Hardik Pandya : ಸೋಮವಾರ (ಏಪ್ರಿಲ್ 07) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 12 ರನ್ಗಳಿಂದ ಸೋತಿತು. ತಿಲಕ್ ವರ್ಮಾ (56 ರನ್ 29 ಎಸೆತ, 4 ಬೌಂಡರಿ, 4 ಸಿಕ್ಸರ್) ಮತ್ತು ಹಾರ್ದಿಕ್ ಪಾಂಡ್ಯ (42 ರನ್ 15 ಎಸೆತ 3 ಬೌಂಡರಿ, 4 ಸಿಕ್ಸರ್) ಅವರ ಪ್ರಯತ್ನದ ಹೊರತಾಗಿಯೂ, ಮುಂಬೈ ತವರಿನಲ್ಲಿ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಲಖನೌ ವಿರುದ್ಧದ ಪಂದ್ಯದಲ್ಲಿಯೂ ಮುಂಬೈ 12 ರನ್ಗಳಿಂದ ಸೋತಿದ್ದು ಗಮನಾರ್ಹ.

ಲಖನೌ ವಿರುದ್ಧದ ಪಂದ್ಯದಲ್ಲಿ ತಿಲಕ್ ವರ್ಮಾ ‘ರಿಟೈರ್ಡ್ ಔಟ್’ ನಿರ್ಧಾರವು ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ಆರ್ಸಿಬಿ ವಿರುದ್ಧ ತಿಲಕ್ ವರ್ಮಾ ಮಿಂಚಿನ ಅರ್ಧಶತಕ ಗಳಿಸಿದ ನಂತರ, ಮುಂಬೈ ಆಡಳಿತದ ನಿರ್ಧಾರವನ್ನು ಮತ್ತೊಮ್ಮೆ ಟೀಕಿಸಲಾಗುತ್ತಿದೆ. ಇದೀಗ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಇದಕ್ಕೆ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ.
ಆರ್ಸಿಬಿ ವಿರುದ್ಧ ತಿಲಕ್ ವರ್ಮಾ ಚೆನ್ನಾಗಿ ಆಡಿದರು. ಕಳೆದ ಪಂದ್ಯದಲ್ಲಿ ಹಲವು ವಿಷಯಗಳು ನಡೆದವು. ಆದರೆ, ಹೊರಗಿನ ಜನರಿಗೆ ಒಳಗೆ ಏನೂ ನಡೆದಿದೆ ಎಂಬುದು ತಿಳಿದಿಲ್ಲ. ಲಖನೌ ಪಂದ್ಯದ ಹಿಂದಿನ ದಿನ ತಿಲಕ್ಗೆ ಚೆಂಡು ಬಲವಾಗಿ ತಗುಲಿತು. ಅವರನ್ನು ರಿಟೈರ್ಡ್ ಔಟ್ ಎಂದು ಘೋಷಿಸುವುದರ ಹಿಂದೆ ಒಂದು ತಂತ್ರವಿತ್ತು. ಅಲ್ಲದೆ, ತಿಲಕ್ ಅವರ ಬೆರಳಿಗೆ ಗಾಯವಾಗಿದ್ದು ನಿಜ. ಗಾಯದಿಂದಾಗಿ ಅವರು ಆಕ್ರಮಣಕಾರಿಯಾಗಿ ಆಡಲು ಸಾಧ್ಯವಾಗಲಿಲ್ಲ. ಕೋಚ್ ನಿರ್ಧಾರದ ಪ್ರಕಾರ, ತಿಲಕ್ ಅವರನ್ನು ಕರೆಸಿ ಹೊಸ ಬ್ಯಾಟರ್ನೊಂದಿಗೆ ದಾಳಿ ಮಾಡುವುದು ನಮ್ಮ ಯೋಜನೆಯಾಗಿತ್ತು. ಇದೀಗ ಚೇತರಿಸಿಕೊಂಡಿರುವ ತಿಲಕ್ ಆರ್ಸಿಬಿ ಅದ್ಭುತವಾಗಿ ಆಡಿದರು ಎಂದು ಎಂಐ ನಾಯಕ ಹಾರ್ದಿಕ್ ಪಾಂಡ್ಯ ಸ್ಪಷ್ಟಪಡಿಸಿದರು.
ವಾಂಖೆಡೆ ಪಿಚ್ ಬ್ಯಾಟಿಂಗ್ಗೆ ಉತ್ತಮವಾಗಿದೆ. ಇಲ್ಲಿ ನಾವು ಬೌಲರ್ಗಳನ್ನು ದೂಷಿಸಲು ಸಾಧ್ಯವಿಲ್ಲ. ನಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಆಯ್ಕೆಗಳಿಲ್ಲ. ಸಾಮಾನ್ಯವಾಗಿ, ನಮನ್ ಧೀರ್ ಅವರು ಕ್ರಮಾಂಕದಲ್ಲಿ ಕೆಳಗೆ ಬರುತ್ತಾರೆ. ಲಖನೌ ವಿರುದ್ಧದ ಪಂದ್ಯದಲ್ಲಿ ಅವರು ಸ್ವಲ್ಪ ಮುಂಚೆಯೇ ಬಂದರು. ರೋಹಿತ್ ಶರ್ಮ ಲಭ್ಯವಿಲ್ಲದ ಕಾರಣ, ನಮನ್ ಮುಂಚೆಯೇ ಬಂದರು. ಇಂದು, ರೋಹಿತ್ ಆಡಿದ್ದರಿಂದ, ನಾವು ನಮನ್ ಅವರನ್ನು ಕೆಳ ಕ್ರಮಾಂಕಕ್ಕೆ ಕಳುಹಿಸಿದ್ದೇವೆ. ಈ ಮೈದಾನದಲ್ಲಿ 220 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್ ಅನ್ನು ಮುಟ್ಟುವುದು ಕಷ್ಟವೇನಲ್ಲ. ಪವರ್ ಪ್ಲೇನಲ್ಲಿ ವಿಕೆಟ್ ಕಳೆದುಕೊಂಡು ನಾವು ಹಿಂದೆ ಬಿದ್ದೆವು. ಕೆಲವು ಓವರ್ಗಳಲ್ಲಿ ರನ್ ಗಳಿಸದ ಕಾರಣ ನಾವು ಇನ್ನೂ ತೊಂದರೆಗೆ ಒಳಗಾದೆವು. ಜಸ್ಪ್ರೀತ್ ಬುಮ್ರಾ ಮೈದಾನಕ್ಕೆ ಬಂದಿರುವುದು ನನಗೆ ಸಂತೋಷವಾಗಿದೆ. ಅವರು ವಿಕೆಟ್ ಪಡೆಯುತ್ತಾರೆ ಎಂದು ಪಾಂಡ್ಯ ವಿಶ್ವಾಸದಿಂದ ಹೇಳಿದರು.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ನಿನ್ನೆ (ಏ.07) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ, ಮೊದಲು ಬೌಲಿಂಗ್ ಆಯ್ದುಕೊಂಡು ಆರ್ಸಿಬಿಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಆರ್ಸಿಬಿಗೆ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ (4) ವಿಕೆಟ್ ಒಪ್ಪಿಸಿ ಆಘಾತ ನೀಡಿದರು. ಆದರೆ, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (67), ದೇವದತ್ ಪಡಿಕ್ಕಲ್ (37), ರಜತ್ ಪಾಟಿದಾರ್ (64) ಹಾಗೂ ಜಿತೇಶ್ ಶರ್ಮ (40) ಸ್ಫೋಟಕ ಬ್ಯಾಟಿಂಗ್ ದಾಳಿ ನಡೆಸಿ, ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಈ ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ಗೆ ಉತ್ತಮ ಆರಂಭ ಸಿಗದೆ, ಕಡೆಗೂ ಸೋಲಿನ ಸುಳಿಯಲ್ಲಿ ಸಿಲುಕಿತು.
ಮುಂಬೈ ಪರ ಆರಂಭಿಕರಾದ ರೋಹಿತ್ ಶರ್ಮ (17) ಎಂದಿನಂತೆ ಕಳಪೆ ಪ್ರದರ್ಶನ ಇಲ್ಲಿಯೂ ಮುಂದುವರಿಸಿದರು. ಆರಂಭದಲ್ಲೇ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಅವರ ಬೆನ್ನಲ್ಲೇ ಒಬ್ಬರಂತೆ ಮತ್ತೊಬ್ಬರು ಬ್ಯಾಟರ್ಗಳು ವಿಕೆಟ್ ಒಪ್ಪಿಸಿ, ಪೆವಿಲಿಯನ್ನತ್ತ ಸಾಗಿದರು. ರಯಾನ್ ರಿಕೆಲ್ಟನ್ (17), ವಿಲ್ ಜ್ಯಾಕ್ಸ್ (22) ಹಾಗೂ ಸೂರ್ಯಕುಮಾರ್ ಯಾದವ್ (28) ರನ್ ಗಳಿಸಿದರು.
ಈ ಮಧ್ಯೆ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಲ್ಲದೇ ಕ್ಯಾಪ್ಟನ್ ಪ್ರದರ್ಶನ ತೋರಿದರು. ಹಾರ್ದಿಕ್ ಮತ್ತು ತಿಲಕ್ ವರ್ಮ ನೀಡಿದ ಉತ್ತಮ ಇನ್ನಿಂಗ್ಸ್ ಕಡೆಗೂ ಫಲಿಸಲಿಲ್ಲ. ಇವರಿಬ್ಬರ ಹೋರಾಟವು ಫಲಿಸಲಿಲ್ಲ ಎಂಬುದೇ ಎಂಐ ಫ್ರಾಂಚೈಸಿ ಅಭಿಮಾನಿಗಳ ಬೇಸರ. ಇನ್ನು ಈ ಪಂದ್ಯದಲ್ಲಿಯೂ ಗೆದ್ದು ಬೀಗಿದ ಆರ್ಸಿಬಿ, ಐಪಿಎಲ್ನಲ್ಲಿ ತನ್ನ ಮೂರನೇ ಗೆಲುವನ್ನು ದಾಖಲಿಸಿದೆ. (ಏಜೆನ್ಸೀಸ್)
ಇತಿಹಾಸ ಬರೆದ ವಿರಾಟ್ ಕೊಹ್ಲಿ… ಯಾವೊಬ್ಬ ಭಾರತೀಯ ಕ್ರಿಕೆಟಿಗನೂ ಸಾಧಿಸದ ಸಾಧನೆ ಇದು! Virat Kohli
ಭಾರತಕ್ಕೆ ಹಸ್ತಾಂತರಿಸದಂತೆ ಮುಂಬೈ ದಾಳಿಯ ಸಂಚುಕೋರ ತಹವ್ವೂರ್ ರಾಣಾ ಸಲ್ಲಿಸಿದ್ದ ಅರ್ಜಿ ವಜಾ! Tahawwur Rana