ಇಸ್ಲಾಮಾಬಾದ್: ಲಾಹೋರ್, ರಾವಲ್ಪಿಂಡಿ, ಕರಾಚಿ ನಗರಗಳ ಮೇಲೆ ಭಾರತೀಯ ಸೇನೆಯ ಡ್ರೋನ್ ದಾಳಿಯಿಂದ ಪಾಕಿಸ್ತಾನ ತತ್ತರಿಸಿದೆ. ಇದರಿಂದಾಗಿ 10ನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಟಿ20 ಟೂರ್ನಿಯ ಬಾಕಿ ಉಳಿದಿರುವ 8 ಪಂದ್ಯಗಳನ್ನು ನೆರೆಯ ಯುಎಇಗೆ ಸ್ಥಳಾಂತರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಶುಕ್ರವಾರ ಬೆಳಗ್ಗೆ ನಿರ್ಧರಿಸಿತು. ಆದರೆ ಪಿಎಸ್ಎಲ್ ಪಂದ್ಯಗಳಿಗೆ ಆತಿಥ್ಯ ವಹಿಸಿಕೊಳ್ಳಲು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಸಂಜೆಯ ವೇಳೆಗೆ ನಿರಾಕರಿಸಿತು. ಇದರಿಂದಾಗಿ ರಾತ್ರಿಯ ವೇಳೆಗೆ ಪಿಸಿಬಿ, ಟೂರ್ನಿಯನ್ನೇ ಅರ್ನಿದಿಷ್ಟಾವಧಿಗೆ ಮುಂದೂಡಲು ನಿರ್ಧರಿಸಿದೆ.

ಪಿಎಸ್ಎಲ್ನ ಉಳಿದ ಪಂದ್ಯಗಳನ್ನು ದುಬೈಗೆ ಸ್ಥಳಾಂತರಗೊಳಿಸುವುದಾಗಿ ಪಿಸಿಬಿ ಹೇಳಿದರೂ, ಭಾರತ&ಪಾಕಿಸ್ತಾನ ಗಡಿ ಉದ್ವಿಗ್ನತೆಯಿಂದಾಗಿ ಹೆಚ್ಚಿನ ಭದ್ರತಾ ಭೀತಿ ಎದುರಾಗಿರುವುದರಿಂದ ಪಿಎಸ್ಎಲ್ ಪಂದ್ಯಗಳಿಗೆ ಆತಿಥ್ಯ ವಹಿಸುವ ಪಿಸಿಬಿ ಮನವಿಯನ್ನು ಇಸಿಬಿ ತಿರಸ್ಕರಿಸಿತು ಎಂದು ಮೂಲಗಳು ತಿಳಿಸಿವೆ.
“ಬಿಸಿಸಿಐ ಜತೆಗೆ ಇಸಿಬಿ ಅತ್ಯುತ್ತಮವಾದ ಸಂಬಂಧವನ್ನು ಹೊಂದಿದೆ. 2021ರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್, ಐಪಿಎಲ್ ಪಂದ್ಯಗಳು ಮಾತ್ರವಲ್ಲದೆ, ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ ವಹಿಸಿತ್ತು. ಆದರೆ ಭಾರತ-ಪಾಕ್ ನಡುವಿನ ಉದ್ವಿಗ್ನತೆಯ ಸನ್ನಿವೇಶದಲ್ಲಿ ಪಿಎಸ್ಎಲ್ ಪಂದ್ಯಗಳಿಗೆ ಆತಿಥ್ಯ ವಹಿಸಿದರೆ, ಭಾರತ-ಯುಎಇ ನಡುವಿನ ಸಂಬಂಧ ಹಾಳಾಗುವ ಸಾಧ್ಯತೆ ಇದೆ. ಅಲ್ಲದೆ ಯುಎಇಯನ್ನು ಪಾಕಿಸ್ತಾನದ ಮಿತ್ರರಾಷ್ಟ್ರ ಎಂದು ಭಾರತ ಪರಿಗಣಿಸುವ ಮತ್ತು ಭದ್ರತಾ ಅಪಾಯವೂ ಎದುರಾಗಲಿದೆ’ ಎಂದು ಮೂಲಗಳು ತಿಳಿಸಿವೆ. ರಾವಲ್ಪಿಂಡಿ ಸ್ಟೇಡಿಯಂ ಪಕ್ಕದಲ್ಲೇ ಡ್ರೋನ್ ದಾಳಿ ನಡೆದ ಕಾರಣ, ಪಿಎಸ್ಎಲ್ನಲ್ಲಿ ಮೊದಲಿಗೆ ಗುರುವಾರದ ಪಂದ್ಯವನ್ನು ಮಾತ್ರ ಮುಂದೂಡಲಾಗಿತ್ತು.