ಕೋಟ: ಇಲ್ಲಿನ ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುಕಾಲದ ಬೇಡಿಕೆಯಾದ ಗಿಳಿಯಾರು ಹೊಳೆ ಹೂಳೆತ್ತಲು ಕೋಟ ಗ್ರಾಮ ಪಂಚಾಯಿತಿ ಅಣಿಯಾಗಿದೆ.

ಬುಧವಾರ ಕೋಟ ಗ್ರಾಮ ಪಂಚಾಯಿತಿ ಹಾಗೂ ಸ್ಮಾರ್ಟ್ ಸಿಟಿ ಸ್ಥಳೀಯ ಸಂಘಸಂಸ್ಥೆಗಳ ನೆರವಿನೊಂದಿಗೆ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿಭರತ್ ಕುಮಾರ್ ಶೆಟ್ಟಿ ಮಾತನಾಡಿ, ಬಹುಕಾಲದಿಂದ ಕೃತಕ ನೆರೆಯಿಂದ ಈ ಭಾಗದ ಕೃಷಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಟ ಗ್ರಾಪಂ ತನ್ನ ಕ್ರೀಯಾಯೋಜನೆಯ ಮೂಲಕ ಹೊಳೆ ಹೂಳು ತೆಗೆಯಲು ಅನುದಾನ ಒದಗಿಸಲಿದ್ದು, ಸ್ಥಳೀಯ ರೈತ ಸಂಘಟನೆಗಳ ಹಾಗೂ ದಾನಿಗಳ ಸಹಕಾರ ಪಡೆದು ಹೂಳೆ ತೆರವು ಕಾರ್ಯ ನಡೆಯಲಿದೆ ಎಂದರು.
ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, ತೆಕ್ಕಟ್ಟೆ ಭಾಗದಿಂದ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮೂಲಕ ಮಾಬುಕಳ ಸೀತಾನದಿಯನ್ನು ಸೇರುವ ಈ ಹೊಳೆ ಸಾಲುಗಳಲ್ಲಿ ಹೂಳು ತೆರವು ಅತ್ಯಗತ್ಯವಾಗಿದ್ದು, ಸಹಕಾರ ನೀಡಲಾಗುವುದು ಎಂದರು.
ಕೋಟದ ಸ್ಮಾರ್ಟ್ ಸಿಟಿ, ಹಸಿರು ಸೇನೆ ಹದಿನಾಲ್ಕು ಗ್ರಾಮ ಒಕ್ಕೂಟ, ರೈತಧ್ವನಿ ಸಂಘ ಹಾಗೂ ಇತರ ಸಂಘಟನೆಗಳು ಈ ಕಾರ್ಯಕ್ಕೆ ಕೈಜೋಡಿಸಲಿದೆ ಎಂದು ಹೊಳೆ ಹೂಳೆತ್ತುವ ಹೋರಾಟದ ಹಸಿರು ಸೇನೆ ಸಮಿತಿಯ ವಸಂತ ಗಿಳಿಯಾರ್ ತಿಳಿಸಿದರು.
ಕೋಟ ಗ್ರಾಪಂ ಉಪಾಧ್ಯಕ್ಷ ಪಾಂಡು ಪೂಜಾರಿ, ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಸದಸ್ಯರಾದ ಅಜಿತ್ ದೇವಾಡಿಗ, ಶೇಖರ್ ಗಿಳಿಯಾರು, ಕೋಟ ಸ್ಮಾರ್ಟ್ ಸಿಟಿ ಮುಖ್ಯಸ್ಥ ಚೇತನ್ ಶೆಟ್ಟಿ, ರೈತ ಮುಖಂಡರಾದ ರವೀಂದ್ರ ಐತಾಳ್, ಬಾಬು ಶೆಟ್ಟಿ, ತಿಮ್ಮ ಕಾಂಚನ್, ಶೇಷಪ್ಪ ಮಯ್ಯ, ತಾಪಂ ಮಾಜಿ ಸದಸ್ಯ ಭರತ್ ಕುಮಾರ್ ಶೆಟ್ಟಿ, ಸಾಲಿಗ್ರಾಮ ಪ.ಪಂ. ಸದಸ್ಯ ಶ್ಯಾಮಸುಂದರ್ ನಾಯರಿ, ತೆಕ್ಕಟ್ಟೆ ವ್ಯಾಪ್ತಿಯ ಶ್ರೀನಾಥ ಶೆಟ್ಟಿ, ಪ್ರಶಾಂತ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು, ರೈತ ಸಮುದಾಯ ಉಪಸ್ಥಿತರಿದ್ದರು.