ಬೆಂಗಳೂರು: ಕ್ರಿಕೆಟ್ ಎಂದರೆ ಸಖತ್ ಕ್ರೇಜ್. ಯುವಕ, ಯುವತಿ, ವೃದ್ಧರಿದಂದ ಹಿಡಿದು ಚಿಕ್ಕ ಮಕ್ಕಳು ಕೂಡಾ ಕ್ರಿಕೆಟ್ ಇಷ್ಟ ಪಡುತ್ತಾರೆ. ಐಪಿಎಲ್ ಹವಾ ಕಳೆದ ಕೆಲವು ವಾರಗಳಿಂದ ಶುರುವಾಗಿದೆ. ಆದರೆ ಒಂದು ವಿಚಾರವಾಗಿ ನಾಡಿದ್ದು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದ ಭಾರೀ ಚರ್ಚೆಯಲ್ಲಿದೆ.
2023 ಮೇ 21 ರಂದು ಆರ್ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವೆ ಐಪಿಎಲ್ ಪಂದ್ಯ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿಯೇ ಮ್ಯಾಚ್ ನಡೆಯುತ್ತಿರುವುದರಿಂದ ಅಭಿಮಾನಿಗಳು ಮ್ಯಾಚ್ ವೀಕ್ಷಿಸಲು ಕಾತುರರಾಗಿದ್ದಾರೆ. ಆದರೆ ಆರ್ಸಿಬಿ ಪಂದ್ಯವನ್ನು ನೋಡಲು ಟಿಕೆಟ್ ಸಿಗುತ್ತಿಲ್ಲ ಎಂದು ಅಭಿಮಾನಿಗಳು ಮ್ಯಾನೆಜ್ಮೆಂಟ್ ವಿರುದ್ಧವಾಗಿ ಹಿಡಿ ಶಾಪ ಹಾಕುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಡುತ್ತಿದೆ. ಹುಬ್ಬಳ್ಳಿ, ಧಾರವಾಡ, ರಾಯಚೂರು ಸೇರಿದಂತೆ ಅನೇಕ ಭಾಗಗಳಿಂದ ಅಭಿಮಾನಿಗಳು ಬಂದಿದ್ದಾರೆ. ಆದರೆ ಇವರಿಗೆ ಮ್ಯಾಚ್ ವೀಕ್ಷಣೆಗೆ ಟಿಕೆಟ್ ಸಿಗುತ್ತಿಲ್ಲ. ಈ ಕುರಿತಾಗಿ ಸಾಕಷ್ಟು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳು ಹೇಳಿದ್ದೇನು?: 9 ಸಾವಿರ ಟಿಕೆಟ್ಗಳಿವೆ. ಆದರೆ ನೂರು ಟಿಕೆಟ್ಗಳ ಹಂಚಿಕೆ ಕೂಡಾ ಆಗಿಲ್ಲ. ಬೆಳಿಗ್ಗೆ 5 ಗಂಟೆಯಿಂದ ನಾವು ಟಿಕೆಟ್ಗಾಗಿ ಕಾಯುತ್ತಿದ್ದೇವೆ. 1200 ರೂಪಾಯಿ ಬೆಲೆಯ ಟಿಕೆಟ್ನ್ನು 8 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಪೊಲೀಸರೇ ಈ ಟಿಕೆಟ್ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮ್ಯಾನೆಜ್ಮೆಂಟ್ ಬಳಿ ಈ ಕುರಿತಾಗಿ ಕೇಳಿದರೆ, ಪೊಲೀಸರ ಬಳಿ ದೂರು ನೀಡಿ, ಫ್ರಿಡಂ ಪಾರ್ಕ್ನಲ್ಲಿ ಕುಳಿತು ಪೈಟ್ ಮಾಡಿ ಎಂದು ಹೇಳುತ್ತಿದ್ದಾರೆ. ಹುಬ್ಬಳ್ಳಿ, ಕೋಲಾರ, ದಾವಣಗೆರೆ ಹೀಗೆ ಬೇರೆ ಬೇರೆ ಕಡೆಯಿಂದ ಸರಿಸುಮಾರು 5 ಸಾವಿರ ಜನರು ಬಂದು ಟಿಕೆಟ್ಗಾಗಿ ಕಾಯುತ್ತಿದ್ದೇವೆ. ಕ್ರೀಡಾಂಗಣದಲ್ಲಿ 40 ಸಾವಿರ ಆಸನಗಳು ಇವೆ. ಕೇವಲ 150 ಟಿಕೆಟ್ ಮಾತ್ರ ಕೊಟ್ಟಿದ್ದಾರೆ. ಉಳಿದ ಟಿಕೆಟ್ಗಳು ಯಾಕೆ ಕೊಡುತ್ತಿಲ್ಲ. ಈ ಕುರಿತಾಗಿ ಪ್ರಶ್ನೆ ಮಾಡಿದೆ ಸರಿಯಾದ ಮಾಹಿತಿಯನ್ನು ಯಾರು ನೀಡುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.