ನವದೆಹಲಿ: ನವದೆಹಲಿಯಲ್ಲಿ ಭಾನುವಾರ(ಮೇ 28)ದಂದು ನಡೆದ ನೂತನ ಸಂಸತ್ ಭವನದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಮಹತ್ತರವಾದ ಕ್ಷಣಕ್ಕೆ ಸಾಕ್ಷಿಯಾಗಿರುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಮಾಜಿ ಪ್ರಧಾನಿ ಎಚ್ಡಿಡಿ ತನ್ನ ಜೀವಿತಾವಧಿಯಲ್ಲಿ ಹೊಸ ಸಂಸತ್ತಿನ ಕಟ್ಟಡದಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಯೋಚಿಸಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಉಳಿಯುತ್ತೇನೆ ಎಂದು ಊಹಿಸಿರಲಿಲ್ಲ
ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ಒಂದು ಮಹತ್ತರ ಕ್ಷಣಕ್ಕೆ ಸಾಕ್ಷಿಯಾಗಿರುವುದು ನನ್ನ ಅದೃಷ್ಟ. 1962ರಲ್ಲಿ ಕರ್ನಾಟಕ ವಿಧಾನಸಭೆಗೆ ಶಾಸಕನಾಗಿ, 1991ರಲ್ಲಿ ಸಂಸತ್ ಸದಸ್ಯನಾಗಿದ್ದೆ.
32 ವರ್ಷಗಳ ಹಿಂದೆ ನಾನು ಜನರ ಈ ಮಹಾನ್ ಸದನವನ್ನು ಪ್ರವೇಶಿಸಿದಾಗ ನಾನು ಪ್ರಧಾನಿಯಾಗುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಸಾರ್ವಜನಿಕ ಜೀವನದಲ್ಲಿ ನಾನು ಇಷ್ಟು ದಿನ ಉಳಿಯುತ್ತೇನೆ ಎಂದು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.
ದೊಡ್ಡ ಆಶ್ಚರ್ಯವೆಂದರೆ ನನ್ನ ಜೀವಿತಾವಧಿಯಲ್ಲಿ ನಾನು ಹೊಸ ಸಂಸತ್ತಿನ ಕಟ್ಟಡದಲ್ಲಿ ಕುಳಿತುಕೊಳ್ಳುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಭಾರತೀಯ ಸಂಪ್ರದಾಯದಲ್ಲಿ ಹೊಸ ನಿರ್ಮಾಣ ಹಾಗೂ ಗೃಹಪ್ರವೇಶ ಅತ್ಯಂತ ಮಂಗಳಕರವಾಗಿದ್ದು ನೂತನ ಸಂಸತ್ ಭವನ ಉದ್ಘಾಟನೆ ಒಂದು ಅಸಾಧಾರಣವಾದ ಕ್ಷಣ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: ದೌರ್ಜನ್ಯಕ್ಕೊಳಗಾದ ಮಹಿಳಾ ಕುಸ್ತಿಪಟುಗಳನ್ನು ತಕ್ಷಣ ಬಿಡುಗಡೆ ಮಾಡಿ: ಸಿಎಂ ಸಿದ್ದರಾಮಯ್ಯ
ಜನತೆ ಪಾಠ ಕಲಿಸಿದ್ದಾರೆ
ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ಸಂಸತ್ತು ಏರಿಳಿತಗಳನ್ನು ಕಂಡಿದೆ ದೇಶದ ಜನತೆ ಜಾಗರೂಕರಾಗಿದ್ದಾರೆ ರಾಷ್ಟ್ರದ ಶಾಂತಿಗೆ ಚ್ಯುತಿ ತರಲು ಹೋದವರುನ್ನು ಈ ಮನೆಯಿಂದ ಹೊರ ಕಳುಹಿಸಿದ್ದಾರೆ.
ಜನತೆ ರಾಜಕಾರಣಿಗಳಿಗೆ ಕಠಿಣ ಪಾಠಗಳನ್ನು ಕಲಿಸಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನೆಯ ಈ ಸಂದರ್ಭದಲ್ಲಿ ನಾನು ಭಾರತದ ಸಮಸ್ತ ಜನತೆಗೆ ವಂದಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.