ಬೆಂಗಳೂರು: ಬೆಂಗಳೂರು ದಕ್ಷಿಣದ ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರದ ವಿದ್ಯಾರ್ಥಿಗಳು, ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ, ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಪಡೆದ ಯೋಧರಿಗೆ ಹೃದಯಂಗಮವಾಗಿ ಶ್ರದ್ಧಾಂಜಲಿಯನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ಕರ್ನಾಟಕದ ವೀರಯೋಧರಾದ ಮೇಜರ್ ಅಕ್ಷಯ್ ಗಿರೀಶ್ ರವರ ಪೋಷಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಕರ್ನಾಟಕದ ಯುದ್ಧವೀರರಾದ ದಿವಂಗತ ಮೇಜರ್ ಅಕ್ಷಯ್ ಗಿರೀಶ್ ರವರಿಗೆ ಗೌರವವನ್ನು ಅರ್ಪಿಸಲಾಯಿತು. ಮೇಜರ್ ಅಕ್ಷಯ್ ಗಿರೀಶ್ ರವರ ತಾಯಿಯಾದ ಮೇಘನ ಗಿರೀಶ್ ರವರು ಮಾತನಾಡಿ, ” ಕಾರ್ಗಿಲ್ ವಿಜಯ್ ದಿವಸದಂದು ನಮ್ಮ ಸೈನಿಕರ ಶೌರ್ಯ, ಪರಾಕ್ರಮ ಮತ್ತು ತ್ಯಾಗವನ್ನು ನೆನೆಯುತ್ತೇವೆ. ವೀರಯೋಧರ ಜೀವನವು ನಮಗೆ ಸ್ಫೂರ್ತಿಯನ್ನು ನೀಡುತ್ತದೆ. ನಮಗಾಗಿ ನಾವೇ ಎದ್ದು ನಿಲ್ಲಬೇಕೆಂಬ ಪಾಠವನ್ನು ನಾವು ಕಾರ್ಗಿಲ್ ಯುದ್ಧದಿಂದ ಕಲಿತೆವು” ಎಂದರು.
ಜಗತ್ತಿನ ಅತೀ ಕಠಿಣವಾದ ಯುದ್ಧ ಭೂಮಿಗಳಲ್ಲಿ ಸೇವೆ ಸಲ್ಲಿಸಿರುವ ಖ್ಯಾತಿಯನ್ನು ಹೊಂದಿರುವ, ಭಾರತದ ಆರ್ಮಿ ಸಿಗ್ನಲ್ಸ್ ಕಾರ್ಪ್ಸ್ನ ಲಟ್. ಕರ್ನಲ್ ಪಿ.ಎಸ್. ಚಂದ್ರಶೇಖರ್ (ನಿವೃತ್ತ) ರವರು ಮಾತನಾಡಿ “ಯುದ್ಧವು ಮನುಷ್ಯರ ದೃಷ್ಟಿಕೋನವನ್ನು ಬದಲಾಯಿಸುತ್ತದೆ. ಇದು ಜೀವನವೆಂಬುದು ಅಮೂಲ್ಯವಾದ ಉಡುಗೊರೆ ಎಂದು ಅರಿಯುತ್ತೇವೆ ಮತ್ತು ಇದನ್ನು ಆದರದಿಂದ ಕಾಣಬೇಕೆಂಬುದನ್ನು ಕಲಿಯುತ್ತೇವೆ” ಎಂದರು.
ಈ ಕಾರ್ಯಕ್ರಮದಲ್ಲಿ, ಭಾರತೀಯ ಸೇನೆಯ ವಿವಿಧ ವರ್ಗಗಳಲ್ಲಿ ಸೇವೆ ಸಲ್ಲಿಸಿದ್ದ ಹಲವರು ಭಾಗವಹಿಸಿದ್ದರು. ವೀರಯೋಧ ಮೇಜರ್ ಅಕ್ಷಯ್ ಗಿರೀಶ್ ರವರ ತಂದೆ ವಿಂಗ್ ಕಮಾಂಡರ್ (ನಿವೃತ್ತ) ಗಿರೀಶ್ ಕುಮಾರ್ ಪಾಲ್ಗೊಂಡಿದ್ದರು. ಇವರು ಭಾರತೀಯ ವಾಯು ಪಡೆಯ ಫೈಟರ್ ಪೈಲಟ್ ಆಗಿ ಸೇವೆ ಸಲ್ಲಿಸಿದ್ದಾರೆ. ಇವರೊಂದಿಗೆ ಗ್ರೂಪ್ ಕಾಪ್ಟೆನ್ ಅಶ್ವಿನಿ ಮಂಡೊಖೋಟ್ (ನಿವೃತ್ತ) , ಭಾರತ ಸೇನೆಯ ಸಿಗ್ನಲ್ ಕಾರ್ಪ್ಸ್ ನ ಲೆಟ್. ಕರ್ನಲ್ ಪಿ.ಎಸ್. ಚಂದ್ರಶೇಖರ್ (ನಿವೃತ್ತ), ನಾಗಾಲ್ಯಾಂಡ್ ಹಾಗೂ ಜಮ್ಮು ಕಾಶ್ಮೀರದ ಕೌಂನ್ಟರ್ ಇನ್ಸರ್ಜೆನ್ಸಿಯ ತಜ್ಞರಾದ ಲೆಟ್. ಕರ್ನಲ್ ಸಂಜಯ್ ಮಿಶ್ರ (ನಿವೃತ್ತ), ಭಾರತೀಯ ವಾಯು ಪಡೆಯ ಡಿಫೆನ್ಸ್ ಕಾರ್ಪ್ಸ್ ನ ಲೆಟ್.ಕರ್ನಲ್ ಸಂಜಯ್ ಮಿಶ್ರ, ವಾಯು ಪಡೆಯ ಪ್ರಥಮ ಮಹಿಳೆಯಾದ ರಂಜಿನಿ ಕೌಶಿಕ್, ಮೇಜರ್ ಅಕ್ಷಯ್ ಗಿರೀಶ್ ಮೆಮೋರಿಯಲ್ ಟ್ರಸ್ಟ್ನ ಸಂಸ್ಥಾಪಕರಾದ ಶ್ರೀಮತಿ ಮೇಘನ ಗಿರೀಶ್, SSRVM ಶಾಲೆಯ ಮುಖ್ಯಸ್ಥರಾದ ಕಮ್ಮೋಡರ್ ಹೆಚ್. ಜಿ. ಹರ್ಷ ಹಾಗೂ ಜೈನಾ ದೇಸಾಯಿಯವರಿದ್ದರು. ವಿಂಗ್ ಕಮಾಂಡರ್ ಗಿರೀಶ್ ಕುಮಾರ್ (ನಿವೃತ್ತ) ರವರು ಮಾತನಾಡಿ “ಯುದ್ಧವನ್ನು ನೋಡಿದಾಗ ಜೀವನದ ವಾಸ್ತವತೆಯ ಅರಿವಾಗುತ್ತದೆ. ಜಗತ್ತಿನ ಯಾವ ಸಮಸ್ಯೆಗೂ ಯುದ್ಧವು ಪರಿಹಾರವಲ್ಲ ಆದರೆ ಮಾನವರಾಗಿ ನಾವು ಯುದ್ಧದ ಪರಿಸ್ಥಿತಿಗಳನ್ನು ಎದುರಿಸಬೇಕಾಗಿರುವುದು ದುರದೃಷ್ಟಕರ ಸಂಗತಿ. ಮುಂದೆ ಏನಾಗುವುದೋ ಎಂದು ಯೋಚಿಸದೇ, ನಾವು ಮಾಡುತ್ತಿರುವುದು ಸರಿಯೆಂದು ನಂಬಿ, ಮುನ್ನಡೆಯಬೇಕು.” ಎಂದರು.
ಭಾರತೀಯ ಸೇನಾ ಪಡೆಯ ನಾಗಾಲ್ಯಾಂಡ್ ಹಾಗೂ ಜಮ್ಮು ಕಾಶ್ಮೀರದ ಕೌನ್ಟರ್ ಇನ್ಸರ್ಜೆನ್ಸಿಯ ತಜ್ಞರಾದ ಲೆಟ್ ಕರ್ನಲ್ ಸಂಜಯ್ ಮಿಶ್ರರವರು ಮಾತನಾಡಿ, “ವಿದ್ಯಾರ್ಥಿಗಳು ನಿಸ್ಸಂದೇಹವಾಗಿ ಸೇನೆಯನ್ನು ಸೇರಬಹುದು” ಎಂದರು. ಸೇನೆಯಲ್ಲಿ ಆಯ್ಕೆಯಾಗಲು ಬೇಕಾಗುವ ಮಾನದಂಡಗಳ ಬಗ್ಗೆ ಕೇಳಿದಾಗ, “ನೀವು ಹೇಗಿರುವುರೋ ಹಾಗೆಯೇ ಇರಿ. ನೀವು ಬೇರೆ ಯಾರಂತೆಯೋ ಇರಬೇಕಿಲ್ಲ. ಸೋಲಿಗೆ ಭಯಪಡಬೇಡಿ, ಸಹಜವಾಗಿರಿ. ನೀವು ನಿಮ್ಮಂತೆಯೇ ಇದ್ದಲ್ಲಿ ಮಾತ್ರ ನೀವು ಉತ್ತಮವಾದುದನ್ನು ನೀಡಲು ಸಾಧ್ಯ” ಎಂದರು. ಗ್ರೂಪ್ ಕಾಪ್ಟೆನ್ ಅಶ್ವಿನಿ ಮಂಡಖೋಟ್ ರವರು ನೆರೆದಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ “ಎಲ್ಲರೂ ತಮ್ಮ ಜೀವನದ ನಾಯಕರು. ನಿಮ್ಮ ಜನರಿಗಾಗಿ, ನಿಮ್ಮ ಗುಂಪಿಗಾಗಿ ಮತ್ತು ನಿಮ್ಮ ಕೆಲಸದ ಕುರಿತು ಜ್ಞಾನ, ಕರುಣೆ, ಮತ್ತು ಬದ್ಧತೆ ಎಂಬ ಮೂರು ಗುಣಗಳನ್ನು ಹೊಂದಿರಬೇಕು” ಎಂದರು.
ಈ ಸಂವಾದದಿಂದ, ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಮೀರಿದ ನೈಜ ಜೀವನದ ಅಮೂಲ್ಯವಾದ ಜೀವನ ಪಾಠವನ್ನು ಕಲಿಯುವುದರೊಂದಿಗೆ, ಶಿಕ್ಷಣದ ನಿಜವಾದ ಸಾರವನ್ನು ಪಡೆದುಕೊಂಡರು.