ಬೆಂಗಳೂರು: ಇದೀಗ ಸರ್ಕಾರ ಬದಲಾಗಿದ್ದು ನಾಲ್ಕು ಹೈಪ್ರೋಫೈಲ್ ಪ್ರಕರಣಗಳಿಗೆ ಮತ್ತೊಮ್ಮೆ ಜೀವ ಬರಲಿದೆಯಾ ಎನ್ನುವ ಪ್ರಶ್ನೆ ಎದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರೂ ಖಡಕ್ ಸೂಚನೆ ನೀಡಿದ್ದ ಬೆನ್ನಲ್ಲೆ ಡಿಜಿಪಿ, ನಗರದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ.
ನೂತನ ಡಿಜಿಪಿ ಅಲೋಕ್ ಮೋಹನ್ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಹೆಚ್ಚುವರಿ ಆಯುಕ್ತರು, ಡಿಐಜಿಗಳು ಹಾಗೂ ಎಲ್ಲಾ ಡಿಸಿಪಿಗಳ ಜತೆ ಇಂದು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ನಾಲ್ಕು ಪ್ರಮುಖ ಪ್ರಕರಣಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ದಿಗ್ವಿಜಯ ನ್ಯೂಸ್ಗೆ ಮಾಹಿತಿ ಲಭಿಸಿದೆ.
ಯಾವುವು ಆ ನಾಲ್ಕು ಪ್ರಕರಣ?
ಕಾಟನ್ ಪೇಟೆ ಠಾಣೆಯಲ್ಲಿ ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ದಾಖಲಾಗಿದ್ದ ನಕಲಿ ದರೋಡೆ ಪ್ರಕರಣ, ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ, ಬಿಟ್ ಕಾಯಿನ್ ಪ್ರಕರಣ ಮತ್ತು ನಾಗವಾರ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣದ ಪ್ರಕರಣಗಳ ತನಿಖೆ ಮತ್ತೊಮ್ಮೆ ಶುರುವಾಗುವ ಸಾಧ್ಯತೆ ಇದೆ. ನಾಲ್ಕು ಪ್ರಕರಣಗಳ ತನಿಖಾ ಹಂತ ಮತ್ತು ಸ್ಥಿತಿಗಳ ಬಗ್ಗೆ ಮಾಹಿತಿಯನ್ನು ಡಿಜಿಪಿ ಕೇಳಲಿದ್ದಾರೆ ಎನ್ನಲಾಗಿದೆ. ಈ ಪ್ರಕರಣಗಳ ಕುರಿತಾಗಿ ಇಂದಿನ ಸಭೆಯಲ್ಲಿ ಚರ್ಚೆ ನಡೆಯಬಹುದು ಎಂದು ದಿಗ್ವಿಜಯ ನ್ಯೂಸ್ ಮಾಹಿತಿ ಲಭಿಸಿದೆ.