More

    ಜಂತ್ರದಲ್ಲಿ ರಸ್ತೆ ಧೂಳಿನ ಸಮಸ್ಯೆ

    ಹರಿಪ್ರಸಾದ್ ನಂದಳಿಕೆ, ಕಾರ್ಕಳ

    ಕಳೆದ ಹಲವು ತಿಂಗಳಿಂದ ಬೆಳ್ಮಣ್-ಜಂತ್ರ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಕಾಮಗಾರಿ ಪ್ರಗತಿಯ ಹಂತದಲ್ಲೇ ಇದೆ. ಈ ರಸ್ತೆಯಲ್ಲಿ ಓಡಾಡುವ ದಾರಿಹೋಕರು ಹಾಗೂ ದ್ವಿಚಕ್ರ ವಾಹನ ಸವಾರರಿಗೆನಿತ್ಯ ಧೂಳಿನ ಸ್ನಾನವಾಗುತ್ತಿದೆ.

    ರಸ್ತೆಯಲ್ಲಿ ಧೂಳಿನ ಸ್ನಾನ

    ಬೆಳ್ಮಣ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿರ್ವಕ್ಕೆ ಸಾಗುವ ಪ್ರಮುಖ ರಸ್ತೆಯಾಗಿದ್ದು, ಕಾಮಗಾರಿ ಕಳೆದ ಹಲವು ತಿಂಗಳಿಂದ ನಡೆಯುತ್ತಿದೆ. ಈ ಕಾಮಗಾರಿಯಿಂದಾಗಿ ಈ ಭಾಗದಪರಿಸರವಿಡೀ ಧೂಳಿನಿಂದ ಕೂಡಿದೆ. ವಾಹನಗಳು ಓಡಾಡುವಾಗ ಧೂಳು ಎದ್ದು ಪರಿಸರದ ಮನೆಗಳು ಧೂಳಿನಿಂದ ಆವೃತವಾಗಿದೆ. ದ್ವಿಚಕ್ರ ವಾಹನ ಸವಾರರು ಧೂಳಿನಿಂದಾಗಿ ಕಣ್ಣು ಬಿಡುವಂತಿಲ್ಲ. ಇನ್ನೊಂದೆಡೆ ರಸ್ತೆಯಲ್ಲಿ ಹಾಕಲಾದ ಜಲ್ಲಿಕಲ್ಲಿನ ರಾಶಿಯಿಂದ ನಿತ್ಯ ವಾಹನ ಸವಾರರು ಎಡವಟ್ಟು ಮಾಡಿಕೊಳ್ಳುವಂತಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಬಿದ್ದು ಏಳುವುದು ಇಲ್ಲಿ ಮಾಮೂಲಾಗಿದೆ.

    ಪರಿಸರದವರಿಗೆ ಅನಾರೋಗ್ಯ

    ರಸ್ತೆಗೆ ಹಾಕಲಾದ ಜಲ್ಲಿಕಲ್ಲಿನ ರಾಶಿಯ ಮೇಲೆ ಲಾರಿ,ಟಿಪ್ಪರ್ ಹಾಗೂ ಬಸ್ಸಿನಂತಹ ಘನ ವಾಹನಗಳು ಸಂಚರಿಸಿದಾಗ ದ್ವಿಚಕ್ರದಲ್ಲಿ ಚಲಿಸುವ ಸವಾರರು ಹಾಗೂ ಪರಿಸರದ ಮನೆ ಮಂದಿ ಧೂಳಿನಿಂದ ಕಣ್ಣು ಬಿಡುವಂತಿಲ್ಲ. ಜಲ್ಲಿಯ ಧೂಳಿನಿಂದ ಪರಿಸರದ ಮನೆ ಮಂದಿಗೆ ಅನಾರೋಗ್ಯದ ಸಮಸ್ಯೆಯೂ ಕಾಡುತ್ತಿದೆ. ಈ ಭಾಗದಲ್ಲಿ ಧೂಳಿನಿಂದ ಕೆಮ್ಮಿನ ಸಮಸ್ಯೆಯೂ ಹೆಚ್ಚಾಗಿದ್ದು ಕೂಡಲೇ ರಸ್ತೆಯ ಕಾಮಗಾರಿಯನ್ನು ಮುಗಿಸಿ ಧೂಳಿನ ಸಮಸ್ಯೆಯಿಂದ ನಮ್ಮ ಪರಿಸರಕ್ಕೆ ಮುಕ್ತಿ ನೀಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ನೀರು ಹಾಕಿ

    ಜಂತ್ರ ರಸ್ತೆಯಲ್ಲಿ ಧೂಳಿನ ಸಮಸ್ಯೆಗೆ ಪದೇ ಪದೆ ನೀರನ್ನಾದರೂ ಹಾಕುವ ಕೆಲಸವನ್ನು ಗುತ್ತಿಗೆದಾರ ಮಾಡಬೇಕಾಗಿದೆ.ಆದರೆ ದಿನಕ್ಕೆ ಒಂದೆರಡು ಬಾರಿ ನೀರು ಹಾಕುತ್ತಾರೆ. ಆದರೆ ಅದು ಕೆಲವೇ ನಿಮಿಷದಲ್ಲಿ ಮಾಯವಾಗುತ್ತದೆ. ಹೀಗಾಗಿ ಧೂಳಿನ ಸಮಸ್ಯೆ ಹೆಚ್ಚಾಗಿದೆ.

    ಕಳೆದ ಹಲವು ತಿಂಗಳಿಂದ ಈ ರಸ್ತೆಯಲ್ಲಿ ಧೂಳಿನ ಸಮಸ್ಯೆಯಿದ್ದು ಪರಿಸರದ ಮನೆ ಮಂದಿ ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ. ರಸ್ತೆಯಲ್ಲಿ ಧೂಳಿನ ಸಮಸ್ಯೆಯಿಂದ ಓಡಾಡುವಂತಿಲ್ಲ.

    -ಸುದೇಶ್, ಗ್ರಾಮಸ್ಥ

    ಧೂಳಿನ ಸಮಸ್ಯೆಯಿಂದ ರಸ್ತೆಯಲ್ಲಿ ಓಡಾಡುವುದು ಕಷ್ಟವಗಿದೆ. ಪರಿಸರದ ಮನೆಗಳೆಲ್ಲ ಧೂಳಿನಿಂದ ಆವೃವಾಗಿವೆ. ಅಲ್ಲದೆ ರಸ್ತೆಗೆ ಹಾಕಿದ ಜಲ್ಲಿಕಲ್ಲಿನಿಂದ ದ್ವಿಚಕ್ರ ವಾಹನ ಸವಾರರು ನಿತ್ಯ ಬೀಳುತ್ತಿದ್ದಾರೆ. ಕೂಡಲೇ ಸಮಸ್ಯೆಗೆ ಮುಕ್ತಿ ದೊರಕುವಂತಾಗಲಿ.

    -ವಿಶ್ವನಾಥ್ ಪಾಟ್ಕರ್, ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts