ಬೆಂಗಳೂರು: ಕೆಂಗೇರಿ-ಚಲ್ಲಘಟ್ಟ ವಿಸ್ತರಿತ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಶುಕ್ರವಾರ (ಸೆ.29) ಅಂತಿಮ ಹಂತದ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ರೈಲಿನ ವೇಗ, ವಿದ್ಯುತ್ ವ್ಯವಸ್ಥೆ, ರೈಲುಗಳ ಸಂಚಾರ ಸಮಯ, ಸಿಗ್ನಲಿಂಗ್, ನಿಲ್ದಾಣಗಳಲ್ಲಿ ಮೂಲಸೌಕರ್ಯ ಮುಂತಾದ ಕ್ರಮಗಳ ಬಗ್ಗೆ ಕಮಿಷನರ್ ಆಫ್ ಮೆಟ್ರೋ ರೈಲ್ ಸೇಫ್ಟಿ (ಸಿಎಂಆರ್ಎಸ್) ಅಧಿಕಾರಿಗಳ ತಂಡ ಪರಿಶೀಲಿಸಿ ಅಂತಿಮ ವರದಿ ನೀಡಲಿದೆ. ಬಳಿಕ ಈ ಮಾರ್ಗದಲ್ಲಿ ನಮ್ಮ ಮೆಟ್ರೋ ವಾಣಿಜ್ಯ ಸೇವೆ ಆರಂಭವಾಗಲಿದೆ.
ಕಳೆದ ಗುರುವಾರ (ಸೆ.21)ದಂದು ಬೈಯಪ್ಪನಹಳ್ಳಿ-ಕೆ.ಆರ್.ಪುರ ವಿಸ್ತರಿತ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ನಡೆಸಿದ್ದ ಅಂತಿಮ ಹಂತದ ಪರಿಶೀಲನೆ ಯಶಸ್ವಿಯಾಗಿದ್ದು, ರೈಲು ಸಂಚಾರಕ್ಕೆ ಅನುಮತಿ ಸಿಕ್ಕಿದೆ.
ಬೈಯಪ್ಪನಹಳ್ಳಿ-ಕೆ.ಆರ್.ಪುರ ವಿಸ್ತರಿತ ಮಾರ್ಗ ಹಾಗೂ ಕೆಂಗೇರಿ-ಚಲ್ಲಘಟ್ಟ ಮಾರ್ಗವು ಆರಂಭವಾದಲ್ಲಿ ಇಡೀ ನೇರಳೆ ಮಾರ್ಗ 42.5 ಕಿ.ಮೀ.ಗೆ ಹಿಗ್ಗಲಿದೆ. ಒಮ್ಮೆ ಈ ಮಾರ್ಗವು ಪೂರ್ಣವಾಗಿ ಕಾರ್ಯಾಚರಣೆ ಆದಲ್ಲಿ ನಗರದ ಪೂರ್ವಭಾಗದಲ್ಲಿರುವ ಐಟಿ ಕಾರಿಡಾರ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಟೆಕ್ಕಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೀಗಾಗಿ ನಿತ್ಯ ನೇರಳ ಲೇನ್ನಲ್ಲಿ ನಿತ್ಯ 1.5 ಲಕ್ಕಿಂತಲೂ ಅಧಿಕ ಜನರು ಪ್ರಯಾಣಿಸಬಹುದು ಎಂದು ಅಂದಾಜಿಸಲಾಗಿದೆ.
ಅಕ್ಟೋಬರ್ ಮಧ್ಯಭಾಗದಲ್ಲಿ ಸೇವೆ?
ಈಗಾಗಲೇ ಬೈಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗದಲ್ಲಿ ಅಂತಿಮ ತಪಾಸಣೆ ಯಶಸ್ವಿಯಾಗಿದ್ದು, ರೈಲು ಸಂಚಾರಕ್ಕೆ ಅನುಮತಿ ಲಭಿಸಿದೆ. ಇದೀಗ ಕೆಂಗೇರಿ&ಚಲ್ಲಟ್ಟ ಮಾರ್ಗ ಅಂತಿಮ ಪರಿಶೀಲನೆ ಸಿದ್ಧಗೊಂಡಿದೆ. ತಿಂಗಳಾಂತ್ಯದಲ್ಲಿ ಈ ಮಾರ್ಗದ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಅಕ್ಟೋಬರ್ ತಿಂಗಳ ಮಧ್ಯಭಾಗದಲ್ಲಿ ವಿಸ್ತರಿತ ಎರಡೂ ಮಾರ್ಗಗಳು ವಾಣಿಜ್ಯ ಬಳಕೆಗೆ ತೆರೆದುಕೊಳ್ಳುವ ಸಾಧ್ಯತೆ ಇದೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಈಗಾಗಲೇ ಸೆ.29ರಂದು ವಿವಿಧ ಸಂಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಇದೇ ದಿನದಂದು ನಡೆಯಲಿರುವ ಕೆಂಗೇರಿ&ಚಲ್ಲಟ್ಟ ಮಾರ್ಗದಲ್ಲಿ ಸುರಕ್ಷತಾ ಪರಿಶೀಲನೆಗೆ ಬಂದ್ ಅಡ್ಡಿಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಸುರಕ್ಷತಾ ಪರೀಕ್ಷೆ ದಿನಾಂಕ ಬದಲಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.