Sanju Samson : ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ಮತ್ತು ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಪರ ನಿಂತಿದ್ದಕ್ಕಾಗಿ ಕೇರಳ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ಮಾಜಿ ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ, ನೋಟಿಸ್ ಕೂಡ ಕಳುಹಿಸಿದೆ.
ಸಂಜು ಅವರನ್ನು ಕೆಸಿಎ ವಿಜಯ್ ಹಜಾರೆ ಟ್ರೋಫಿಯಿಂದ ಹೊರಗಿಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ಇದು ಭಾರಿ ವಿವಾದಕ್ಕೆ ಕಾರಣವಾಯಿತು. ವಿಜಯ್ ಹಜಾರೆ ಟ್ರೋಫಿಗೂ ಮುನ್ನ ತರಬೇತಿ ಶಿಬಿರದಲ್ಲಿ ಭಾಗವಹಿಸದೇ ಇದ್ದಿದ್ದಕ್ಕೆ ಸಂಜು ಅವರನ್ನು ಕೇರಳ ತಂಡಕ್ಕೆ ಆಯ್ಕೆ ಮಾಡಲಿಲ್ಲ ಎಂದು ಕೆಸಿಎ ಹೇಳಿದೆ. ಆದರೆ, ಸಂಜು ಅನಿವಾರ್ಯ ಕಾರಣಗಳಿಂದ ಶಿಬಿರಕ್ಕೆ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಮೊದಲೇ ಪತ್ರ ಬರೆದಿದ್ದರು. ಹೀಗಿದ್ದರೂ ಅವರನ್ನು ವಿಜಯ್ ಹಜಾರೆ ಟ್ರೋಫಿಯಿಂದ ಹೊರಗಿಡಲಾಯಿತು. ಇದರಿಂದಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಮಿಸ್ ಆಯಿತು. ಅದಕ್ಕೂ ಮುನ್ನ ನಡೆದ ಟಿ20 ಪಂದ್ಯಗಳಲ್ಲಿ ಸಂಜು ಬ್ಯಾಕ್ ಟು ಬ್ಯಾಕ್ ಸೆಂಚುರಿ ಬಾರಿಸಿದ್ದರು. ಹೀಗಾಗಿ ಕೆಸಿಎ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು.
ಇದೇ ಸಂದರ್ಭದಲ್ಲಿ ಸಂಜು ಅವರನ್ನು ಬೆಂಬಲಿಸಿರುವ ಶ್ರೀಶಾಂತ್, ಇದು ಸಂಜು ಅವರ ವರ್ತನೆಯ ಬಗ್ಗೆ ಅಲ್ಲ. ಅವರು ಹಲವು ಪಂದ್ಯಗಳನ್ನು ಆಡಿದ ನಂತರ ಕೇವಲ ವಿರಾಮ ತೆಗೆದುಕೊಂಡಿದ್ದರು. ಇಲ್ಲಿ ಸಂಜು ಅವರು ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಾಗಿಲ್ಲ ಅಥವಾ ಅಭ್ಯಾಸ ಪಂದ್ಯಗಳನ್ನು ಆಡಬೇಕಾಗಿರಲಿಲ್ಲ. ಆ ಹಂತ ಅಗಲೇ ಮುಗಿದಿತ್ತು ಎಂದು ಮಲಯಾಳಂ ದೂರದರ್ಶನ ಚಾನೆಲ್ಗೆ ಶ್ರೀಶಾಂತ್ ತಿಳಿಸಿದ್ದರು. ಈ ಮೂಲಕ ಕೆಸಿಎ ನಡೆ ಸರಿ ಇರಲಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು.
ಇದನ್ನೂ ಓದಿ: ನೀವು ಚಿಕನ್ ಅಥವಾ ಮಟನ್ ಲಿವರ್ ತಿಂತಿರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರಲೇಬೇಕು… Liver
ಈ ಹಿನ್ನೆಲೆಯಲ್ಲಿ ಶ್ರೀಶಾಂತ್ ಅವರಿಗೆ ನೋಟಿಸ್ ನೀಡಲಾಗಿದೆ. ಶ್ರೀಶಾಂತ್ ಅವರು ಕೇರಳ ಕ್ರಿಕೆಟ್ ಲೀಗ್ (ಕೆಸಿಎಲ್)ನಲ್ಲಿ ಕೊಲ್ಲಂ ಸೈಲರ್ಸ್ ತಂಡದ ಸಹ-ಮಾಲೀಕರಾಗಿದ್ದಾರೆ. ಕೆಸಿಎ ಜೊತೆ ಒಪ್ಪಂದದಲ್ಲಿರುವಾಗಲೇ ಕೆಸಿಎ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಶ್ರೀಶಾಂತ್ ಅವರಿಗೆ ಕೆಸಿಎ ಶೋಕಾಸ್ ನೋಟಿಸ್ ನೀಡಿದ್ದು, ಉತ್ತರಿಸಲು ಒಂದು ವಾರ ಕಾಲಾವಕಾಶವನ್ನು ನೀಡಿದೆ. ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಶ್ರೀಶಾಂತ್, ಸಂಜು, ಸಚಿನ್ ಅಥವಾ ನಿಧೀಶ್ ಅಥವಾ ಯಾರೇ ಆಗಿರಲಿ, ನನ್ನ ಸಹೋದ್ಯೋಗಿಗಳ ಪರವಾಗಿ ನಾನು ನಿರಂತರವಾಗಿ ನಿಲ್ಲುತ್ತೇನೆ. ಕೇರಳದ ಅಂತಾರಾಷ್ಟ್ರೀಯ ಆಟಗಾರನಾಗಿ ಸಂಜು ಅವರನ್ನು ಬೆಂಬಲಿಸುವುದು ಮುಖ್ಯ. ಅದನ್ನು ಬಿಟ್ಟು ಅವರನ್ನು ಶಿಲುಬೆಗೇರಿಸುವುದು ಬೇಡ ಎಂದು ಶ್ರೀಶಾಂತ್ ಹೇಳಿದ್ದಾರೆ. ಅಲ್ಲದೆ, ನೋಟಿಸ್ಗೆ ಉತ್ತರಿಸುವುದಾಗಿಯೂ ತಿಳಿಸಿದ್ದಾರೆ.
ಸಂಜು ಅವರನ್ನು ತಂಡದಿಂದ ಕೈಬಿಟ್ಟಿದ್ದರ ಬಗ್ಗೆ ಕೆಸಿಎ ಅಧ್ಯಕ್ಷ ಜಯೇಶ್ ಜಾರ್ಜ್ ಈ ಹಿಂದೆಯೇ ಮಾತನಾಡಿದ್ದರು. ವಿಜಯ್ ಹಜಾರೆ ಟ್ರೋಫಿಗಾಗಿ ರಾಜ್ಯ ತಂಡದ ಪೂರ್ವಸಿದ್ಧತಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಆಗಿರುವ ಸಂಜು ಸರಿಯಾದ ಕಾರಣ ನೀಡಿದೆ ತಪ್ಪಿಸಿಕೊಂಡರು. ಹೀಗಾಗಿ ಅವರನ್ನು ರಾಜ್ಯ ತಂಡದಿಂದ ಕೈಬಿಡಲಾಯಿತು. ಇದು ಪರೋಕ್ಷವಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತದ ತಂಡದಿಂದ ಅವರನ್ನು ಕೈಬಿಡಲು ಕಾರಣವಾಯಿತು ಎಂದಿದ್ದಾರೆ. (ಏಜೆನ್ಸೀಸ್)
ನೀವು ಚಿಕನ್ ಅಥವಾ ಮಟನ್ ಲಿವರ್ ತಿಂತಿರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರಲೇಬೇಕು… Liver
ದಕ್ಷಿಣ ಕನ್ನಡದಲ್ಲಿ ದೆವ್ವದ ಕಾಟಕ್ಕೆ ಕಂಗಾಲಾದ ಕುಟುಂಬ: ಮೊಬೈಲ್ ಕ್ಯಾಮೆರಾದಲ್ಲಿ ವಿಚಿತ್ರ ಮುಖ ಸೆರೆ! Ghost