Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿಯನ್ನು ಯಶಸ್ವಿಯಾಗಲು ಪ್ರೇರೇಪಿಸುತ್ತದೆ.
ಚಾಣಕ್ಯ ತತ್ವಗಳನ್ನು ಒಳಗೊಂಡಿರುವ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆಯಲಾಗಿದೆ. ಸಂತೋಷದ ಜೀವನದ ಅನೇಕ ರಹಸ್ಯಗಳನ್ನು ಆ ಪುಸ್ತಕದಲ್ಲಿ ತಿಳಿಸಲಾಗಿದೆ. ಅಲ್ಲದೆ, ಮನುಷ್ಯನಾಗಿ ಜನ್ಮ ತಾಳಿದ ವ್ಯಕ್ತಿ ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಅನುಸರಿಸಬೇಕಾದ ಧರ್ಮ, ಕರ್ಮ, ಪಾಪ ಹಾಗೂ ಪುಣ್ಯಗಳ ಬಗ್ಗೆ ಚಾಣಕ್ಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಮನುಷ್ಯರಾಗಿ ಹುಟ್ಟಿದ ನಾವು ನಮ್ಮ ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಭಾವಿಸುತ್ತೇವೆ. ಅದಕ್ಕೆ ದಾರಿಯನ್ನು ಚಾಣಕ್ಯ ಹಾಕಿಕೊಟ್ಟಿದ್ದಾರೆ. ಆ ದಾರಿಯಲ್ಲಿ ನಡೆದರೆ ಯಶಸ್ಸು ಖಂಡಿತವಾಗಿ ಸಿಗುತ್ತದೆ.
ಚಾಣಕ್ಯನ ಪ್ರಕಾರ, ನಮ್ಮನ್ನು ಬಡತನಕ್ಕೆ ದೂಡುವ ಮತ್ತು ಬಡತನದಿಂದ ನಮ್ಮನ್ನು ನಾವು ಎಂದಿಗೂ ಹೊರಬರಲು ಬಿಡದ ಕೆಲ ಕೆಟ್ಟ ಅಭ್ಯಾಸಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.
ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ಸ್ವಚ್ಛತೆಗೆ ಪ್ರಾಮುಖ್ಯತೆಯನ್ನು ನೀಡದಿದ್ದರೆ, ಆತನಿಗೆ ಹಣದ ದೇವತೆ ಎಂದು ಪರಿಗಣಿಸಲಾದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುವುದಿಲ್ಲ. ಶುಚಿಯಾಗಿ ಇಲ್ಲದೇ ಇರುವುದು ಜೀವನಪರ್ಯಂತ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ನೀವು ಗಳಿಸುವ ಎಲ್ಲ ಹಣವು ವೈದ್ಯಕೀಯ ವೆಚ್ಚಗಳಿಗೆ ವ್ಯರ್ಥವಾಗುತ್ತದೆ. ದೇಹವನ್ನು ಮತ್ತು ಬಟ್ಟೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವವರಿಗೆ ಸಂಪತ್ತು ಹರಿದು ಬರುತ್ತದೆ ಎಂದು ಚಾಣಕ್ಯ ಹೇಳುತ್ತಾನೆ. ಅಶುದ್ಧರಾಗಿರುವವರು ತಮ್ಮ ಜೀವನದುದ್ದಕ್ಕೂ ಬಡತನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಚಾಣಕ್ಯ ಎಚ್ಚರಿಸಿದ್ದಾರೆ.
ಚಾಣಕ್ಯ ನೀತಿಯ ಪ್ರಕಾರ, ಹೆಚ್ಚು ನಿದ್ರೆ ಮಾಡುವ ಅಭ್ಯಾಸ ಹೊಂದಿರುವವರು ತಮ್ಮ ಜೀವನದುದ್ದಕ್ಕೂ ಬಡತನದಲ್ಲಿ ಸಿಲುಕಿಕೊಳ್ಳುತ್ತಾರೆ. ಬೆಳಗ್ಗೆ ತಡವಾಗಿ ಎದ್ದೇಳುವವರು ಬಹಳ ಕಡಿಮೆ ದಿನವನ್ನು ಹೊಂದಿರುತ್ತಾರೆ. ಹೀಗಾಗಿ ಯಶಸ್ವಿಯಾಗಲು ತಮ್ಮ ಪ್ರಯತ್ನಗಳಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಾರೆ. ಇದು ಮುಂದುವರಿದಾಗ ಜೀವನ ವ್ಯರ್ಥವಾಗುತ್ತದೆ. ಇದರಿಂದ ಎಂದಿಗೂ ಬಡತನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದಲ್ಲದೆ, ಅತಿಯಾದ ನಿದ್ರೆಯ ಅಭ್ಯಾಸಗಳು ಎಲ್ಲ ರೋಗಗಳಿಗೆ ಮೂಲ ಕಾರಣ. ಬೆಳಗ್ಗೆ ಬೇಗನೆ ಏಳುವುದರಿಂದ ಜೀವನದಲ್ಲಿ ತ್ವರಿತ ಪ್ರಗತಿ ಸಾಧಿಸಬಹುದು.
ಚಾಣಕ್ಯನ ಪ್ರಕಾರ, ಅಧರ್ಮ, ಕುತಂತ್ರ ಮತ್ತು ಅಪ್ರಾಮಾಣಿಕತೆಯಂತಹ ಅನೈತಿಕ ವಿಧಾನಗಳ ಮೂಲಕ ಹಣ ಗಳಿಸುವವರು, ಬೇಗನೆ ಹಣ ಸಂಪಾದಿಸಿದರೂ ಸಹ, ಅವರು ಪಡೆಯುವ ಹಣದಿಂದ ದೊಡ್ಡ ಅಪಾಯಗಳನ್ನು ಎದುರಿಸುತ್ತಾರೆ ಮತ್ತು ಅವರು ಚೇತರಿಸಿಕೊಳ್ಳಲು ಸಾಧ್ಯವಾಗದ ಬಡತನಕ್ಕೆ ಮತ್ತೆ ತಳ್ಳಲ್ಪಡುತ್ತಾರೆ. ಇದಲ್ಲದೆ, ಮಾತಿನಲ್ಲಿ ಶುದ್ಧತೆ ಇಲ್ಲದೆ ಅಸಭ್ಯ ಭಾಷೆಯನ್ನು ಬಳಸುವ ಅಭ್ಯಾಸವನ್ನು ಹೊಂದಿರುವವರನ್ನು ಲಕ್ಷ್ಮಿ ದೇವಿ ದ್ವೇಷಿಸುತ್ತಾಳೆ. ಈ ಗುಣವನ್ನು ಹೊಂದಿರುವವರು ಬಡತನದಲ್ಲಿ ಬದುಕುತ್ತಾರೆ ಎಂದು ಚಾಣಕ್ಯ ಎಚ್ಚರಿಸಿದ್ದಾರೆ.
ವಿಶೇಷ ಸೂಚನೆ: ಮೇಲಿನ ಮಾಹಿತಿ ಸಾಮಾನ್ಯ ಸಾರ್ವಜನಿಕ ಮಾಹಿತಿಯನ್ನು ಆಧರಿಸಿದೆ. ವಿಜಯವಾಣಿ.ನೆಟ್ ಅದರ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ. ಯಾವುದೇ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೊದಲು, ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
ಆಸ್ಪತ್ರೆಯಿಂದ ಮನೆಗೆ ಡೆಡ್ಬಾಡಿ ತೆಗೆದುಕೊಂಡು ಹೋಗುವಾಗ ಬದುಕಿದ್ದ ಹಾವೇರಿ ವ್ಯಕ್ತಿ ಮತ್ತೆ ಸಾವು! Haveri Man