್ರೇಲ್ನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದು ಲಾಡ್ ನಗರದ ಉತ್ತರ ಹೊರವಲಯದಲ್ಲಿದೆ.
ಭಾರತೀಯರ ರಕ್ಷಣೆಗಾಗಿ ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಿಷನ್ ಡೇಟಾಬೇಸ್ ಅನ್ನು ಆರಂಭಿಸಿತು. ಅದರಲ್ಲಿ ಯಾರು ಮೊದಲು ನೋಂದಾಯಿಸಿಕೊಂಡರೋ ಅವರಿಗೆ ಮೊದಲ ಹಂತದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಪ್ರಯಾಣದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ.
ಇದನ್ನೂ ಓದಿ: ವಿಶ್ವಕಪ್ನಲ್ಲಿ ಪಾಕಿಸ್ತಾನ ಎದುರು ಭಾರತ ಅಜೇಯ; ಹೀಗಿದ್ದವು ಹಿಂದಿನ 7 ಮುಖಾಮುಖಿಗಳು…
ಏರ್ ಇಂಡಿಯಾ ವಿಮಾನ ಸೇವೆ ಅಮಾನತು
ಅ.7ರ ಶನಿವಾರದಂದು ಪ್ಯಾಲೆಸ್ತೀನ್ನ ಹಮಾಸ್ ಉಗ್ರರ ಗುಂಪು ಇಸ್ರೇಲ್ ಮೇಲೆ ಏಕಾಏಕಿ 5 ಸಾವಿರ ರಾಕೆಟ್ಗಳಿಂದ ದಾಳಿ ಮಾಡಿದ ಬಳಿಕ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಯುದ್ಧದ ತೀವ್ರ ಹೆಚ್ಚಿದೆ. ಯುದ್ಧ ಆರಂಭವಾದ ದಿನವೇ ಏರ್ ಇಂಡಿಯಾ ವಿಮಾನ ಸಂಸ್ಥೆ ತನ್ನ ವಿಮಾನಗಳ ಸಂಚಾರವನ್ನು ಅಮಾನತಿನಲ್ಲಿ ಇಟ್ಟಿದೆ. ಈವರೆಗೂ ತನ್ನ ಕಾರ್ಯಾಚರಣೆಯನ್ನು ಏರ್ ಇಂಡಿಯಾ ಆರಂಭಿಸಿಲ್ಲ. ಹೀಗಾಗಿ ಇಸ್ರೇಲ್ನಲ್ಲಿ ಸಿಲುಕಿ ಭಯದಲ್ಲೇ ದಿನ ಕಳೆಯುತ್ತಿರುವ ಭಾರತೀಯರ ನೆರವಿಗೆ ಕೇಂದ್ರ ಸರ್ಕಾರ ಆಪರೇಷನ್ ಅಜಯ್ ಹೆಸರಿನಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.
ಆಪರೇಷನ್ ಅಜಯ್ ಕಾರ್ಯಾಚರಣೆ ನಡೆಯುತ್ತಿದೆ. 212 ನಾಗರಿಕರು ಸುರಕ್ಷಿತವಾಗಿ ದೆಹಲಿಗೆ ಹಿಂತಿರುಗಿದ್ದಾರೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಯುದ್ಧ ಭೀತಿಯಲ್ಲಿರುವ ಭಾರತೀಯರು ಸ್ವದೇಶಕ್ಕೆ ಹಿಂತಿರುಗಲು ‘ಆಪರೇಷನ್ ಅಜಯ್’ ಅಡಿಯಲ್ಲಿ ಟೆಲ್ ಅವಿವ್ನಿಂದ ಕಾರ್ಯನಿರ್ವಹಿಸುತ್ತಿರುವ ವಿಶೇಷ ವಿಮಾನವನ್ನು ಹತ್ತಲು ವಿಮಾನ ನಿಲ್ದಾಣದಲ್ಲಿ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇಸ್ರೇಲ್ನಲ್ಲಿ 18 ಸಾವಿರ ಮತ್ತು ಪ್ಯಾಲೆಸ್ತೀನ್ನಲ್ಲಿ 17 ಮಂದಿ ಭಾರತೀಯರಿದ್ದಾರೆ.
ಆಪರೇಷನ್ ಗಂಗಾ ನೆನಪು
ಕಳೆದ ವರ್ಷ ರಷ್ಯಾ ಮತ್ತು ಯೂಕ್ರೇನ್ ನಡುವೆ ಯುದ್ಧ ಪ್ರಾರಂಭವಾದಾಗ ಯೂಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಭಾರತ ಆಪರೇಷನ್ ಗಂಗಾ ಪ್ರಾರಂಭಿಸಿತ್ತು. ಹಂಗೇರಿ, ಪೋಲೆಂಡ್, ರೊಮೇನಿಯಾ ಮತ್ತು ಸ್ಲೋವಾಕ್ ಗಡಿ ಮೂಲಕ ಭಾರತೀಯರನ್ನು ಸ್ಥಳಾಂತರ ಮಾಡಲಾಗಿತ್ತು. ಇದು ದೇಶಾದ್ಯಂತ ಭಾರಿ ಮೆಚ್ಚುಗೆಗೆ ಕಾರಣವಾಗಿತ್ತು.
ಹಮಾಸ್ ಸರ್ವನಾಶ, ನೆತನ್ಯಾಹು ಶಪಥ
ಹಮಾಸ್ ಉಗ್ರ ಸಂಘಟನೆಯನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಹಮಾಸ್ನ ಪ್ರತಿಯೊಬ್ಬ ಸದಸ್ಯನ ಸಾವು ಖಚಿತ. ಈ ಭಯೋತ್ಪಾದಕ ಸಂಘಟನೆಯನ್ನು ನಾವು ಹತ್ತಿಕ್ಕುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: 13352 ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಹೈಕೋಟ್ ಗ್ರೀನ್ ಸಿಗ್ನಲ್
ಫೋಟೊ ಬಿಡುಗಡೆ
ಹಮಾಸ್ ಉಗ್ರರು ಶಿಶುಗಳನ್ನು ಭಯಾನಕವಾಗಿ ಹತ್ಯೆ ಮಾಡಿರುವ ಫೋಟೋಗಳನ್ನು ಇಸ್ರೇಲ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಹಲವು ಶಿಶುಗಳನ್ನು ಶಿರಚ್ಚೇದನ ಮಾಡಿ ಹತ್ಯೆ ಮಾಡಲಾಗಿದೆ.
ಭಾರತೀಯರಿಗೆ ಸಹಾಯವಾಣಿ
ಇಸ್ರೇಲ್ – ಹಮಾಸ್ ಯುದ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತೀಯರಿಗೆ ನೆರವು ನೀಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ 24 ಗಂಟೆಗಳ ಸಹಾಯ ವಾಣಿ ಸ್ಥಾಪಿಸಿದೆ. 1800118797 (ಟೋಲ್ ಫ್ರೀ), +91-11 23012113, +91-11-23014104, +91-11-23017905 ಮತ್ತು +919968291988ಗೆ ಸಂಪರ್ಕ ಮಾಡಬಹುದು. ಅಥವಾ room.gov ಗೆ ಇ ಮೇಲ್ ಮಾಡಬಹುದು. ಟೆಲ್ ಅವಿವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹ 24 ಗಂಟೆಗಳ ಸಹಾಯವಾಣಿ ಸ್ಥಾಪಿಸಿದೆ. ಅಗತ್ಯ ಇರುವವರು +972- 35226748, +972-543278392ಗೆ ಸಂರ್ಪಸಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್- ಪ್ಯಾಲೆಸ್ತೀನ್ ವಿವಾದವೇನು?
ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ದೇಶಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.
ಗಾಜಾ ಪಟ್ಟಿ ಎಂದರೇನು? : ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ. (ಏಜೆನ್ಸೀಸ್)
ಇಸ್ರೇಲ್ ಮೇಲೆ ಹಮಾಸ್ ನಡೆಸಿರುವುದು ಭಯೋತ್ಪಾದಕ ದಾಳಿ; ಪ್ಯಾಲೆಸ್ತೀನ್ ಸ್ವತಂತ್ರ ರಾಷ್ಟ್ರಕ್ಕಾಗಿ ಪುನರುಚ್ಚರಿಸಿದ ಭಾರತ
ಹಮಾಸ್ ದಾಳಿ: ಇದು ಬರ್ಬರ ಕ್ರೌರ್ಯದ ಅಬ್ಬರ; ದುರ್ಬಲ ಹೃದಯದವರು ಈ ಲಿಂಕ್ ತೆರೆಯಬೇಡಿ!
13 ಸಾವಿರಕ್ಕೆ ಖರೀದಿಸಿ 36 ಕೋಟಿ ರೂ.ಗೆ ಮಾರಾಟ! ಅಪರೂಪದ ಮಾಸ್ಕ್ನ ರೋಚಕ ಕತೆಯಿದು