ಬೆಂಗಳೂರು: ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾಗಿದ್ದು, ರಕ್ತದಾನದಿಂದ ಮತ್ತೊಂದು ಜೀವ ಉಳಿಸಲು ಸಾಧ್ಯ. ಆದ್ದರಿಂದ ಮಹಾದಾನವಾಗಿರುವ ರಕ್ತದಾನ ಮಾಡಲು ಯುವಜನತೆ ಸ್ವಇಚ್ಛೆಯಿಂದ ಮುಂದೆ ಬರಬೇಕು ಎಂದು ಒಂದನೇ ಕರ್ನಾಟಕ ಬೆಟಾಲಿಯನ್ ಎನ್ಸಿಸಿಯ ಸುಬೇದಾರ್ ಜಗದೀಶರಾಜ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ರಾಜಾಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್, ಎನ್ ಸಿಸಿ, ಎನ್ಎಸ್ಎಸ್ ಘಟಕಗಳು ಲಯನ್ಸ್ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ, ಐಕ್ಯೂಎಸಿ ನೇತೃತ್ವದಲ್ಲಿ ರಕ್ತದಾನ ಶಿಬಿರ ಹಾಗೂ ಎಚ್ಐವಿ -ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಜನತೆ ರಕ್ತದಾನ ಮತ್ತು ಏಡ್ಸ್ ಕಾಯಿಲೆಗಳ ಬಗ್ಗೆ ಜಾಗೃತಿ ವಹಿಸಬೇಕು. ಯಾವುದೇ ಸಂಕೋಚವಿಲ್ಲದೆ ಸಮಯಾನುಸಾರ ರಕ್ತದಾನವನ್ನು ಮಾಡಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಪ್ರಿವೆನ್ಷನ್ ಸೊಸೈಟಿಯ ನಿರ್ದೇಶಕ ಡಾ. ಜೈರಾಜು. ರವರು ರಕ್ತದಾನದಿಂದಾಗುವ ಉಪಯುಕ್ತತೆ ಮತ್ತು ಎಚ್ಐವಿ ತಡೆಗಟ್ಟುವ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇಜರ್ ಡಾ.ವನಜಾಕ್ಷಿ ಅವರು ಮಾತನಾಡಿ, ಪ್ರತಿ 3-4 ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ರಕ್ತದಾನ ಮಾಡಿದವರ ಆರೋಗ್ಯವು ಉತ್ತಮವಾಗಿರುತ್ತದೆ. ಹಾಗಾಗಿ ರಕ್ತದಾನ ಮಾಡುವುದರ ಬಗ್ಗೆ ಎಲ್ಲರೂ ನಿರ್ಧಾರ ಮಾಡಬೇಕು ಎಂದರು.
ರಕ್ತದಾನ ಶಿಬಿರದಿಂದ ಸಂಗ್ರಹಗೊಂಡ 104 ಯೂನಿಟ್ ರಕ್ತವನ್ನು ಲಯನ್ಸ್ ಬ್ಲಡ್ ಬ್ಯಾಂಕಿಗೆ ಹಸ್ತಾಂತರಿಸಲಾಯಿತು. ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಡಾ.ಕವಿತಾ ಯಾದವ್, ಎನ್ಎಸ್ಎಸ್ ಸಂಚಾಲಕರಾದ ಡಾ. ಬಸವರಾಜ್, ಡಾ. ಪೂರ್ಣಿಮಾ ಜಿ ಆರ್, ಜಗದೀಶಯ್ಯ ಐ.ಸಿ, ಡಾ. ಬಸವರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳ ಜೊತೆ ಕಾಲೇಜಿನ ಹಳೇ ವಿದ್ಯಾರ್ಥಿಗಳು ರಕ್ತದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.