ಮಂಡ್ಯ: ಕಾಂಗ್ರೆಸ್ನ ಸ್ಟಾರ್ ಪ್ರಚಾರಕಿ ಆಗಿರುವ ನಟಿ-ಮಾಜಿ ಸಂಸದೆ ರಮ್ಯಾ ಇಂದು ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದು, ಮತ ಯಾಚನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಕೆಲವು ವಿಚಾರಗಳ ಕುರಿತು ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ನಾನು ಈಗ ಮಂಡ್ಯ ಜಿಲ್ಲೆಯ ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡಲು ಬಂದಿದ್ದೇನೆ. ನಾನು ಈಗ ಸ್ಟಾರ್ ಪ್ರಚಾರಕಿ ಅಷ್ಟೇ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಾನು ಯೋಚನೆ ಮಾಡಿಲ್ಲ. ಅದಕ್ಕೆ ತುಂಬಾ ಸಮಯವಿದೆ, ನಾನು ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದೇನೆ. ಸಿನಿಮಾ-ರಾಜಕೀಯ ಬಿಟ್ಟು ತುಂಬಾ ವರ್ಷಗಳಾಗಿವೆ, ಈಗ ನಾನು ಏನಾದರೂ ದುಡಿಯಬೇಕು ಅಲ್ವಾ ಅದಕ್ಕೆ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದೇನೆ, ನಾನು ಉತ್ತರಕಾಂಡ ಸಿನಿಮಾಗೆ ಸಹಿ ಮಾಡಿದ್ದೇನೆ ಎನ್ನುತ್ತ ತಮ್ಮ ವೃತ್ತಿಜೀವನದ ಬಗ್ಗೆ ರಮ್ಯಾ ಹೇಳಿದರು.
ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ರೂ. ಕಳೆದುಕೊಂಡು ನಿಮ್ಹಾನ್ಸ್ಗೆ ಹೋದ ಉದ್ಯಮಿ!
ಮಂಡ್ಯದಲ್ಲಿ ತೊಟ್ಟಿ ಮನೆ ಮಾಡಿ ಇಲ್ಲೇ ಉಳಿಯುತ್ತೇನೆ ಎಂಬ ಭರವಸೆ ನೀಡಿರುವ ರಮ್ಯಾ, ನಮ್ಮ ತಾತನದ್ದು ಗೋಪಾಲಪುರದಲ್ಲಿ ತೊಟ್ಟಿ ಮನೆ ಇದೆ. ನನಗೂ ಒಂದು ತೊಟ್ಟಿಮನೆ ಮಾಡಬೇಕು ಎಂಬ ಆಸೆ ಇದೆ. ಅದು ಯಾವಾಗ ಆಗುತ್ತೆ ಅಂತ ಗೊತ್ತಿಲ್ಲ. ನನಗೆ ತೊಟ್ಟಿ ಮನೆಯ ಆಸೆ ಇದೆ ಎಂದರು. ನಾನು ಯಾವಾಗಲೂ ಮಂಡ್ಯದವಳು. ನಾನು ಗೌಡತಿ ಎಂಬುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ. ನಮ್ಮ ತಾಯಿ ಊರು ಮಂಡ್ಯ, ನಮ್ಮ ತಂದೆ ಸತ್ತಿದ್ದು ಇಲ್ಲೇ, ನನ್ನ ಅಭ್ಯರ್ಥಿ ಮಾಡಿದ್ದು ಇಲ್ಲೇ, ಮಂಡ್ಯ ಜಿಲ್ಲೆಯ ಜನರು ನನಗೆ ಬೆಂಬಲ ನೀಡಿದ್ದಾರೆ. ಈ ಅಭಿಮಾನವನ್ನು ನಾನು ಯಾವತ್ತೂ ಮರೆಯಲ್ಲ, ಇದು ಕಮ್ಮಿಯೂ ಆಗಲ್ಲ. ಮಂಡ್ಯ ಸಂಬಂಧ ಕೇವಲ ರಾಜಕೀಯವಾಗಿ ಅಲ್ಲ, ನನಗೆ ಮಂಡ್ಯ ಕುಟುಂಬದ ರೀತಿ ಎಂದ ರಮ್ಯಾ, ನಾನು ಮಂಡ್ಯಕ್ಕೆ ಬಂದುಹೋಗುತ್ತ ಇರುತ್ತೇನೆ. ಮೊನ್ನೆ ನಿಮಿಷಾಂಬಾ ದೇವಸ್ಥಾನಕ್ಕೆ ಬಂದಿದ್ದೆ. ಮಂಡ್ಯದಲ್ಲಿ ನಮ್ಮ ಸಂಬಂಧಿಕರು ನೆಂಟರು ಇದ್ದಾರೆ. ನಾನು ಯಾವಾಗಲೂ ಬರುತ್ತಿರುತ್ತೇನೆ, ಕಾಣಿಸಿಕೊಳ್ಳಲ್ಲ ಅಷ್ಟೇ. ಇವತ್ತ ನಾನು ಸ್ಟಾರ್ ಕ್ಯಾಂಪೇನರ್ ಆಗಿ ಬಂದಿದ್ದೇನೆ ಎಂದರು.
ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಸಹೋದರಿಯರಿಬ್ಬರ ಸಾವು!
ನನಗೆ ಮೊದಲು ಹುಡುಗನನ್ನ ಹುಡುಕಿ. ಗೌಡರ ಹುಡುಗ ಸಿಕ್ತಾರೆ ಅಂದ್ರೆ ನೋಡಿ. ನನಗು ಹುಡುಗನನ್ನ ನೋಡಿ ನೋಡಿ ಸಾಕಾಗೋಯ್ತು. ನೀವೇ ಹುಡುಕಿ, ನನಗೆ ಒಬ್ಬರೂ ಕಾಣಿಸ್ತಿಲ್ಲ. ಮಂಡ್ಯದಲ್ಲಿ ಸ್ವಯಂವರನೇ ಮಾಡಿ.
| ರಮ್ಯಾ, ನಟಿ, ಮಾಜಿ ಸಂಸದೆ. (ಮದುವೆ ಯಾವಾಗ ಎಂಬ ಮಂಡ್ಯದ ಅಭಿಮಾನಿಗಳ ಪ್ರಶ್ನೆಗೆ ನೀಡಿದ್ದ ಪ್ರತಿಕ್ರಿಯೆ)
ಪ್ರಮುಖವಾಗಿ ನಟ ಅಂಬರೀಷ್ ಅವರು ಮೃತರಾದಾಗ ಏಕೆ ಬಂದಿರಲಿಲ್ಲ ಎಂಬ ವಿಚಾರದ ಕುರಿತು ಸುದ್ದಿಗಾರರ ಜತೆ ಮಾಹಿತಿ ಹಂಚಿಕೊಂಡ ಅವರು, ಅದಕ್ಕೆ ಸೂಕ್ತ ಕಾರಣವನ್ನೂ ನೀಡಿದರು. ಆ ಸಂದರ್ಭದಲ್ಲಿ ನನಗೆ ಟ್ಯೂಮರ್ ಆಗಿ ಸರ್ಜರಿ ಮಾಡಿಸಿಕೊಂಡಿದ್ದೆ. ನನಗೆ ಸಾರ್ವಜನಿಕವಾಗಿ ದುಃಖ ಹಂಚಿಕೊಳ್ಳುವ ಅಭ್ಯಾಸ ಇಲ್ಲ. ಬೇರೆಯವರು ಕ್ಯಾಮರಾ ಮುಂದೆ ಬಂದು ಹಂಚಿಕೊಳ್ಳುತ್ತಾರೆ. ಆದರೆ ನಾನು ಬಾಲ್ಯದಿಂದಲೂ ಸ್ವತಂತ್ರವಾಗಿ ಇದ್ದೇನೆ. ನಾನು ಕೆಲಸದ ಬಗ್ಗೆ ಜಾಸ್ತಿ ಮಾತನಾಡುತ್ತೇನೆ ಹೊರತು ವೈಯಕ್ತಿಕ ವಿಷಯಗಳನ್ನು ಮಾತನಾಡುವುದಿಲ್ಲ. ಹೀಗಾಗಿ ಏನೇನೋ ಹಬ್ಬಿಸುತ್ತಾರೆ. ಅಪಪ್ರಚಾರ ಮಾಡಿರುವುದು ನನಗೆ ಬೇಸರವಾಗಿದೆ. ನನಗೆ ಗೊತ್ತು ನಾನು ಯಾರು ಅಂತ. ನನಗೆ ಆಗ ಟ್ಯೂಮರ್ ಇತ್ತು, ಅದಾದ ಮೇಲೆ ನನಗೆ ತುಂಬಾ ತೊಂದರೆ ಆಯ್ತು. ಅದರ ಬಗ್ಗೆ ಹೇಳಿ ಈಗ ಅನುಕಂಪ ಗಿಟ್ಟಿಸಿಕೊಳ್ಳಲು ಇಷ್ಟ ಇಲ್ಲ ಎಂದು ರಮ್ಯಾ ಹೇಳಿದರು.
ಬೆಂಗಳೂರಲ್ಲಿ ಅಂಬರೀಷ್ ರಸ್ತೆ ಇದೆ, ಮೈಸೂರಲ್ಲೂ ಇದೆ, ಮಂಡ್ಯದಲ್ಲೇಕೆ ಇಲ್ಲ? ನೀವೇ ಪ್ರಶ್ನಿಸಿ: ಸುಮಲತಾ