ಕಾರ್ಕಳ: ಕಾರ್ಕಳದ ಕಲ್ಲೊಟ್ಟೆ ಪೆರ್ವಾಜೆ ಬಳಿಯಲ್ಲಿ ಭಾನುವಾರ ಆಕಸ್ಮಿಕವಾಗಿ ಬಾವಿಗೆ ಬಿದ್ದ ಪತ್ನಿ ಹಾಗೂ ರಕ್ಷಣೆಗೆ ಇಳಿದ ಪತಿಯನ್ನು ಅಗ್ನಿಶಾಮಕ ದಳದವರು ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ಸುಮಾರು 60 ಅಡಿ ಆಳವಿರುವ ಹಾಗೂ 20 ಅಡಿಯಷ್ಟು ನೀರಿರುವ ಬಾವಿಗೆ ಭಾನುವಾರ ಬೆಳಗ್ಗೆ ಅನಿತಾ ಮಲ್ಯ(57) ಎಂಬುವರು ಆಕಸ್ಮಿಕವಾಗಿ ಬಿದ್ದಿದ್ದು, ಅವರ ರಕ್ಷಣೆಗೆ ಗಂಡ ಅಣ್ಣಪ್ಪ ಮಲ್ಯ(59) ಬಾವಿಗೆ ಇಳಿದಿದ್ದು, ಬಳಿಕ ಇಬ್ಬರೂ ಬಾವಿಯಿಂದ ಮೇಲೆ ಬರಲು ಸಾಧ್ಯವಿಲ್ಲದೆ ಇಬ್ಬರೂ ನೀರಿನ ಪೈಪ್ ಹಿಡಿದು ಬಾವಿಯಲ್ಲೇ ಸಿಲುಕಿಕೊಂಡು ನೆರವಿಗೆ ಮೊರೆಯಿಡುತ್ತಿದ್ದರು. ಕೂಡಲೇ ಕಾರ್ಕಳ ಅಗ್ನಿಶಾಮಕ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಚರಣೆ ನಡೆಸಿ ಪತಿ ಹಾಗೂ ಪತ್ನಿಯನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಅಗ್ನಿಶಾಮಕ ದಳದ ಅಧಿಕಾರಿ ಆಲ್ಬರ್ಟ್ ಮೋನಿಸ್, ಸಹಾಯಕ ಅಗ್ನಿಶಾಮಕ ಅಧಿಕಾರಿ ಚಂದ್ರಶೇಖರ್, ಸಿಬ್ಬಂದಿ ಹರಿಪ್ರಸಾದ್ ಶೆಟ್ಟಿಗಾರ್, ಸಂಜಯ್, ಹಸನ್ ಮುಲ್ತಾನಿ, ರವಿಚಂದ್ರ ಕೊರವರ ಭಾಗವಹಿಸಿದ್ದರು.