ಲಖನೌ: ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯ ಘಿನೊಐ ಎಂಬ ಗ್ರಾಮದ ಬಳಿ ಲಾರಿ ಡಿಕ್ಕಿಯಿಂದ ಬೆಂಕಿ ಹೊತ್ತಿಕೊಂಡ ಬಸ್ನಿಂದ 21 ಪ್ರಯಾಣಿಕರನ್ನು ರಕ್ಷಿಸಲಾಗಿದೆ.
ರಾತ್ರಿ ಅಂದಾಜು 9.30ಕ್ಕೆ ಅವಘಡ ನಡೆದಿತ್ತು. ಈ ಬಸ್ನಲ್ಲಿ 43 ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದ್ದು, ಅದರಲ್ಲಿ 21 ಮಂದಿ ಬೆಂಕಿ ಹೊತ್ತಿದ ಮೇಲೆ ತಪ್ಪಿಸಿಕೊಂಡಿದ್ದಾರೆ. ಇವರೆಲ್ಲ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಬೆಂಕಿ ತಹಬದಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ತಿಳಿಸಿದ್ದಾರೆ.
ಇನ್ನು ಕೆಲವು ಪ್ರಯಾಣಿಕರು ಬಸ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಅವರ ಬಗ್ಗೆ ಬೆಂಕಿ ಸಂಪೂರ್ಣ ನಂದಿದ ಮೇಲೆ, ಬಸ್ ಬಳಿ ಹೋಗಿ ತಿಳಿಯ ಬೇಕಿದೆ ಎಂದರು.
ಬಸ್ನಲ್ಲಿದ್ದ ಗಾಯಗೊಂಡ ಪ್ರಯಾಣಿಕ ರಾಮ್ಸೇನ್, ಲಾರಿಗೆ ಡಿಕ್ಕಿ ಹೊಡೆದಾಗ ಬಸ್ನಲ್ಲಿ ಬೆಂಕಿ ಕಾಣಿಸಿತು. ನಾನು ಕಿಟಕಿ ಗಾಜು ಒಡೆದು ಹೊರಬಂದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, 21 ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ದುರಂತದಿಂದ ಎಷ್ಟು ಜನ ಪ್ರಾಣಹಾನಿಯಾಗಿದೆ ಎಂದು ನಿಖರವಾಗಿ ತಿಳಿದು ಬಂದಿಲ್ಲ. ಗಾಯಾಳುಗಳಿಗೆ ಎಲ್ಲ ರೀತಿಯ ಔಷಧ ಸೌಲಭ್ಯ ನೀಡಲಾಗುವುದು. ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಯಿಂದ ವರದಿ ಕೇಳಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)