ಚಿಕ್ಕಮಗಳೂರು: ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಮೂರು ದಿನಕ್ಕೆ ತಾಳಿ ಬಿಚ್ಚಿ ಕೊಟ್ಟು ಹೋಗಿದ್ದಕ್ಕೆ ಮನನೊಂದು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ತೇಗೂರು ಗ್ರಾಮದಲ್ಲಿ ನಡೆದಿದೆ.
ಮೃತನನ್ನು ವಿನೋದ್ ರಾಜ್ (24) ಎಂದು ಗುರುತಿಸಲಾಗಿದೆ. ಮೃತ ಯುವಕ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಎಂದು ತಿಳಿದು ಬಂದಿದೆ. ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದು, ಇದೀಗ ಆತನ ಸಾವಿನಿಂದ ಕುಟುಂಬ ಶೋಕದಲ್ಲಿ ಮುಳುಗಿದೆ.
ತೇಗೂರು ಗ್ರಾಮದ ತನುಜಾ ಎಂಬ ಯುವತಿ ಹಾಗೂ ವಿನೋದ್ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಯುವತಿ ಮನೆಯವರ ಸಮ್ಮತಿ ಇರಲಿಲ್ಲ. ಹೀಗಾಗಿ ಯುವತಿ ಮನೆಯವರ ವಿರೋಧದ ನಡುವೆಯೇ ಇಬ್ಬರೂ ಓಡಿ ಹೋಗಿ ಡಿಸೆಂಬರ್ 10ರಂದು ವಿನೋದ್ ಹಾಗೂ ತನುಜಾ ಮದುವೆಯಾಗಿದ್ದರು.
ಇದನ್ನೂ ಓದಿ: ಒಂದು ಕಾಲದಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ನಟ ಇಂದು 2900 ಕೋಟಿ ರೂ. ಒಡೆಯ
ಇನ್ನೇನು ಪರಸ್ಪರ ಪ್ರೀತಿ ಮಾಡಿದ್ದ ಜೋಡಿ ಹಕ್ಕಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಂಸಾರ ಶುರು ಮಾಡುವ ಹೊತ್ತಲ್ಲೇ ಪೊಲೀಸರು ನವ ಜೋಡಿಯನ್ನು ಠಾಣೆಗೆ ಕರೆ ತಂದಿದ್ದರು. ಯುವತಿಯ ಕುಟುಂಬಸ್ಥರ ದೂರಿನ ಮೇರೆಗೆ ಠಾಣೆಯಲ್ಲಿ ಪಂಚಾಯಿತಿ ನಡೆದಿದ್ದು ಯುವತಿ ತನ್ನ ತಾಯಿ ಮನೆಗೆ ಹೋಗುವುದಾಗಿ ಹೇಳಿಕೆ ನೀಡಿದ್ದಾಳೆ. ಮದುವೆಯಾದ ಮೂರೇ ದಿನಕ್ಕೆ ಗಂಡನನ್ನು ಬಿಟ್ಟು ತಾಯಿ ಜೊತೆ ಹೋಗುವುದಾಗಿ ಹೇಳಿ ಯುವತಿ ಉಲ್ಟಾ ಹೊಡೆದಿದ್ದಾಳೆ.
ಮನನೊಂದ ವಿನೋದ್ ಫೆಬ್ರವರಿ 2 ರಂದು ಆತ್ಮಹತ್ಯೆಗೆ ಯತ್ನಿಸಿದ್ದ ನೇಣು ಹಾಕಿಕೊಂಡಿದ್ದ ವಿನೋದ್ ರಕ್ಷಿಸಿ ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ವಿನೋದ್ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.