ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗಿಂತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಚ್ಚು ಮಾತನಾಡುತ್ತಿದ್ದಾರೆ. ಸಿಎಂ ಸೈಲೆಂಟ್ ಆಗಿದ್ದರೆ, ಡಿಸಿಎಂ ವೈಲೆಂಟ್ ಆಗಿದ್ದಾರೆ ಎಂದು ಮಾಜಿ ಸಚಿವ ಆರ್. ಅಶೋಕ್ ಟೀಕಾಪ್ರಹಾರ ನಡೆಸಿದ್ದಾರೆ.
ಗೋವಿಂದ ಕಾರಜೋಳ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಆರ್. ಆಶೋಕ್, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಸರ್ಕಾರ ಡಬಲ್ ಸ್ಟೇರಿಂಗ್ ಸರ್ಕಾರ. ಉಪಮುಖ್ಯಮಂತ್ರಿ ಸ್ಥಾನ ಸಂವಿಧಾನಿಕ ಹುದ್ದೆ ಅಲ್ಲ. ಆದರೆ, ಡಿಸಿಎಂ ಶಿವಕುಮಾರ್ ಅಧಿಕಾರಿಗಳ ಸಭೆಯಲ್ಲಿ ಧಮ್ಕಿ ಹಾಕುತ್ತಾರೆ. ಸಿಎಂ ಮಾತನಾಡುವ ಬದಲು ಡಿಸಿಎಂ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಜೆಡಿಎಸ್ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಮುಖಂಡನಿಂದ ಹಲ್ಲೆ ? ಆಸ್ಪತ್ರೆಗೆ ಮಾಜಿ ಶಾಸಕ ಎ.ಮಂಜುನಾಥ್ ಭೇಟಿ
ಯಾರೂ ಕರೆಂಟ್ ಬಿಲ್ ಕಟ್ಟಬೇಡಿ
ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಎಲ್ಲರೂ ಗ್ಯಾರಂಟಿ ಕಾರ್ಡ್ಗಳನ್ನು ಹಿಡಿದಿದ್ದರು. ಸರ್ಕಾರ ಬಂದು 24 ಗಂಟೆ ಒಳಗೆ ಗ್ಯಾರಂಟಿ ಜಾರಿ ಅಂತ ಹೇಳಿದ್ದರು. ಆದರೆ, 240 ಗಂಟೆ ಕಳೆದರೂ ಗ್ಯಾರೆಂಟಿ ಯೋಜನೆ ಜಾರಿ ಆಗಿಲ್ಲ. ದಾರಿಯಲ್ಲಿ ಹೋಗುವವರಿಗೆಲ್ಲ ಉಚಿತ ಯೋಜನೆ ಇಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಇದೇ ದಾರಿಹೋಗುವವರಿಂದ ಅವರ ಮತ ಹಾಕಿಸಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು. ಗ್ಯಾರೆಂಟಿ ಯೋಜನೆಗಳಿಗೆ ಕಂಡಿಷನ್ ಹಾಕುತ್ತಿದ್ದಾರೆ. ಇದು ಮೋಸ. ಯಾರೂ ಕರೆಂಟ್ ಬಿಲ್ ಕಟ್ಟಬೇಡಿ. ಮಹಿಳೆಯರು ಯಾರೂ ಬಸ್ನಲ್ಲಿ ಟಿಕೆಟ್ ತಗೊಬೇಡಿ ಎಂದು ಕರೆ ನೀಡಿದರು.
ಸರ್ಕಾರ ಬಹಳ ದಿನ ಉಳಿಯಲ್ಲ
ಉಚಿತ ಯೋಜನೆಗಳ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸಲು ಆರ್ಎಸ್ಎಸ್ ಬ್ಯಾನ್ ವಿಚಾರ ಹೇಳುತ್ತಿದ್ದಾರೆ. ಆರ್ಎಸ್ಎಸ್ ಬ್ಯಾನ್ ಮಾಡಿದರೆ ಸರ್ಕಾರ ಮೂರು ತಿಂಗಳು ಇರಲ್ಲ. ಬ್ಯಾನ್ ಮಾಡಲು ನಿಮ್ಮ ಅಪ್ಪ, ತಾತಾ , ಅಜ್ಜಿ ಕೈಯಲ್ಲೇ ಆಗಲಿಲ್ಲ. ಈಗ ಆಗುತ್ತಾ. ಕಾಂಗ್ರೆಸ್ ಡಬಲ್ ಸ್ಟೇರಿಂಗ್ ಸರ್ಕಾರವಾಗಿದೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ. ಇದು ಗೂಂಡಾ ಸರ್ಕಾರ ಜಗಜ್ಜಾಹಿರಾಗಿದೆ ಎಂದರು.
ಇದನ್ನೂ ಓದಿ: 60ನೇ ವಯಸ್ಸಿನಲ್ಲಿ 2ನೇ ಮದುವೆಯಾದ ಆಶಿಶ್ ವಿದ್ಯಾರ್ಥಿ; ಮೊದಲ ಪತ್ನಿ ಹೇಳಿದ್ದೇನು?
ಗ್ಯಾರಂಟಿ ಯೋಜನೆಗಳು ಜಾರಿಯಾಗಲಿಲ್ಲ ಅಂದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಕಾರ್ಯಕರ್ತರ ಜೊತೆ ಹೋರಾಟ ಮಾಡುತ್ತೇವೆ. ಕಂಡಿಷನ್ ಹಾಕಿದರೆ ಹೋರಾಟ ಮಾಡುತ್ತೇವೆ. ದ್ವೇಷದ ರಾಜಕಾರಣ ಮಾಡಿರುವವರು ಮಣ್ಣು ಸೇರಿದ್ದಾರೆ. ದ್ವೇಷದ ರಾಜಕಾರಣ ಮಾಡಿದರೆ ನಾವು ಹೇಗೆ ಹೋರಾಟಮಾಡಬೇಕು ಗೊತ್ತಿದೆ ಎಂದು ತಿರುಗೇಟು ನೀಡಿದರು. (ದಿಗ್ವಿಜಯ ನ್ಯೂಸ್)
60ನೇ ವಯಸ್ಸಿನಲ್ಲಿ 2ನೇ ಮದುವೆಯಾದ ಆಶಿಶ್ ವಿದ್ಯಾರ್ಥಿ; ಮೊದಲ ಪತ್ನಿ ಹೇಳಿದ್ದೇನು?