ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶದಲ್ಲಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಜಯನಗರದ 4ನೇ ಬ್ಲಾಕ್ನಲ್ಲಿರುವ SSMRV ಕಾಲೇಜ್ ಮತ ಎಣಿಕೆ ಕೇಂದ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಯಾಗಿದ್ದಾರೆ. ಕಾಂಗ್ರೆಸ್ ವಿರುದ್ಧ ಫಲಿತಾಂಶ ಬಂದಲ್ಲಿ ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಇರುವುದನ್ನು ಅರಿತು, ಮುಂಜಾಗ್ರತಾ ಕ್ರಮವಾಗಿ ಮತ ಎಣಿಕೆ ಕೇಂದ್ರದ ಸುತ್ತ ಮುತ್ತ ಪೊಲೀಸ್ ತುಕಡಿಗಳ ನಿಯೋಜನೆ ಮಾಡಲಾಗಿದೆ.
ಜಯನಗರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಭಾರಿ ಗೊಂದಲ ಉಂಟಾದ ಹಿನ್ನೆಲೆ ಚುನಾವಣಾ ಅಧಿಕಾರಿಗಳು ಮರು ಮತ ಎಣಿಕೆ ನಡೆಸಿದ್ದಾರೆ. 4 ಬಾರಿ ಸೌಮ್ಯ ರೆಡ್ಡಿ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ 5ನೇ ಬಾರಿ ಬಿಜೆಪಿ ಅಭ್ಯರ್ಥಿ ಸಿ.ಕೆ ರಾಮ ಮೂರ್ತಿ ಮುನ್ನಡೆ ಎಂದು ಕಂಡು ಬರುತ್ತಿದ್ದಂತೆ ಗೊಂದಲ ವಾತಾವರಣ ಸೃಷ್ಟಿಯಾಗಿತ್ತು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಕಾರ್ಯಾದ್ಯಕ್ಷ ರಾಮಲಿಂಗಾ ರೆಡ್ಡಿ ಆಕ್ಷೇಪಣಾ ದೂರು ನೀಡಿದ ಹಿನ್ನೆಲೆ ಮತ್ತೊಮ್ಮೆ ಚುನಾವಣಾ ಅಧಿಕಾರಿಗಳು ಮತ ಎಣಿಕೆ ಮಾಡಿದ್ದಾರೆ.
ಇದನ್ನೂ ಓದಿ: ಜಗದೀಶ್ ಶೆಟ್ಟರ್ ‘ಕೈ’ ಹಿಡಿಯದ ಮತದಾರ; 35 ಸಾವಿರ ಮತಗಳ ಅಂತರದಿಂದ ಹೀನಾಯ ಸೋಲು
ಸಂಜೆ 4 ಗಂಟೆ ಹೊತ್ತಿಗೆ 160 ಮತಗಳಿಂದ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ, ಸಂಜೆ 5 ಗಂಟೆ ಆಗುತ್ತಲೇ ಗೆಲುಚಿನ ಚಿತ್ರಣ ಬದಲಾಗಿದೆ. ಮರು ಎಣಿಕೆಯಲ್ಲಿ ಸೌಮ್ಯ ರೆಡ್ಡಿಗೆ ಹಿನ್ನೆಡೆ ಉಂಟಾಗಿದ್ದು, ಬಿಜೆಪಿ ಅಭ್ಯರ್ಥಿ ಅಲ್ಪ ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದರು.ಜಯನಗರ ಕ್ಷೇತ್ರದಲ್ಲಿ ಬಿಜೆಪಿ 17 ಮತಗಳ ಅಂತರದಿಂದ ಗೆದ್ದಿದೆ. ಚುನಾವಣಾ ಅಧಿಕಾರಿಗಳು ವಿಜಯ ಘೋಷಣೆ ಮಾಡಲು ತಯಾರಿದ್ದಾರೆ. ಆದರೆ ಗೆಲುವು ಘೋಷಣೆ ಮಾಡಲು ರಾಮಲಿಂಗಾರೆಡ್ಡಿ ಅಡ್ಡಿ ಪಡಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.
ಗೊಂದಲ ಉಂಟಾದ ಹಿನ್ನೆಲೆಯಲ್ಲಿ SSMRV ಮತ ಎಣಿಕೆ ಕೇಂದ್ರಕ್ಕೆ ಡಿ.ಕೆ. ಶಿವಕುಮಾರ್ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಬಳಿಕ ರಾಮಲಿಂಗಾ ರೆಡ್ಡಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಸಂಸದ ಡಿ.ಕೆ.ಸುರೇಶ್ ಮತ ಎಣಿಕೆ ಕೇಂದ್ರಕ್ಕೆ ಒಳ ಪ್ರವೇಶಿಸಲು ಯತ್ನಿಸಿದ್ದು, ಪೊಲೀಸರು ತಡೆದಿರುವ ಪ್ರಸಂಗವೂ ನಡೆದಿದೆ.
ಇದನ್ನೂ ಓದಿ: ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆ; ಪ್ರಚಂಡ ದಿಗ್ವಿಜಯ ಸಾಧಿಸಿದ ಬಿಜೆಪಿ
ಮತಕೇಂದ್ರದ ವ್ಯಾಪ್ತಿಯಲ್ಲಿ ಕ್ಷಣ, ಕ್ಷಣಕ್ಕೂ ಬಿಗುವಿನ ವಾತಾವರಣ ಹೆಚ್ಚಾಗುತ್ತಿದ್ದು ಮುನ್ನೆಚ್ಚರಿಕಾ ಕ್ರಮಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರೀಯ ಪಡೆ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸರು ಸ್ಥಳಕ್ಕೆ ವಾಟರ್ ಜಟ್ ಕರೆಸಿಕೊಂಡಿದ್ದಾರೆ.