Shreyas Iyer : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ನಾಯಕರಾಗಿ ರೋಹಿತ್ ಶರ್ಮ ಮತ್ತು ಎಂಎಸ್ ಧೋನಿ ದಾಖಲೆ ಬರೆದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿದ ಗೌರವ ಹಿಟ್ಮ್ಯಾನ್ಗೆ ಇದೆ. ಅದೇ ರೀತಿ ಧೋನಿ ಅವರು ಕೂಡ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ನಾಯಕರಾಗಿ ಐದು ಬಾರಿ ಟ್ರೋಫಿ ಗೆದ್ದ ಹೆಗ್ಗಳಿಕೆ ಹೊಂದಿದ್ದಾರೆ.
ಕಳೆದ ವರ್ಷ ಕೊಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಗೆಲುವಿನತ್ತ ಮುನ್ನಡೆಸುವ ಮೂಲಕ ಭಾರತದ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಕೂಡ ವಿಜೇತ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಗೌತಮ್ ಗಂಭೀರ್ ನಂತರ ಕೆಕೆಆರ್ ತಂಡವನ್ನು ಗೆಲುವಿನತ್ತ ಕೊಂಡೊಯ್ದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಅಯ್ಯರ್ ಪಾತ್ರರಾಗಿದ್ದಾರೆ. ಅವರ ನಾಯಕತ್ವದಲ್ಲಿ, ಕಳೆದ ವರ್ಷ ಕೊಲ್ಕತ್ತ ತಂಡ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಲೀಗ್ ಹಂತದ ಹದಿನಾಲ್ಕು ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳನ್ನು ಗೆದ್ದು, ಟಾಪರ್ ಆಗಿ ಪ್ಲೇಆಫ್ ಪ್ರವೇಶಿಸಿದ ಕೆಕೆಆರ್, ಕ್ವಾಲಿಫೈಯರ್ -1 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಅನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿ ಮತ್ತೊಮ್ಮೆ ಸನ್ರೈಸರ್ಸ್ ಅನ್ನು ಎದುರಿಸಿ ಭರ್ಜರಿ ಜಯಗಳಿಸಿದರು. ಇದರೊಂದಿಗೆ, ಕೆಕೆಆರ್ ಒಟ್ಟಾರೆಯಾಗಿ ಐಪಿಎಲ್ನಲ್ಲಿ ಮೂರನೇ ಬಾರಿಗೆ ವಿಜೇತರಾಗಿ ಹೊರಹೊಮ್ಮಿತು. ಆದರೆ, ಈ ವಿಷಯದಲ್ಲಿ ತನಗೆ ಅರ್ಹವಾದ ಮನ್ನಣೆ ಸಿಕ್ಕಿಲ್ಲ ಎಂದು ಶ್ರೇಯಸ್ ಅಯ್ಯರ್ ಇದೀಗ ಬೇಸರ ಹೊರಹಾಕಿದ್ದಾರೆ.
ಶ್ರೇಯಸ್ ಅಯ್ಯರ್ ಇತ್ತೀಚೆಗೆ ಮುಕ್ತಾಯವಾದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಈ ಮೆಗಾ ಏಕದಿನ ಟೂರ್ನಮೆಂಟ್ನಲ್ಲಿ ಐದು ಇನ್ನಿಂಗ್ಸ್ಗಳಲ್ಲಿ ಒಟ್ಟು 243 ರನ್ಗಳೊಂದಿಗೆ ಟೀಮ್ ಇಂಡಿಯಾದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಈ ಮೂಲಕ ಭಾರತ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿ, ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇನ್ನು ಕೆಕೆಆರ್ ತಂಡ ಕಳೆದ ವರ್ಷ ಐಪಿಎಲ್ನಲ್ಲಿ ವಿಜೇತ ಪಟ್ಟ ಅಲಂಕರಿಸಿತು. ಆದರೂ ಕೆಕೆಆರ್ ಫ್ರಾಂಚೈಸಿ, ಐಪಿಎಲ್ ಹರಾಜಿಗೂ ಮೊದಲು ಶ್ರೇಯಸ್ ಅಯ್ಯರ್ ಅವರನ್ನು ಉಳಿಸಿಕೊಳ್ಳಲಿಲ್ಲ. ಇದು ತಂಡದಲ್ಲಿ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸಿತು. ಐಪಿಎಲ್-2025 ಮೆಗಾ ಹರಾಜಿನಲ್ಲಿ ಭಾಗವಹಿಸಿದ್ದ ಶ್ರೇಯಸ್ ಅಯ್ಯರ್, ಅನಿರೀಕ್ಷಿತ ಬೆಲೆಗೆ ಮಾರಾಟವಾದರು. ಪಂಜಾಬ್ ಕಿಂಗ್ಸ್ ತಂಡ 26.75 ಕೋಟಿ ರೂ.ಗಳನ್ನು ಖರ್ಚು ಮಾಡಿ ಅಯ್ಯರ್ ಅವರನ್ನು ಖರೀದಿಸಿತು. ಕೆಕೆಆರ್ ಜೊತೆ ಸ್ಪರ್ಧಿಸಿ ಅಯ್ಯರ್ ಅವರನ್ನು ಭಾರಿ ಬೆಲೆಗೆ ಖರೀದಿಸಿತು. ಅಲ್ಲದೆ, ಐಪಿಎಲ್-2025 ರಲ್ಲಿ ತಮ್ಮ ತಂಡದ ನಾಯಕನನ್ನಾಗಿ ಅಯ್ಯರ್ ಅವರನ್ನು ಪಂಜಾಬ್ ಫ್ರಾಂಚೈಸಿ ನೇಮಿಸಿದೆ.
ಇದೀಗ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಶ್ರೇಯಸ್ ಅಯ್ಯರ್ ಹಳೆಯದ್ದನ್ನೆಲ್ಲ ನೆನಪಿಸಿಕೊಂಡಿದ್ದಾರೆ. ಮಾಧ್ಯಮವೊಂದರಲ್ಲಿ ಮನಬಿಚ್ಚಿ ಮಾತನಾಡಿದ ಅಯ್ಯರ್, ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರವೂ, ನಾನು ಬಯಸಿದ ಮನ್ನಣೆ ನನಗೆ ಸಿಗಲಿಲ್ಲ ಎಂದರು. ಆದಾಗ್ಯೂ, ವೈಯಕ್ತಿಕವಾಗಿ, ನನ್ನ ಪ್ರದರ್ಶನ ಮತ್ತು ನಾಯಕತ್ವದಿಂದ ನಾನು ತೃಪ್ತನಾಗಿದ್ದೇನೆ. ಬೇರೆ ಯಾರೂ ನಿಮ್ಮೊಂದಿಗೆ ಇಲ್ಲದಿದ್ರೂ, ನೀವು ಸರಿಯಾದ ಮತ್ತು ನ್ಯಾಯಯುತ ಮಾರ್ಗವನ್ನು ಅನುಸರಿಸಿದರೆ ನಿಮಗೆ ಒಳ್ಳೆಯ ಬೆಲೆ ಇರುತ್ತದೆ. ಮನುಷ್ಯರಾಗಿ ಪ್ರಾಮಾಣಿಕತೆ ನಮಗೆ ಅತ್ಯಂತ ಮುಖ್ಯವಾದ ವಿಷಯವಾಗಿದೆ. ನನಗೆ ಯಾರ ಬಗ್ಗೆಯೂ ಅಸಹಿಷ್ಣುತೆ ಅಥವಾ ಅತೃಪ್ತಿ ಇಲ್ಲ ಎಂದು ಅಯ್ಯರ್ ಹೇಳಿದರು.
ಅಯ್ಯರ್ ಅವರ ನಾಯಕತ್ವದಲ್ಲಿ ಕೆಕೆಆರ್ ಟ್ರೋಫಿ ಜಯಿಸಿದ್ದರೂ ಕೂಡ ಪ್ರಸ್ತುತ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿರುವ ಗಂಭೀರ್ ಅವರಿಗೆ ಎಲ್ಲ ಕ್ರೆಡಿಟ್ ಹೋಗುತ್ತದೆ. ಏಕೆಂದರೆ, ಕಳೆದ ವರ್ಷ ಕೆಕೆಆರ್ನ ಮಾರ್ಗದರ್ಶಕರಾಗಿ ಗಂಭೀರ್ ಕಾರ್ಯನಿರ್ವಹಿಸಿದರು. ಕೊಲ್ಕತ್ತ ಪ್ರಶಸ್ತಿಯನ್ನು ಗೆದ್ದ ಎಲ್ಲಾ ಕ್ರೆಡಿಟ್ ಅವರಿಗೆ ಸಲ್ಲುತ್ತದೆ ಎಂಬುದು ಬಹಿರಂಗ ರಹಸ್ಯ. ಈ ಗೆಲುವಿನ ನಂತರವೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿತು. ಕೋಚ್ ಆಗಿ ಯಾವುದೇ ಅನುಭವವಿಲ್ಲದಿದ್ದರೂ, ಗಂಭೀರ್ ಅವರ ಮೇಲೆ ಬಿಸಿಸಿಐ ನಂಬಿಕೆ ಇಟ್ಟಿತು. ಆದಾಗ್ಯೂ, ಅವರ ಮಾರ್ಗದರ್ಶನದಲ್ಲಿ, ಭಾರತವು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ನಲ್ಲಿ 3-0 ಅಂತರದಿಂದ ವೈಟ್ವಾಶ್ ಆಯಿತು. ಅಲ್ಲದೆ, ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಆಸ್ಟ್ರೇಲಿಯಾ ವಿರುದ್ಧ ಕಳೆದುಕೊಂಡಿತು. ಆದರೆ, ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಯಗಳಿಸಿ, ಇತಿಹಾಸ ಬರೆದಿದೆ. (ಏಜೆನ್ಸೀಸ್)
ಐಪಿಎಲ್ ಆರಂಭಕ್ಕೂ ಮುನ್ನವೇ ಸಂಚಲನಾತ್ಮಕ ನಿರ್ಧಾರ ತೆಗೆದುಕೊಂಡ ಕನ್ನಡಿಗ ಕೆ.ಎಲ್. ರಾಹುಲ್! KL Rahul
ಪ್ರೇಯಸಿಯನ್ನು ಕೊಂದು ಆಕೆಯ ಫ್ರೆಂಡ್ಗೆ ಕರೆ ಮಾಡಿ ಪ್ರಿಯಕರ ಹೇಳಿದ್ದು ಮಾತ್ರ ಶಾಕಿಂಗ್ ವಿಚಾರ! Girlfriend