ನವದೆಹಲಿ: ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿರುವ ಮಾರಣಾಂತಿಕ ರಾಕೆಟ್ ದಾಳಿಯನ್ನು ಭಯೋತ್ಪಾದಕರ ದಾಳಿ ಎಂದಿರುವ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ, ಇಸ್ರೇಲ್ ನೆಲದಲ್ಲಿ ಇರುವ ಎಲ್ಲ ಭಾರತೀಯರೂ ಸುರಕ್ಷಿತವಾಗಿ ಇದ್ದಾರೆ ಎಂದು ತಿಳಿಸಿದೆ.
ಈ ಕುರಿತು ಪ್ರಕಟಣೆ ಒಂದನ್ನು ಹೊರಡಿಸಿರುವ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಭಗ್ಚಿ, ಭಯೋತ್ಪಾದನೆಗೆ ಜಾಗತಿಕ ಮಟ್ಟದಲ್ಲಿ ಎಲ್ಲಾ ರೂಪಗಳಲ್ಲಿ ಉತ್ತರಿಸಬೇಕಾದ ಸಮಯ ಬಂದಿದೆ. ಭಾರತ ಯಾವಾಗಲೂ ಸ್ವತಂತ್ರ ಪ್ಯಾಲೆಸ್ತೀನ್ಗಾಗಿ ಪ್ರತಿಪಾದಿಸಿದೆ ಎಂದು ಹೇಳಿದ್ದಾರೆ.
ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿರುವ ದಾಳಿಯನ್ನು ಪ್ರಧಾನಿ ಮೋದಿ ಕಟುವಾಗಿ ಖಂಡಿಸಿದ್ದು, ಬೆಂಜಮಿನ್ ನೇತಾಹನ್ಯೂ ಜೊತೆ ಸಂಪರ್ಕದಲ್ಲಿದ್ದಾರೆ. ಇಸ್ರೇಲ್ನಲ್ಲಿ ಇರುವ ಭಾರತೀಯರನ್ನು ತವರಿಗೆ ವಾಪಸ್ ಕರೆತರಲು ಮೊದಲ ವಿಮಾನವು ಗುರುವಾರ ರಾತ್ರಿ ಇಸ್ರೇಲ್ ರಾಜಧಾನಿ ಟೆಲ್ ಅವೀವ್ ತಲುಪಲಿದೆ. ಶುಕ್ರವಾರ ಬೆಳಗ್ಗೆ ಈ ವಿಮಾನ ಭಾರತಕ್ಕೆ ವಾಪಸ್ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: ಅನ್ಯಜಾತಿ ಯುವಕನೊಂದಿಗೆ ಪ್ರೀತಿ; ಮರ್ಯಾದೆಗೆ ಅಂಜಿ ಮಗಳನ್ನು ಹತ್ಯೆಗೈದ ತಂದೆ
ಯುದ್ಧಗ್ರಸ್ಥ ಇಸ್ರೇಲ್ನಲ್ಲಿ ಇರುವ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರವು ಆಪರೇಷನ್ ಅಜಯ್ ಆರಂಭಿಸಿದೆ. ಇಸ್ರೇಲ್ನಲ್ಲಿ ಇರುವ ಪ್ರತಿಯೊಬ್ಬ ಭಾರತೀಯನನ್ನೂ ತವರಿಗೆ ಸುರಕ್ಷಿತವಾಗಿ ಕರೆತರಲು ಭಾರತೀಯ ವಿದೇಶಾಂಗ ಇಲಾಖೆ ಪಣ ತೊಟ್ಟಿದ್ದು, ಈವರೆಗೆ ಯಾವೊಬ್ಬ ಭಾರತೀಯನೂ ಯುದ್ಧದಲ್ಲಿ ಮೃತಪಟ್ಟಿಲ್ಲ.
ಗುರುವಾರ ರಾತ್ರಿ ಇಸ್ರೇಲ್ ರಾಜಧಾನಿ ಟೆಲ್ ಅವೀವ್ ತಲುಪಲಿರುವ ಭಾರತದ ಮೊದಲ ವಿಮಾನ, ಮೊದಲ ಹಂತದಲ್ಲಿ ಒಟ್ಟು 230 ಪ್ರಯಾಣಿಕರನ್ನು ತವರಿಗೆ ವಾಪಸ್ ಕರೆತರಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಭಗ್ಚಿ ತಿಳಿಸಿದ್ದಾರೆ.