ವಿಜಯವಾಣಿ ಸುದ್ದಿಜಾಲ ಹೆಬ್ರಿ

ಜೀವನ ಎಂಬುದು ಬಟ್ಟೆ ಇದ್ದಹಾಗೆ. ಕೊಳೆ ಆದರೆ ತೊಳೆಯುತ್ತೇವೆ, ಹರಿದರೆ ಹೊಲಿಯುತ್ತೇವೆ. ಹಾಗೆಯೇ ಜೀವನದಲ್ಲಿ ಯಾವುದೇ ಸಂಕಷ್ಟಗಳು ಬಂದಾಗ ಸಮರ್ಥವಾಗಿ ಎದುರಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿನ್ಸೆಂಟ್ ಪಾಯಸ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು ಬಚ್ಚಪ್ಪು ಒಕ್ಕೂಟದ ಏಳು ಸಂಘಗಳ ಬೆಳ್ಳಿ ಹಬ್ಬದ ಪ್ರಯುಕ್ತ ನಡೆದ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ವಾಗ್ಮಿ ದಾಮೋದರ ಶರ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೊಂದ ವ್ಯಕ್ತಿಗೆ ಸಹಾಯ ಮಾಡುವ ಕೆಲಸ ಯೋಜನೆಯಿಂದ ಆಗಿದೆ. ಹನ್ನೊಂದು ಸಾವಿರಕ್ಕೂ ಹೆಚ್ಚು ದೇವಸ್ಥಾನಗಳಿಗೆ ಅನುದಾನ ನೀಡಿ, ದೇವಸ್ಥಾನ ಜೀರ್ಣೋದ್ಧಾರ, ಕೆರೆಗಳ ಹೂಳೆತ್ತುವಿಕೆ, ಮಧ್ಯವರ್ಜನ ಶಿಬಿರದ ಮೂಲಕ ಸಮಾಜ ಕಟ್ಟಿಕೊಟ್ಟಿದ್ದಾರೆ ಎಂದರು.
ಹಿರಿಯ ಸದಸ್ಯರಾದ ರಾಜು ಹಾಂಡ, ಶೀನ ನಾಯ್ಕ, ಗೋಪಾಲ ನಾಯ್ಕ, ಕ್ರಿಯಾಶೀಲ ಸೇವಾ ಪ್ರತಿನಿಧಿ ಕಾಂತಿ ಹೆಗ್ಡೆ ಅವರನ್ನು ಗೌರವಿಸಲಾಯಿತು.
ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ, ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ಯೋಜನೆಯ ಪ್ರಮುಖರಾದ ಶಾಲಿನಿ ಭಂಡಾರಿ, ಪ್ರವೀಣ್ ಹೆಗ್ಡೆ, ನರೇಂದ್ರ ನಾಯಕ್, ಯೋಜನೆಯ ಸದಸ್ಯರು ಉಪಸ್ಥಿತರಿದ್ದರು. ಮೇಲ್ವಿಚಾರಕ ಉದಯ್ ಕುಲಾಲ್ ನಿರೂಪಿಸಿದರು. ವಿಜಯ ಶೆಟ್ಟಿ ಸ್ವಾಗತಿಸಿದರು. ಪ್ರಸಾದ್ ಶೆಟ್ಟಿ ವಂದಿಸಿದರು.