ನವದೆಹಲಿ: ದಿಗ್ಗಜ ಸಚಿನ್ ತೆಂಡುಲ್ಕರ್ ಭಾರತ ತಂಡದಿಂದ ನಿರ್ಗಮಿಸುವ ಸಮಯದಲ್ಲಿ ವಿರಾಟ್ ಕೊಹ್ಲಿ ಭವಿಷ್ಯದ ಬ್ಯಾಟಿಂಗ್ ತಾರೆಯಾಗಿ ಬೆಳೆದು ನಿಂತಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿ ಅವರನ್ನು ಭಾರತ ತಂಡದಿಂದ ಹೊರಹಾಕಬೇಕಾದರೆ, ಮುಂದಿನ ಬ್ಯಾಟಿಂಗ್ ತಾರೆ ಪಕ್ವತೆ ಪಡೆಯುವುದು ಅಗತ್ಯವಾಗಿದೆ. ಸದ್ಯ ಶುಭಮಾನ್ ಗಿಲ್ ಅವರನ್ನು ಕೊಹ್ಲಿ ಉತ್ತರಾಧಿಕಾರಿ ಎಂದು ಗುರುತಿಸಲಾಗಿದ್ದರೂ, ಅವರ ಬ್ಯಾಟಿಂಗ್ ನಿರ್ವಹಣೆ ಅಸ್ಥಿರವೆನಿಸಿದೆ. ಹೀಗಾಗಿ ಶುಭಮಾನ್ ಗಿಲ್ ಭಾರತದ ಎಲ್ಲ 3 ಪ್ರಕಾರದ ತಂಡದಲ್ಲೂ ಕಾಯಂ ಸ್ಥಾನ ಕಂಡುಕೊಂಡು ಭವಿಷ್ಯದ ಬಗ್ಗೆ ಭರವಸೆ ಮೂಡಿಸುವವರೆಗೆ ಕೊಹ್ಲಿ ಅವರನ್ನು ಹೊರಕಳುಹಿಸಲು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಹಿಂದೇಟು ಹಾಕಲಿದೆ ಎಂದು ವರದಿಯಾಗಿದೆ.

ಇನ್ನು ಸಕಾರಣವಿಲ್ಲದೆ ವಿಶ್ರಾಂತಿ ಇಲ್ಲ
ಕಾರ್ಯದೊತ್ತಡ ತಗ್ಗಿಸುವ ನೆಪ ನೀಡಿ ಭಾರತದ ಪ್ರಮುಖ ಕ್ರಿಕೆಟಿಗರು ಇತ್ತೀಚೆಗಿನ ವರ್ಷಗಳಲ್ಲಿ ಪದೇಪದೆ ಪ್ರಮುಖವಲ್ಲದ ಕೆಲ ಸರಣಿಗಳಿಂದ ಹೊರಗುಳಿಯುವುದು ಸಾಮಾನ್ಯವಾಗಿತ್ತು. ಆದರೆ ಇನ್ನು ಮುಂದೆ ಇಂಥ ವಿಶ್ರಾಂತಿಗಳಿಗೆ ಅವಕಾಶ ನೀಡದಿರಲು ಬಿಸಿಸಿಐ ನಿರ್ಧರಿಸಿದೆ. ಇನ್ನು ಯಾವುದಾದರೂ ದ್ವಿಪಯ ಸರಣಿಯಿಂದ ವಿಶ್ರಾಂತಿ ಬಯಸುವ ಆಟಗಾರ ಸೂಕ್ತ ವೈದ್ಯಕಿಯ ಕಾರಣವನ್ನು ನೀಡುವುದು ಅಗತ್ಯವಾಗಿರುತ್ತದೆ. ಇದರ ಹೊರತಾಗಿ ಬೇರಾವುದೇ ಕಾರಣಗಳಿಂದ ಸರಣಿಗಳಿನ್ನು ತಪ್ಪಿಸಿಕೊಳ್ಳುವಂತಿಲ್ಲ.
ಟೆಸ್ಟ್ ತಂಡದಲ್ಲಿ ಸ್ಥಾನ ಬಯಸುವ ಎಲ್ಲ ಆಟಗಾರರು ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡುವುದನ್ನು ಕಡ್ಡಾಯಗೊಳಿಸಲಾಗಿದೆ. ಬಾರ್ಡರ್-ಗಾವಸ್ಕರ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಕೋಚ್ ಗೌತಮ್ ಗಂಭೀರ್ ಕೂಡ ಈ ಬಗ್ಗೆ ಸ್ಪಷ್ಟ ಸೂಚನೆ ರವಾನಿಸಿದ್ದರು.
ಭಾರತ ಟಿ20 ತಂಡಕ್ಕೆ ಹೊಸ ಉಪನಾಯಕನ ನೇಮಕ; ಗಿಲ್, ಜೈಸ್ವಾಲ್, ಪಂತ್ಗೆ ವಿಶ್ರಾಂತಿ