ಪ್ಯಾರಿಸ್: ಜನಜೀವನವನ್ನು ಕ್ರಾಂತಿಕಾರಕವಾಗಿ ಬದಲಾಯಿಸುವ ಸಾಮರ್ಥ್ಯವಿರುವ ಕೃತಕ ಬುದ್ಧಿಮತ್ತೆಗಾಗಿ (ಎಐ) ಜಾಗತಿಕ ಚೌಕಟ್ಟು ರೂಪಿಸಲು ಸಾಮೂಹಿಕ ಪ್ರಯತ್ನಗಳನ್ನು ನಡೆಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಪ್ರತಿಪಾದಿಸಿದ್ದಾರೆ.
ಈ ಚೌಕಟ್ಟು ನಂಬಿಕೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ಹಾಗೂ ಪೂರ್ವಗ್ರಹಗಳಿಂದ ಮುಕ್ತವಾದ ಓಪನ್ ಸೋರ್ಸ್ಗಳನ್ನು (ಮುಕ್ತ ಸಂಪನ್ಮೂಲ) ಆಧರಿಸಿರಬೇಕು ಎಂದು ಎಐ ಕ್ರಿಯಾ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿದ್ದ ಮೋದಿ ಅಭಿಪ್ರಾಯಪಟ್ಟರು. ಫ್ರೆಂಚ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್ ಇನ್ನೋರ್ವ ಸಹ-ಅಧ್ಯಕ್ಷರಾಗಿದ್ದಾರೆ. ಕೃತಕ ಬುದ್ಧಿಮತ್ತೆಯು ರಾಜಕೀಯ, ಆರ್ಥಿಕತೆ, ಭದ್ರತೆ ಮತ್ತು ಸಮಾಜವನ್ನು ಬದಲಾಯಿಸುತ್ತಿದೆ ಎಂದ ಮೋದಿ, ಎಐ 21ನೇ ಶತಮಾನದಲ್ಲಿ ‘ಮನುಕುಲಕ್ಕೆ ಕೋಡ್ ಬರೆಯುತ್ತಿದೆ’ ಎಂದು ಮೋದಿ ಹೇಳಿದರು. ನಮ್ಮ ಪರಸ್ಪರ ಮೌಲ್ಯಗಳು ಮತ್ತು ನಂಬಿಕೆಯನ್ನು ಎತ್ತಿ ಹಿಡಿಯಲು ಹಾಗೂ ಅಪಾಯಗಳ ನಿರ್ವಹಣೆಗೆ ಅಗತ್ಯವಾದ ಆಡಳಿತ ಹಾಗೂ ಮಾನಕಗಳ ಸ್ಥಾಪನೆಗೆ ಸಂಯುಕ್ತ ಜಾಗತಿಕ ಪ್ರಯತ್ನಗಳು ಅತ್ಯಗತ್ಯವಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ಉದ್ಯೋಗ ನಷ್ಟದ ಭೀತಿ ಬೇಡ: ಎಐನಿಂದಾಗಿ ಉದ್ಯೋಗ ನಷ್ಟವಾಗುವುದೆಂಬ ಆತಂಕವನ್ನು ಪ್ರಸ್ತಾಪಿಸಿದ ಮೋದಿ, ಅದಕ್ಕೆ ಯಾವುದೇ ಆಧಾರವಿಲ್ಲ ಎಂದು ಹೇಳಿದರು. ತಂತ್ರಜ್ಞಾನದಿಂದಾಗಿ ಉದ್ಯೋಗಗಳು ಅದೃಶ್ಯವಾಗುವುದಿಲ್ಲ ಎನ್ನುವುದನ್ನು ಇತಿಹಾಸವೇ ತೋರಿಸಿ ಕೊಟ್ಟಿದೆ. ಆದರೆ, ಪ್ರಕೃತಿ ಬದಲಾಗುತ್ತದೆ ಹಾಗೂ ಹೊಸ ರೀತಿಯ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಮೋದಿ ಪ್ರತಿಪಾದಿಸಿದರು. ಎಐ ಅಭೂತಪೂರ್ವ ಮಟ್ಟದಲ್ಲಿ ಬೆಳೆಯುತ್ತಿದೆ. ಅಲ್ಲದೆ ಅದನ್ನು ಇನ್ನೂ ಬಹಳ ವೇಗವಾಗಿ ಅಳವಡಿಸಿಕೊಂಡು ಬಳಸಲಾಗುತ್ತಿದೆ. ಗಡಿಗಳಲ್ಲಿ ಆಳವಾದ ಅಂತರ್-ಅವಲಂಬನೆಯೂ ಇದೆ ಎಂದರು. ಎಐ-ಪ್ರೇರಿತ ಭವಿಷ್ಯಕ್ಕೆ ಜನರನ್ನು ಸಿದ್ಧಗೊಳಿಸಲು ಕೌಶಲ ಹಾಗೂ ಮರುಕೌಶಲಕ್ಕಾಗಿ ನಾವು ಹೆಚ್ಚು ಹೂಡಿಕೆ ಮಾಡಬೇಕಿದೆ ಎಂದು ಪ್ರತಿಪಾದಿಸಿದರು. ಎಐ ಅಳವಡಿಕೆ ಮತ್ತು ಡೇಟಾ ಗೋಪ್ಯತೆ ವಿಚಾರವಾಗಿ ತಂತ್ರಜ್ಞಾನ- ಕಾನೂನಾತ್ಮಕ ಪರಿಹಾರಗಳನ್ನು ರೂಪಿಸುವಲ್ಲಿ ಭಾರತ ಮುಂಚೂಣಿ ಯಲ್ಲಿದೆ ಎಂದರು. ತನ್ನ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ದೇಶ ಸಿದ್ಧವಿದೆ ಎಂದೂ ತಿಳಿಸಿದರು.
ದಕ್ಷಿಣಾರ್ಧ ಗೋಳಕ್ಕೆ ಅನುಕೂಲ: ಆವಿಷ್ಕಾರ ಮತ್ತು ಆಡಳಿತದ ಬಗ್ಗೆ ಆಳವಾಗಿ ಚಿಂತಿಸಿ ಮುಕ್ತವಾಗಿ ರ್ಚಚಿಸುವ ಅಗತ್ಯವಿದೆ. ವಿಶೇಷವಾಗಿ ದಕ್ಷಿಣಾರ್ಧ ಗೋಳದ ಜನರಿಗೆ ಈ ಆಡಳಿತವು ಲಭ್ಯವಾಗುವುದನ್ನು ಖಾತರಿಪಡಿಸಬೇಕು ಎಂದು ಹೇಳಿದರು. ಕಂಪ್ಯೂಟ್, ಶಕ್ತಿ, ಪ್ರತಿಭೆ, ಡೇಟಾ ಅಥವಾ ಹಣಕಾಸು ಸಂಪನ್ಮೂಲಗಳ ವಿಚಾರದಲ್ಲಿ ಸಾಮರ್ಥ್ಯದ ಕೊರತೆ ಕಾಣಿಸುತ್ತಿದೆ ಎಂದರು.
ತಂತ್ರಜ್ಞಾನದ ಜನತಾಂತ್ರೀಕರಣ: ಅಪಾಯಗಳ ನಿರ್ವಹಣೆ ಮತ್ತು ಪ್ರತಿಸ್ಪರ್ಧಿಗಳನ್ನು ಎದುರಿಸಲು ಮಾತ್ರವಲ್ಲ, ಅನ್ವೇಷಣೆಗಳ ಉತ್ತೇಜನ ಮತ್ತು ಜಾಗತಿಕ ಕಲ್ಯಾಣಕ್ಕೆ ಅವುಗಳ ಬಳಕೆಗೂ ಆಡಳಿತದ ಅವಶ್ಯಕತೆಯಿದೆ ಎಂದು ಮೋದಿ ಹೇಳಿದರು. ‘ನಾವು ತಂತ್ರಜ್ಞಾನವನ್ನು ಜನತಾಂತ್ರೀಕರಿಸಬೇಕು ಹಾಗೂ ಜನ-ಕೇಂದ್ರಿತ ಆಪ್ಗಳನ್ನು ಸೃಷ್ಟಿಸಬೇಕು. ಸೈಬರ್ ಭದ್ರತೆ, ತಪು್ಪ ಮಾಹಿತಿ ಮತ್ತು ಡೀಪ್ ಫೇಕ್ಗಳ ಕಳವಳವನ್ನು ಕೂಡ ನಿಭಾಯಿಸಬೇಕಿದೆ’ ಎಂದು ಮೋದಿ ಹೇಳಿದರು.
ಸರಳ ಭಾಷೆ: ವೈದ್ಯಕೀಯ ಪರಿಭಾಷೆಯನ್ನು ಸರಳೀ ಕರಿಸಿ ಎಲ್ಲರಿಗೂ ಅರ್ಥವಾಗುವಂತೆ ಮಾಡುವ ಸಾಮರ್ಥ್ಯ ಎಐಗಿದೆ ಎನ್ನುವ ಮೂಲಕ ಮೋದಿ ತಮ್ಮ ಭಾಷಣವನ್ನು ಆರಂಭಿಸಿ ಎಐನ ಮಹತ್ವವನ್ನು ತಿಳಿಸಿದರು. ಅದೇ ಹೊತ್ತಿಗೆ ಎಐನ ಮಿತಿಗಳು ಮತ್ತು ಪೂರ್ವಗ್ರಹಗಳನ್ನು ಅರ್ಥ ಮಾಡಿ ಕೊಳ್ಳುವುದು ಕೂಡ ಅಗತ್ಯ ಎಂದರು.
ಜೀವನ ಬದಲಾವಣೆ ಸಾಮರ್ಥ್ಯ: ಆರೋಗ್ಯ, ಶಿಕ್ಷಣ, ಕೃಷಿ ಇತ್ಯಾದಿ ಕ್ಷೇತ್ರಗಳಲ್ಲಿ ಸುಧಾರಣೆ ತಂದು ಕೋಟಿಗಟ್ಟಲೆ ಜನರ ಜೀವನವನ್ನು ಪರಿವರ್ತಿಸಲು ಎಐ ನೆರವಾಗಬಲ್ಲದು. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್ಡಿಜಿ) ತಲುಪುವ ಪಯಣವನ್ನು ಸುಲಭ ಹಾಗೂ ತ್ವರಿತಗೊಳಿಸುವ ಜಗತ್ತನ್ನು ಸೃಷ್ಟಿಸಲು ಅದು ನೆರವಾಗಬಲ್ಲದು ಎಂದರು.
ತ್ರಿವಳಿ ಸಂಗಮ: ಎಐ ಶೃಂಗಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್ ಮತ್ತು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಎಲಿಸಿ ಅರಮನೆಯಲ್ಲಿ ಭೇಟಿಯಾಗಿ ರ್ಚಚಿಸಿದರು. ಮೋದಿ ಬರುತ್ತಲೇ ಮ್ಯಾಕ್ರನ್ ತಮ್ಮ ‘ಗೆಳೆಯ’ನನ್ನು ಬಿಗಿದಪ್ಪಿ ಬರ ಮಾಡಿಕೊಂಡರು.
ಭಾರತದಲ್ಲಿ ಮುಂದಿನ ಶೃಂಗಸಭೆ: ಮುಂದಿನ ಎಐ ಶೃಂಗಸಭೆಗೆ ಭಾರತ ಆತಿಥ್ಯ ವಹಿಸಲಿದೆ ಎಂದು ಫ್ರಾನ್ಸ್ ಮಂಗಳವಾರ ಪ್ರಕಟಿಸಿದೆ.
ಕೃತಕ ಬುದ್ಧಿಮತ್ತೆಯು ಉದ್ಯೋಗ ಗಳನ್ನು ಕಸಿಯುವುದಿಲ್ಲ ಎಂಬ ನರೇಂದ್ರ ಮೋದಿ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಎಐ ಎಂದಿಗೂ ಮಾನವರ ಸ್ಥಾನಕ್ಕೆ ಬರಲಾಗದು.
| ಜೆ.ಡಿ. ವಾನ್ಸ್ ಅಮೆರಿಕ ಉಪಾಧ್ಯಕ್ಷ
ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ Mohammed Siraj ಸೇರ್ಪಡೆ ಫಿಕ್ಸ್! ಒಂದು ವೇಳೆ ಹಾಗಾದರೆ ಈತನಿಗೆ ಗೇಟ್ಪಾಸ್ ಪಕ್ಕಾ