ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಈ ಮಧ್ಯೆ ರಾಜಕೀಯ ಪಕ್ಷಗಖ ನಾಯಕರ ನಡುವೆ ವಾಕ್ಸಮರ ಕೂಡ ಜೋರಾಗಿದೆ.
ಇನ್ನು ಪ್ರಚಾರದ ವೇಳೆ ಮಾತನಾಡುವ ಭರದಲ್ಲಿ ಎದುರಾಳಿ ಪಕ್ಷದ ನಾಯಕರನ್ನು ಹೀಯಾಳಿಸಿದ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಬಿಜೆಪಿ ಸ್ಟಾರ್ ಪ್ರಚಾರಕನಿಗೆ ನೋಟಿಸ್
ಪ್ರಧಾನಿ ಮೋದಿ ವಿಷ ಸರ್ಪ ಇದ್ದಂತೆ ಎಂದು ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಸೋನಿಯಾ ಗಾಂಧಿ ವಿಷ ಕನ್ಯೆಯೇ ಎಂದು ಪ್ರಶ್ನಿಸಿದ್ದ ಬಿಜೆಪಿ ಸ್ಟಾರ್ ಪ್ರಚಾರಕ ಬಸನ್ಗೌಡ ಪಾಟೀಲ್ ಯತ್ನಾಳ್ಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಪ್ರಧಾನಿ ನರೇಂದ್ರ ಮೊದಿ ಅವರನ್ನು ವಿಶ್ವದ ನಾಯಕ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಅಂತಹವರನ್ನ ನಾಗರಹಾವಿಗೆ ಹೋಲಿಸುವುದು ಸರಿಯೇ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: ಅನ್ಯ ಕೋಮಿನ ವಿದ್ಯಾರ್ಥಿನಿ ಜೊತೆ ಜ್ಯೂಸ್ ಕುಡಿದಿದ್ದಕ್ಕೆ ಹಲ್ಲೆ; ಆರೋಪಿಗಳ ಬಂಧನ
ಚೀನಾ ಹಾಗೂ ಪಾಕಿಸ್ತಾನದ ಏಜೆಂಟರಂತೆ ವರ್ತಿಸುವ ಸೋನಿಯಾ ಗಾಂಧಿ ಭಾರತವನ್ನು ಹಾಳು ಮಾಡಿದವರು. ಚಹಾ ಮಾರುತ್ತಿದ್ದವರು ದೇಶದ ಪ್ರಧಾನಿ ಆದ್ದರೆಂಬ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಏಪ್ರಿಲ್ 28ರಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹಾಲಪ್ಪ ಆಚಾರ್ ಪರ ಪ್ರಚಾರ ಮಾಡುವ ವೇಳೆ ಯತ್ನಾಳ್ ಹೇಳಿಕೆ ನೀಡಿ ಬಿರುಗಾಳಿ ಎಬ್ಬಿಸಿದ್ದರು.
ಕಾಂಗ್ರೆಸ್ ಸ್ಟಾರ್ ಪ್ರಚಾರಕನಿಗೆ ನೋಟಿಸ್
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು.
ಏಪ್ರಿಲ್ 30 ಕಲಬುರ್ಗಿಯಲ್ಲಿ ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವ ವೇಳೆ ಶಾಸಕ ಪ್ರಿಯಾಂಕ ಖರ್ಗೆ ಇಂತಹ ನಿಷ್ಪ್ರಯೋಜಕ ಮಗನಿದ್ದರೆ ಹೇಗೆ ಜೀವನ ನಡೆಯುತ್ತೆ? ದೇಶ ನಡೆಸೋನು ಮಾತ್ರವಲ್ಲ. ಮನೆಲಿ ಒಬ್ಬ ನಾಲಾಯಕ್ ಮಗನಿದ್ದರೂ ಮನೆ ಸುಸೂತ್ರವಾಗಿ ನಡೆಯೋದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು.
ಈ ಇಬ್ಬರು ನಾಯಕರು ತಮ್ಮ ಹೇಳಿಕೆಗಳ ಕುರಿತು ಸ್ಪಷ್ಟನೆ ನೀಡುವಂತೆ ಕೋರಿ ಕೊಪ್ಪಳ ಹಾಗೂ ಕಲಬುರ್ಗಿ ಜಿಲ್ಲಾ ಚುನಾವಣಾ ಅಧಿಕಾರಿಗಳು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.