ಉಪ್ಪಿನಂಗಡಿ: ಹೋಳಿ ಹಬ್ಬವನ್ನಾಚರಿಸುತ್ತಿದ್ದ ಬಿಹಾರ ಮೂಲದ ಕಾರ್ಮಿಕರ ಮೇಲೆ 34ನೇ ನೆಕ್ಕಿಲಾಡಿಯಲ್ಲಿ ಗುಂಪು ದಾಳಿ ನಡೆದ ಬಳಿಕ ಹಲ್ಲೆಗೀಡಾದ ಕಾರ್ಮಿಕರು ನಾಪತ್ತೆಯಾಗಿದ್ದು, ಪರಿಸರದ ಬಹುತೇಕ ಎಲ್ಲ ಉತ್ತರ ಭಾರತೀಯ ಕಾರ್ಮಿಕರು ಊರು ತೊರೆದಿದ್ದು, ಕಾರ್ಮಿಕರನ್ನು ಅವಲಂಬಿಸಿದ್ದ ಉದ್ಯಮಗಳೆಲ್ಲವೂ ಅಸ್ತವ್ಯಸ್ತಗೊಂಡಿವೆ.

ಮದರಸದಿಂದ ಮನೆಗೆ ತೆರಳುತ್ತಿದ್ದ ಬಾಲಕರಿಬ್ಬರಿಗೆ ಬಣ್ಣ ಹಚ್ಚಿದರೆಂಬ ಕಾರಣವೊಡ್ಡಿ ಗುಂಪೊಂದು ಕಾರ್ಮಿಕರು ವಾಸ್ತವ್ಯವಿದ್ದ ವಸತಿ ಪ್ರದೇಶಕ್ಕೆ ದಾಳಿ ನಡೆಸಿ ಅಲ್ಲಿ ಹೋಳಿ ಹಬ್ಬದ ಸಂಭ್ರಮದಲ್ಲಿದ್ದವರ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿದೆ. ಹಲ್ಲೆಗೀಡಾದ ಕಾರ್ಮಿಕರು ಓಡಿ ಹೋದವರು ಈವರೆಗೂ ಪತ್ತೆಯಾಗಿಲ್ಲ. ಕಾರ್ಮಿಕರು ತಮ್ಮ ವಸತಿಯಲ್ಲಿ ಹಬ್ಬದೂಟಕ್ಕೆಂದು ಸಿದ್ಧಪಡಿಸಿದ ಭಕ್ಷೃಗಳೆಲ್ಲವೂ ಗುಂಪುದಾಳಿಗೆ ಸಿಲುಕಿ ಚೆಲ್ಲಾಪಿಲ್ಲಿಯಾಗಿತ್ತು. ಹಬ್ಬದೂಟವನ್ನು ಸವಿಯಲೂ ಬಿಡದೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿತ್ತು. ಓಡಿ ತಪ್ಪಿಸಿಕೊಂಡಿದ್ದ ಕಾರ್ಮಿಕರನ್ನು ಹಲ್ಲೆಕೋರರು ಹುಡುಕಿ ಹಲ್ಲೆ ನಡೆಸಿದ್ದ ಪರಿಣಾಮ ಉತ್ತರ ಭಾರತೀಯ ಕಾರ್ಮಿಕರು ಹಲ್ಲೆ ಪ್ರಕರಣವನ್ನು ಪ್ರಾದೇಶಿಕ ದ್ವೇಷದಿಂದ ಘಟಿಸಿದೆ ಎಂದು ಭಾವಿಸಿ ಎಲ್ಲೆಡೆ ಮಾಹಿತಿ ರವಾನಿಸಿದ ಪರಿಣಾಮ ಸಾರಾಸಗಟಾಗಿ ಕಾರ್ಮಿಕರು ಉಪ್ಪಿನಂಗಡಿ ಪರಿಸರ ತೊರೆದು ಹೋಗಿದ್ದಾರೆ.
ಮುಖ್ಯಮಂತ್ರಿಯಿಂದ ಕ್ರಮಕ್ಕೆ ಆಗ್ರಹ: ಮಲ್ಪೆಯಲ್ಲಿ ಮೀನು ಕದ್ದಿರುವಳೆಂದು ಆಪಾದಿಸಿ ಮಹಿಳೆಯೋರ್ವಳನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಕೃತ್ಯದ ಬಗ್ಗೆ ಅಂತಃಕರಣ ಮಿಡಿದು ಮಾತನಾಡಿದ ರಾಜ್ಯದ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದು ಸ್ವಾಗತಾರ್ಹ ನಡೆ. ಅದೇ ರೀತಿ ಯಾರೋ ಒಬ್ಬಿಬ್ಬರು ಮಾಡಿದ ಕೃತ್ಯಕ್ಕೆ ರೋಷಗೊಂಡು ಕಾನೂನು ಕೈಗೆತ್ತಿಕೊಂಡು ಒಂದು ಸಮೂಹವನ್ನು ಮನಸೋ ಇಚ್ಛೆ ದಂಡಿಸುವ ಅನಾಗರಿಕ ಕೃತ್ಯದ ಬಗ್ಗೆಯೂ ಅಂತಃಕರಣ ಮಿಡಿದು ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಜರುಗಿಸಲು ಮುಂದಾಗಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿದ್ದಾರೆ.
ವ್ಯಾಪಾರಕ್ಕೂ ಹೊಡೆತ
ಮುಂಜಾನೆಯಾದರೆ ಹಿಂಡು ಹಿಂಡಾಗಿ ಕೆಲಸಕಾರ್ಯಗಳಿಗೆ ಹೋಗುತ್ತಿದ್ದ ಉತ್ತರ ಭಾರತೀಯ ಕಾರ್ಮಿಕರು, ಸಾಯಂಕಾಲ ಅಂಗಡಿ ಮುಂಗಟ್ಟುಗಳಲ್ಲಿ ದಿನವಹಿ ವಸ್ತುಗಳಿಗಾಗಿ ಗ್ರಾಹಕರಾಗುವ ಮೂಲಕ ಸ್ಥಳೀಯ ವ್ಯವಹಾರಗಳಿಗೆ ಚೇತರಿಕೆ ನೀಡುತ್ತಿದ್ದರು. ಮಾತ್ರವಲ್ಲದೆ ದಿನವಹಿ ಬಾಡಿಗೆ ಮೊತ್ತ ಪಾವತಿಸಿ ವಸತಿ ವ್ಯವಸ್ಥೆ ಒಪ್ಪಿಕೊಂಡಿದ್ದ ಈ ಕಾರ್ಮಿಕರಿಂದಾಗಿ ಹಲವಾರು ಕಟ್ಟಡ ಮಾಲೀಕರು ಉತ್ತಮ ಆದಾಯ ಪಡೆದುಕೊಳ್ಳುತ್ತಿದ್ದರು. ಕಾಂಕ್ರೀಟ್, ಕಟ್ಟಡ ನಿರ್ಮಾಣ ಸಹಿತ ಶ್ರಮದಾಯಕ ಕಾರ್ಯಗಳಿಗೆ ಸ್ಥಳೀಯ ಕಾರ್ಮಿಕರಿಗಿಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದ ಈ ಕಾರ್ಮಿಕರನ್ನು ಹಲವಾರು ಕ್ಷೇತ್ರಗಳು ಅವಲಂಬಿತವಾಗಿದ್ದವು.
ತಾಳಮದ್ದಳೆ ಕಲಾವಿದರಿಗೆ ಮಾತೇ ಪ್ರಧಾನ : ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿಕೆ