Meghalaya Honeymoon Case: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಮೇಘಾಲಯ ಹನಿಮೂನ್ ಕೊಲೆ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಎ1 ಆರೋಪಿ ಸೋನಂ ಬಗ್ಗೆ ಪ್ರತಿದಿನ ಆಘಾತಕಾರಿ ಸುದ್ದಿಗಳು ಬೆಳಕಿಗೆ ಬರುತ್ತಿವೆ. ತನ್ನ ಪ್ರಿಯಕರನಿಗಾಗಿ ಸುಪಾರಿ ಹಂತಕರು ನೇಮಿಸಿ ತನ್ನ ಗಂಡ ರಾಜಾ ರಘುವಂಶಿಯನ್ನು ಹನಿಮೂನ್ ನೆಪದಲ್ಲಿ ಕರೆದೊಯ್ದು ಕೊಲೆ ಮಾಡಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಈ ಪ್ರಕರಣದ ತನಿಖೆಯ ಸಮಯದಲ್ಲಿ ಕಿರಾತಕಿ ಸೋನಂ ಬಗ್ಗೆ ಇನ್ನಷ್ಟು ಆಘಾತಕಾರಿ ವಿಷಯಗಳು ಪೊಲೀಸರಿಗೆ ತಿಳಿದು ಬರುತ್ತಿವೆ.
ಇತ್ತೀಚೆಗೆ ಈ ಪ್ರಕರಣದಲ್ಲಿ ಮತ್ತೊಂದು ದೊಡ್ಡ ತಿರುವು ಬೆಳಕಿಗೆ ಬಂದಿದೆ. ಸೋನಂ ತನ್ನ ಪ್ರಿಯಕರ ರಾಜ್ ಕುಶ್ವಾಹನಿಗೋಸ್ಕರ ತನ್ನ ಗಂಡನನ್ನು ಕೊಲೆ ಮಾಡಿಲ್ಲ, ಬದಲಾಗಿ ಅವಳು ಬೇರೆ ಯುವಕನೊಂದಿಗೆ ಓಡಿಹೋಗಲು ಬಯಸಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ. ಈ ವಿಯಷ ಇದೀಗ ಇಡೀ ಪ್ರಕರಣದಲ್ಲಿ ಸಂಚಲನ ಮೂಡಿಸಿದೆ. ಒಂದು ವೇಳೆ ಇದು ನಿಜವಾಗಿದ್ದರೆ, ಆ ವ್ಯಕ್ತಿ ಯಾರು? ಅನ್ನೋ ಪ್ರಶ್ನೆ ಮೂಡಿದ್ದು, ಇದಕ್ಕೆ ಉತ್ತರ ತಿಳಿದುಬರಬೇಕಿದೆ.
ಈ ಕೊಲೆ ಪಿತೂರಿಯಲ್ಲಿ ಸೋನಂ, ತನ್ನ ಪ್ರಿಯಕರ ರಾಜ್ನನ್ನು ದಾಳವಾಗಿ ಬಳಸಿಕೊಂಡಿದ್ದಾಳೆ ಎಂಬ ಆರೋಪಗಳಿವೆ. ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ರಾಜ್ ಕುಶ್ವಾಹ್ ಪ್ರಮುಖ ಸಂಚುಕೋರ. ತನ್ನ ಪ್ರೇಯಸಿಗಾಗಿ ರಾಜ್ ಇಂಥಾ ದುಷ್ಕೃತ್ಯದಲ್ಲಿ ಭಾಗಿಯಾದನು. ಆದರೆ, ಇದೀಗ ಪೊಲೀಸರ ಸಂಶಯದ ಪ್ರಕಾರ ಸೋನಂಗೆ ರಾಜ್ ಒಂದು ಅಸ್ತ್ರವಾಗಿದ್ದ ಎಂದು ತಿಳಿದುಬಂದಿದೆ. ಸೋನಂ, ರಾಜ್ನನ್ನು ಬಿಟ್ಟು ಬೇರೊಬ್ಬನೊಂದಿಗೆ ಓಡಿಹೋಗಲು ಯೋಜಿಸಿದ್ದಳು ಎಂದು ಹೇಳಲಾಗುತ್ತಿದೆ. ಸೋನಂ ಆಟದ ಬಗ್ಗೆ ತಿಳಿದಿರದ ರಾಜ್, ಆಕೆಯ ಪಿತೂರಿಯ ಭಾಗವಾಗಿದ್ದನು. ಸೋನಂ ಪ್ರೀತಿಯ ಭರವಸೆ ನೀಡಿ ರಾಜ್ಗೆ ಆಮಿಷ ಒಡ್ಡಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ.
ಸೋನಂ ತನ್ನ ನಾಪತ್ತೆಯನ್ನು ಮೊದಲೇ ಯೋಜಿಸಿದ್ದಳು ಎಂದು ಅಪರಾಧ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಯ ನಂತರ, ಅವಳು ಇಂದೋರ್ನಲ್ಲಿರುವ ಫ್ಲಾಟ್ನಲ್ಲಿ ಉಳಿಯಲು ವ್ಯವಸ್ಥೆ ಮಾಡಿಕೊಂಡಿದ್ದಳು. ಅವಳು ಆ ಸ್ಥಳವನ್ನು ಸ್ವತಃ ಆರಿಸಿಕೊಂಡು ಮುಂಗಡ ಪಾವತಿ ಸಹ ಮಾಡಿದ್ದಳು. ಅವಳು ಆ ಸ್ಥಳವನ್ನು ಬಹಳ ರಹಸ್ಯವಾಗಿಟ್ಟಿದ್ದಳು. ತನ್ನ ಪ್ರಿಯಕರ ರಾಜ್ ಕುಶ್ವಾಹ್ ಹಾಗೂ ಸಹ-ಆರೋಪಿಗಳಿಗೂ ತಿಳಿಯದಂತೆ ಆ ಸ್ಥಳದ ಬಗ್ಗೆ ರಹಸ್ಯವನ್ನು ಕಾಪಾಡಿಕೊಂಡಿದ್ದಳು. ಸೋನಂ ಹೊರತುಪಡಿಸಿ ಯಾರಿಗೂ ಫ್ಲಾಟ್ನ ವಿಳಾಸ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಸೋನಂಗಾಗಿ ಪೊಲೀಸ್ ತಂಡಗಳು ಹುಡುಕಾಟ ನಡೆಸುತ್ತಿದ್ದಾಗ, ಸೋನಂ ಹೆಚ್ಚಿನ ಸಮಯ ಇಂದೋರ್ನಲ್ಲಿಯೇ ಇದ್ದಳು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಯಾವಾಗ ಕೊಲೆ ಸಂಚು ಬಯಲಾಗಲು ಪ್ರಾರಂಭವಾಯ್ತೋ ಅದನ್ನು ಅರಿತುಕೊಂಡ ಸೋನಂ, ರಾಜ್ಗೆ ಕ್ಯಾಬ್ ಬುಕ್ ಮಾಡುವಂತೆ ಕೇಳಿಕೊಂಡು ಉತ್ತರ ಪ್ರದೇಶಕ್ಕೆ ಪರಾರಿಯಾದಳು. ಜೂನ್ 6 ರಂದು ರಾಜ್ ಕ್ಯಾಬ್ ಬುಕ್ ಮಾಡಿದ್ದ. ಜೂನ್ 8 ರಂದು ಪೊಲೀಸರು ಆಕೆಯನ್ನು ಉತ್ತರ ಪ್ರದೇಶದಲ್ಲಿ ಪತ್ತೆ ಮಾಡಿದರು. ಸೋನಂ ತಲೆಮರೆಸಿಕೊಂಡಿದ್ದಾಗ ಆಕೆ ತಂಗಿದ್ದ ಫ್ಲಾಟ್ನ ನಿಖರವಾದ ಸ್ಥಳ ಇನ್ನೂ ಲಭ್ಯವಿಲ್ಲ ಎಂದು ಇಂದೋರ್ ಅಪರಾಧ ವಿಭಾಗದ ಅಧಿಕಾರಿಗಳು ದೃಢಪಡಿಸಿದ್ದಾರೆ.
ಜೂನ್ 8 ರಂದು, ಘಾಜಿಪುರದ ಹೆದ್ದಾರಿ ಧಾಬಾ ಬಳಿ ಸೋನಂ ತನ್ನ ಮೊಬೈಲ್ ಫೋನ್ ಅನ್ನು ಆನ್ ಮಾಡಿದಾಗ ಆಕೆಯ ಲೊಕೇಶನ್ ಗೊತ್ತಾಯಿತು. ಫೋನ್ ಆನ್ ಮಾಡಿ ತಕ್ಷಣವೇ ಸ್ವಿಚ್ ಆಫ್ ಆದರೂ ಕೂಡ ಆಕೆಯ ಮೇಲೆ ತೀವ್ರ ನಿಗಾ ಇಟ್ಟಿದ್ದ ಪೊಲೀಸರ ಕೈಗೆ ಆಕೆ ಸಿಕ್ಕಿಬಿದ್ದಳು. ರಾಜಾ ಹತ್ಯೆಯ ನಂತರ, ಸೋನಂ ತನ್ನ ಸ್ವಂತ ಫೋನ್ ಅನ್ನು ಪಕ್ಕಕ್ಕೆ ಇಟ್ಟಿದ್ದಳು. ರಾಜ್ ಕುಶ್ವಾಹ ಮತ್ತು ಇತರರನ್ನು ಸಂಪರ್ಕಿಸಲು ಆಕೆ ಇತರರ ಫೋನ್ಗಳನ್ನು ಬಳಸುತ್ತಿದ್ದಳು. ಧಾಬಾ ಮಾಲೀಕರ ಫೋನ್ನಿಂದ ತನ್ನ ಸಹೋದರನಿಗೆ ಕರೆ ಮಾಡುವ ಮೊದಲು, ತನ್ನ ಫೋನ್ ಅನ್ನು ಆನ್ ಮಾಡಿದ್ದಳು. ಬಹುಶಃ ಸಂಬಂಧಿಕರ ಸಂಖ್ಯೆಯನ್ನು ತೆಗೆದುಕೊಳ್ಳಲು ಆನ್ ಮಾಡಿದ್ದಳು. ಇದು ಮೇಘಾಲಯ ಮತ್ತು ಮಧ್ಯಪ್ರದೇಶ ಪೊಲೀಸರಿಗೆ SOS ಸಂದೇಶ ಹೋಗಲು ಕಾರಣವಾಯಿತು. ಕೊನೆಗೆ ಆಕೆಯನ್ನು ಬಂಧಿಸಲಾಯಿತು.
ಸೋನಂ ಇಂದೋರ್ನಲ್ಲಿ ಮೂರು ಫೋನ್ಗಳನ್ನು ಖರೀದಿಸಿದಳು. ಅವುಗಳಲ್ಲಿ ಒಂದು ಮೂಲ ಕೀಪ್ಯಾಡ್ ಹ್ಯಾಂಡ್ಸೆಟ್ ಮತ್ತು ಎರಡು ಆಂಡ್ರಾಯ್ಡ್ ಫೋನ್ಗಳು. ಆರೋಪಿಗಳಲ್ಲಿ ಒಬ್ಬನಾದ ಆನಂದ್ ಕುರ್ಮಿಯ ದಾಖಲೆಗಳನ್ನು ಬಳಸಿಕೊಂಡು ಸೋನಂ ಫೋನ್ಗಳನ್ನು ಖರೀದಿಸಿದಳು. ರಾಜ್ ಅವಳಿಗೆ ಫೋನ್ಗಳನ್ನು ಖರೀದಿಸಲು ಸಹಾಯ ಮಾಡಿದನು. ಮೂರು ಫೋನ್ಗಳು ಮತ್ತು ಅವುಗಳ ಸಿಮ್ ಕಾರ್ಡ್ಗಳನ್ನು ಮೇಘಾಲಯದಲ್ಲಿ ನಾಶಪಡಿಸಲಾಯಿತು. ಡಿಜಿಟಲ್ ಹೆಜ್ಜೆಗುರುತುಗಳನ್ನು ಕಂಡುಹಿಡಿಯದಿರಲು ಮತ್ತು ಅವಳ ಇರುವ ಸ್ಥಳವನ್ನು ಪತ್ತೆಹಚ್ಚದಿರಲಿ ಎಂದು ಆ ರೀತಿ ಮಾಡಿರಬಹುದು ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂದಹಾಗೆ, ಸೋನಂ ಬೇರೊಬ್ಬನೊಂದಿಗೆ ಓಡಿಹೋಗಲು ಪ್ಲಾನ್ ಮಾಡಿದ್ದಳಾ? ಪ್ರಕರಣದಲ್ಲಿರುವ ಇತರೆ ಆರೋಪಿಗಳನ್ನು ಸಹ ಆಕೆ ದಿಕ್ಕು ತಪ್ಪಿಸಿದ್ದಾಳಾ? ಪ್ರಿಯಕರ ರಾಜ್ಗಾಗಿಯೇ ಈ ಕೃತ್ಯ ಎಸಗಿದಳಾ? ಅಸಲಿಗೆ ಆಕೆಯ ಉದ್ದೇಶ ಏನಿತ್ತು? ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)
ರಾಜಾ ರಘುವಂಶಿಯ ಹತ್ಯೆ ಭೇದಿಸಲು ಪೊಲೀಸರಿಗೆ ಸಹಾಯವಾಗಿದ್ದೇ ಆಕೆಯ ‘ಮಂಗಳಸೂತ್ರ’! | Honeymoon Case