ಕಠ್ಮಂಡು: ಟೇಕಾಫ್ ಆಗುವ ವೇಳೆ ಶೌರ್ಯ ಏರ್ಲೈನ್ಸ್ನ 9ಎನ್-ಎಎಂಇ (ಸಿಆರ್ಜೆ 200) ವಿಮಾನ ಪತನಗೊಂಡು 18 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ನೇಪಾಳ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ಜುಲೈ 24) ಬೆಳಗ್ಗೆ ನಡೆದಿದೆ. ಈ ಘಟನೆಯಲ್ಲಿ ಪೈಲಟ್ ಬಚಾವ್ ಆಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ವಿಮಾನದಲ್ಲಿ ಪೈಲಟ್ ಸೇರಿ 19 ಮಂದಿ ಇದ್ದರು. 18 ಮಂದಿಯ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ. ವಿಮಾನದ ಅವಶೇಷಗಳಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ 37 ವರ್ಷದ ಪೈಲಟ್ ಮನಿಶ್ ಶಕ್ಯ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶೌರ್ಯ ಏರ್ಲೈನ್ಸ್ ವಿಮಾನವು ವಿಮಾನಯಾನ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು.
ವಿಮಾನವು ಕಠ್ಮಂಡುವಿನಿಂದ ಪೋಖರಾಗೆ ತೆರಳುತ್ತಿತ್ತು. ಟೇಕಾಫ್ ಆಗುವಾಗ ರನ್ವೇನಿಂದ ಜಾರಿದ್ದು, ಬೆಳಗ್ಗೆ 11 ಗಂಟೆ ಸುಮಾರಿಗೆ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿತು. ಈ ಅಪಘಾತದ ನಂತರ ವಿಮಾನದಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ.
ಶೌರ್ಯ ವಿಮಾನಯಾನ ಸಂಸ್ಥೆಯನ್ನು 2019 ರಲ್ಲಿ ಭಾರತದ ಕುಬೇರ್ ಗ್ರೂಪ್ 630 ಮಿಲಿಯನ್ ನೇಪಾಳಿ ರೂಪಾಯಿಗಳಿಗೆ ಸ್ವಾಧೀನಪಡಿಸಿಕೊಂಡಿತು. 2021ರಲ್ಲಿ ಶೌರ್ಯ ಏರ್ಲೈನ್ಸ್ನಿಂದ ಕುಬೇರ್ ಏರ್ಲೈನ್ಸ್ ಎಂದು ಮರುಬ್ರ್ಯಾಂಡ್ ಆಗುತ್ತದೆ ಎಂದು ವರದಿಗಳು ಬಂದವು ಆದರೆ ಅದನ್ನು ನಂತರದಲ್ಲಿ ತಡೆಹಿಡಿಯಲಾಯಿತು. (ಏಜೆನ್ಸೀಸ್)
ದರ್ಶನ್ ಜೈಲುವಾಸ ಹೇಗಿದೆ? ವಿಐಪಿ ಸೌಲಭ್ಯ ಸಿಗ್ತಿದೆಯಾ? ದಾಸನನ್ನು ಭೇಟಿಯಾದ ಸಹಕೈದಿ ಬಿಚ್ಚಿಟ್ಟ ಸತ್ಯವಿದು…
ಐಸಿಸಿಗೆ ಗಾಳ ಹಾಕಿದ ಪಿಸಿಬಿ! ತಮ್ಮ ನೆಲಕ್ಕೆ ಟೀಮ್ ಇಂಡಿಯಾ ಕರೆಸಿಕೊಳ್ಳಲು ಸಖತ್ ಪ್ಲಾನ್ ಮಾಡಿದೆ ಪಾಕ್