ಮಂಗಳೂರು: ಭಾನುವಾರ ತಡರಾತ್ರಿ ಜೋಕಟ್ಟೆ ಅಂಗರಗುಂಡಿ ಬಳಿ ಗೂಡ್ಸ್ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ 17 ಎಮ್ಮೆಗಳು ಸೇರಿದಂತೆ 20 ಜಾನುವಾರುಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ.
ಕಂಕನಾಡಿ ಕಡೆಯಿಂದ ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಕಡೆಗೆ ತೆರಳುವ ವೇಳೆ ಅವಘಡ ಸಂಭವಿಸಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಮಲಗಿದ್ದ ವೇಳೆ ಹಾದು ಹೋಗಿರಬಹುದು
ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿ ಒಬ್ಬರು ತೋಕೂರಿನಿಂದ ಕೇರಳದ ಪಣಂಬೂರಿಗೆ ಸರಕು ಸಾಗಾಣೆ ರೈಲಿನ ಹಳಿ ಇದೆ. ಸಾಮಾನ್ಯವಾಗಿ ಈ ಮಾರ್ಗದಲ್ಲಿ ಗೂಡ್ಸ್ ರೈಲು ಸಾಗುವಾಗ ಹಾರ್ನ್ ಹೊಡೆಯುತ್ತಾರೆ.
ಬಹುಶಃ ಎಮ್ಮೆಗಳು ರೈಲ್ಚೆ ಹಳಿ ಮೇಲೆ ಮಲಗಿದ್ದ ಸಮಯದಲ್ಲಿ ರೈಲು ಹಾದು ಹೋಗಿರಬಹುದು. 2021ರಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು. ಆಗ 13 ಎಮ್ಮೆಗಳು ಸತ್ತಿದ್ದವು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಮುಂದಿನ ಜನಾಂಗ ಕೊಲ್ಲೂರು ದೇವಸ್ಥಾನಕ್ಕೆ ಬರಬೇಕೆಂದರೆ ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಿ!
ಅತಿಯಾದ ಮಳೆ
ಶನಿವಾರ ಈ ಪ್ರದೇಶದಲ್ಲಿ ಬಾರಿ ಮಳೆಯಾದ ಕಾರಣ ರೈಲ್ವೆ ಹಳಿ ಬಳಿ ಕೆಸರು ನಿಂತಿತ್ತು. ಎಮ್ಮೆಗಳು ಹೆಚ್ಚಾಗಿ ಕೆಸರಿನ ಬಳಿ ಹೆಚ್ಚಾಗಿ ಮಲಗುತ್ತವೆ. ರೈಲು ಹಾರ್ನ್ ಹೊಡೆಯುತ್ತಾ ಬಂದರೂ ಸಹ ಎಮ್ಮೆಗಳು ಮೇಲೇಳುವುದಿಲ್ಲ ಆಗ ಈ ಘಟನೆ ನಡೆದಿರಬಹುದು ಎಂದು ರೈಲ್ಷೆ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಎಮ್ಮೆ ಹಾಗೂ ಜಾನುವಾರುಗಳ ಮೃತದೇಹಗಳನ್ನು ಹೊರತೆಗೆದರು.